ಬಿಜೆಪಿ ಶಾಸಕ ಸಿ.ಸಿ.ಪಾಟೀಲ್- ಸಚಿವ ಎಚ್‌.ಕೆ. ಪಾಟೀಲ ರಾಜಕೀಯ ಹೊಂದಾಣಿಕೆ

KannadaprabhaNewsNetwork |  
Published : Nov 02, 2025, 03:30 AM IST
(1ಎನ್.ಆರ್.ಡಿ4 ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಬಿ.ಆರ್.ಯಾವಗಲ್ ಮಾತನಾಡುತ್ತಿದ್ದಾರೆ.)                | Kannada Prabha

ಸಾರಾಂಶ

ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿರೋಧ ಪಕ್ಷದವರ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದರಿಂದ ಕಾಂಗ್ರೆಸ್‌ ಸಂಘಟನೆಗೆ ಕಷ್ಟವಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಆರೋಪಿಸಿದ್ದಾರೆ.

ನರಗುಂದ: ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ವಿರೋಧ ಪಕ್ಷವಾದ ಬಜೆಪಿ ಶಾಸಕ ಸಿ.ಸಿ.ಪಾಟೀಲ್‌ ಅವರ ಜತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದರಿಂದ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆಗೆ ಕಷ್ಟವಾಗುತ್ತಿದೆ ಎಂದು ಮಾಜಿ ಶಾಸಕ, ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಆರ್. ಯಾವಗಲ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಎಚ್‌.ಕೆ.ಪಾಟೀಲರ ಹೊಂದಾಣಿಕೆ ರಾಜಕಾರಣದಿಂದ ನಿಷ್ಠಾವಂತ ಕಾರ್ಯಕರ್ತರು ಕಾಂಗ್ರೆಸ್‌ ಬಿಟ್ಟುಹೋಗುವ ಹಂತಕ್ಕೆ ಬಂದಿದ್ದಾರೆ. ನರಗುಂದ ಶಾಸಕರು ಹಾಗೂ ನಾನು ಆತ್ಮೀಯರು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗವಾಗಿ ಹೇಳಿದ್ದಾರೆ. ಅದರಿಂದ ಕ್ಷೇತ್ರದಲ್ಲಿ ನಾವು ಕಾಂಗ್ರೆಸ್‌ ಸಂಘಟನೆ ಮಾಡಲು ಹಿನ್ನಡೆಯಾಗಿದೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರು ಈ ಕ್ಷೇತ್ರಕ್ಕೆ ಬರುವಾಗ ಸೌಜನ್ಯಕ್ಕೂ ನನಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.

ನಾನು ಕೂಡ 5 ಬಾರಿ ಶಾಸಕನಾಗಿ, ಸಚಿವನಾಗಿ, ವಿಧಾನಸಭೆ ಉಪಸ್ಪೀಕರ್‌ ಆಗಿ ಕೆಲಸ ಮಾಡಿದ್ದೇನೆ. ಇಲ್ಲಿಯವರಗೆ ನಾನು ಯಾರ ಬಗ್ಗೆಯೂ ದೂರು ಸಲ್ಲಿಸಿಲ್ಲ. ಈಗ ತಾಳ್ಮೆ ಮೀರಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ವಿರೋಧ ಪಕ್ಷದವರ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ದೂರ ನೀಡಲಾಗುವುದು. ರಾಜ್ಯ ಕಾಂಗ್ರೆಸ್‌ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಬಿಡುವ ಸ್ಥಿತಿ ಬರಬಹುದು ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್‌ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಪುರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ, ಅನುದಾನ ತಂದು ಕಾಮಗಾರಿ ಆರಂಭಿಸಲಾಗಿತ್ತು. ಅಂದು ಈ ಕಾರ್ಯವನ್ನು ವಿರೋಧಿಸಿದ್ದ ಉಸ್ತುವಾರಿ ಸಚಿವರು ಈಗ ನಾನೇ ಅನುದಾನ ತಂದು ಪುರಸಭೆ ಕಟ್ಟಡ ನಿರ್ಮಿಸಿದ್ದೇನೆ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಯಾವಗಲ್ಲ ಹೇಳಿದರು.

ಯಾವುದೇ ಕಾಮಗಾರಿ ಮುಗಿದ ಮೇಲೆ ಉದ್ಘಾಟನೆ ಮಾಡುತ್ತಾರೆ. ಆದರೆ ಸ್ಥಳೀಯ ಶಾಸಕರು ಪುರಸಭೆ ಮತ್ತು ಸಂತೆ ಮಾರುಕಟ್ಟೆ ಕಟ್ಟಡ ಕಾಮಗಾರಿ ಮುಗಿಯದೇ ಉದ್ಘಾಟಿಸಿದ್ದಾರೆ. ಇದು ಈ ಕ್ಷೇತ್ರದ ಜನರ ದೌರ್ಬಲ್ಯ ಎನ್ನಬಹುದು. ಈ ಕ್ಷೇತ್ರದ ಶಾಸಕರು ಆರ್.ಎಸ್.ಎಸ್. ವಿಚಾರವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವ ಮೊದಲು, ತಮ್ಮ ಹಿಂದಿನ ಇತಿಹಾಸ ಅರಿತುಕೊಳ್ಳಬೇಕು ಎಂದು ಹೇಳಿದರು.

ನವೆಂಬರ್‌ ಕ್ರಾಂತಿಯ ಬಗ್ಗೆ ಕೇಳಿದಾಗ, ಆ ಬಗ್ಗೆ ಹೈಕಮಾಂಡರ್‌ನವರು ನಿರ್ಣಯ ತೆಗೆದುಕೊಳ್ಳತ್ತಾರೆ ಎಂದು ಹೇಳಿದರು.

ಗುರುಪಾದಪ್ಪ ಕುರಹಟ್ಟಿ, ಪ್ರವೀಣ ಯಾವಗಲ್, ಟಿ.ಬಿ. ಶಿರಿಯಪ್ಪಗೌಡ್ರ, ಅಪ್ಪಣ್ಣ ನಾಯ್ಕರ, ಎಂ.ಎಸ್. ಪಾಟೀಲ, ಅಂಬರೇಶ ಕೋಟಿ, ಸಿ.ಬಿ. ಪಾಟೀಲ, ಮಲ್ಲೇಶ ಅಬ್ಬಗೇರಿ, ನಾಗನೂರ, ಹನುಮಂತ ರಾಮಣ್ಣವರ, ಪ್ರಕಾಶ ಹಡಗಲಿ, ವಿಷ್ಣು ಸಾಠೆ ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ