ನವದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಂದೇ ಮಾತರಂ ಗೀತೆಗೆ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಮಾನಿಸಿದ್ದಾರೆಂದು ಆರೋಪಿಸಿ ನಗರದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಪ್ರತಿಭಟಿಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನವದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಂದೇ ಮಾತರಂ ಗೀತೆಗೆ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಮಾನಿಸಿದ್ದಾರೆಂದು ಆರೋಪಿಸಿ ನಗರದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಪ್ರತಿಭಟಿಸಲಾಯಿತು.
ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಯುವ ಮೋರ್ಚಾ ಅಧ್ಯಕ್ಷ ರಾಕೇಶ ಬಜರಂಗಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಶ್ರೀ ಜಯದೇವ ವೃತ್ತದವರೆಗೂ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗುತ್ತಾ ಬಂದ ಪ್ರತಿಭಟನಾಕಾರರು ನಂತರ ಎಐಸಿಸಿ ನಾಯಕರ ಭಾವಚಿತ್ರಗಳನ್ನು ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾಕೇಶ ಬಜರಂಗಿ, ನವದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಆ.15ರಂದು ಸ್ವಾತಂತ್ರ್ಯ ದಿನಾಚರಣೆ ವೇಳೆ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ವಂತೇ ಮಾತರಂ ಗೀತೆ ಹಾಡುವ ವೇಳೆ ಅವಮಾನಿಸಿದ್ದು ಅಕ್ಷಮ್ಯ. ವಂದೇ ಮಾತರಂ ಹಾಡುತ್ತಿದ್ದವರಿಗೆ ಹಾಡುವುದನ್ನು ನಿಲ್ಲಿಸುವಂತೆ ಹೇಳುವ ಮೂಲಕ ವಂದೇ ಮಾತರಂ ಗೀತೆಗೆ ಅವಮಾನಿಸಲಾಗಿದೆ ಎಂದು ಆರೋಪಿಸಿದರು.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಂದೇ ಮಾತರಂ ಗೀತೆಯನ್ನು ಅವಮಾನಿಸುವ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್ಸಿನ ನಾಯಕರು ಅವಮಾನ ಮಾಡಿದ್ದಾರೆ. 1870ರಲ್ಲಿ ಬಂಕಿಮ ಚಂದ್ರ ಚಟರ್ಜಿ ರಚಿಸಿದ್ದ ವಂದೇ ಮಾತರಂ ಗೀತೆಯ ಮಹತ್ವ, ಹಿನ್ನೆಲೆ, ಇತಿಹಾಸವನ್ನೇ ಅರಿಯದ ಇಂತಹ ಕಾಂಗ್ರೆಸ್ ನಾಯಕರು ಆ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವ ಮೂಲಕ ದೇಶದ ಜನರ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಯಕೊಂಡ ಜಿ.ಎಸ್.ಶ್ಯಾಮ, ಮಾತನಾಡಿ, ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇಂತಹ ವರ್ತನೆ ಕಾಂಗ್ರೆಸ್ಸಿನ ಮನಸ್ಥಿತಿ ದೇಶದ ಬಗ್ಗೆ, ದೇಶಭಕ್ತಿ ಸಾರುವ ಗೀತೆ ಬಗ್ಗೆ ಹೇಗಿದೆಯೆಂಬುದನ್ನು ತೋರಿಸಿದೆ. ಲೋಕಸಭೆ ಅಧಿವೇಶನದಲ್ಲೂ ಕಾಂಗ್ರೆಸ್ ಪಕ್ಷವು ಹೇಗೆ ವರ್ತಿಸಿದೆ, ಸದನದ ಹೊರಗೆ ಈಗ ವಂದೇ ಮಾತರಂ ಗೀತೆಗೂ ಅವಮಾನಿಸುವ ಮೂಲಕ ತನ್ನ ದುರ್ವರ್ತನೆ ಮುಂದುವರಿಸಿದೆ ಎಂದರು.
ಹಿರಿಯ ಮುಖಂಡ ಮಾಯಕೊಂಡ ಆಲೂರು ನಿಂಗರಾಜ ಮಾತನಾಡಿ, ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ವಂದೇ ಮಾತರಂ ಗೀತೆ ಹಾಡುತ್ತಿದ್ದ ವೇಳೆ ಕಾಂಗ್ರೆಸ್ಸಿನ ನಾಯಕರು ಹೇಗೆ. ದೇಶಪ್ರೇಮ ಹೊಂದಿದ್ದಾರೆಂಬುದನ್ನು ಜಗತ್ತಿಗೆ ತೋರಿಸಿದ್ದಾರೆ ಎಂರಿದರು.
ಪಕ್ಷದ ಮುಖಂಡರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಅನಿಲಕುಮಾರ ನಾಯ್ಕ, ಎಚ್.ಪಿ.ವಿಶ್ವಾಸ, ಗೌತಮ್ ಜೈನ್, ರಾಜು ಎಂ.ಸೊಪ್ಪಿನ್, ಕಿರಣ, ಮಹಾಂತೇಶ, ಸಚಿನ್, ಯುವರಾಜ, ರಘು, ದರ್ಶನ್ ಪವರ್, ಶಾಮನೂರು ಹರೀಶಷ ಮಧು, ಶ್ರೀನಾಥ, ಚೇತನ ಶಿವಕುಮಾರ, ಮಮತಾ, ಗಾಯತ್ರಿ, ಕರಿಬಸಪ್ಪ ಮಟ್ಟಿಕಲ್ಲು, ಸಂತೋಷ ಪೈಲ್ವಾನ್, ರಾಜು ನೀಲಗುಂದ ಗುರುರಾಜ ಅಡಿವೆಪ್ಪ, ಕಾಯಿಪೇಟೆ ಮಂಜು, ಶೇಖರ, ಬೆಳ್ಳೂಡಿ ಮಂಜುನಾಥ, ಹಾಲೇಶ, ಹರೀಶ, ಪ್ರಶಾಂತ, ಕೆಟಿಜೆ ನಗರ ಎಂ.ಆನಂದ, ಕೆಟಿಜೆ ನಗರ ಲೋಕೇಶ, ನಿಂಗರಾಜ ರೆಡ್ಡಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.