ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ: ಶಾಸಕ ಗೋವಿಂದಪ್ಪ

KannadaprabhaNewsNetwork | Published : Jan 10, 2024 1:46 AM

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ಪ್ರಶ್ನಿಸುತ್ತಾರೆ. ಹಾಗಾದರೇರೆ, ದೇಶದಲ್ಲಿ 9 ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸಾಧನೆ ಏನು? ಶ್ರೀಮಂತರ ಪರ ಆಡಳಿತ ನಡೆಸಿದ್ದೇ ಇವರ ದೊಡ್ಡ ಸಾಧನೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಬಿಜೆಪಿ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ 138 ವರ್ಷಗಳ ಕಾಲ ದೇಶದ ಹಿತಕ್ಕಾಗಿ ದುಡಿದವರು ಕಾಂಗ್ರೆಸ್ ಪಕ್ಷದವರು. ಸ್ವಾತಂತ್ರ್ಯಾನಂತರ ವಸತಿ, ಶಿಕ್ಷಣ, ಆರೋಗ್ಯ, ನೀರಾವರಿ, ಆಹಾರ ಭದ್ರತೆ ಮುಂತಾದ ಸವಲತ್ತುಗಳನ್ನು ಒದಗಿಸಿ ದೇಶಕ್ಕೆ ಭದ್ರ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಪಕ್ಷ. ಈ ಎಲ್ಲಾ ಸವಲತ್ತುಗಳನ್ನು ಅನುಭವಿಸಿದವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ಪ್ರಶ್ನಿಸುತ್ತಾರೆ. ಹಾಗಾದರೇರೆ, ದೇಶದಲ್ಲಿ 9 ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸಾಧನೆ ಏನು? ಶ್ರೀಮಂತರ ಪರ ಆಡಳಿತ ನಡೆಸಿದ್ದೇ ಇವರ ದೊಡ್ಡ ಸಾಧನೆನಾ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಬಿಜೆಪಿ ವಿರುದ್ದ ಹರಿಹಾಯ್ದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಯುವ ಸಹಾಯ ಹಸ್ತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಾವೆಲ್ಲರೂ ರಾಮನವಮಿ ಆಚರಿಸುತ್ತೇವೆ. ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಆದರೆ ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡವರಲ್ಲ ಎಂದು ವಾಗ್ದಾಳಿ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಯು ನಮಗೆಲ್ಲಾ ದೊಡ್ಡ ಸವಲಾಗಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ವೀರ ಸೇನಾನಿ ಮಾದರಿಯಲ್ಲಿ ಹೋರಾಟ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಂತ ಹೆಚ್ಚು ಮತಗಳನ್ನು ಹಾಕಿಸಬೇಕು. ಹಸಿ ಸುಳ್ಳು ಹೇಳುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವನ್ನು ರಾಷ್ಟದ ಜನರು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಬಿಜೆಪಿ ದುರಾಡಳಿ ತದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ ಮಾತನಾಡಿ, ಪದವೀಧರರಿಗೆ 3 ಸಾವಿರ ರೂಪಾಯಿ ಮತ್ತು ಡಿಪ್ಲೋಮಾ ಮಾಡಿದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 1500 ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಪ್ರಧಾನ ಕಾರ್ಯದರ್ಶಿ ವೈಶಾಕ್, ಹೊಸದುರ್ಗ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹೇರೂರು ಯಶವಂತ್, ಶ್ರೀರಾಂಪುರ ಬ್ಲಾಕ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಿಕಾ, ಯುವ ಮುಖಂಡರಾದ ಬಿ.ಜಿ.ಅರುಣ್ ಗೋವಿಂದಪ್ಪ, ಶರತ್ ದುಷ್ಯಂತ್, ಸಣ್ಣಕಿಟ್ಟದಹಳ್ಳಿ ಶ್ರೀನಿವಾಸ್ ಮತ್ತಿತರಿದ್ದರು. ರಾಮನ ಜಪ ಮಾಡುವ ಬಿಜೆಪಿಗೆ ಆತ್ಮಶುದ್ಧಿ ಇಲ್ಲ

ಶ್ರೀರಾಮಚಂದ್ರನು ತನ್ನ ರಾಜ್ಯದ ಪ್ರಜೆಗಳೆಲ್ಲರೂ ಪ್ರೀತಿ, ವಾತ್ಸಲ್ಯದಿಂದ ಕ್ಷೇಮವಾಗಿರಬೇಕೆಂದು ಬಯಸಿ ಆಡಳಿತ ನೀಡಿದ್ದ. ಗೂಢಚಾರಿಗಳನ್ನು ಬಿಟ್ಟು ತನ್ನ ಆಡಳಿತದ ವೈಖರಿ ಕುರಿತು ತಿಳಿದುಕೊಳ್ಳುತ್ತಿದ್ದ. ಆದರೆ ರಾಮನ ಜಪ ಮಾಡುವ ಬಿಜೆಪಿಗರು ಕೇಂದ್ರದ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ವಿನಾಕಾರಣ ದಾಳಿ ನಡೆಸುತ್ತಿದ್ದಾರೆ. ರಾಮನ ಆಚರಣೆ ಮಾಡುವವರಿಗೆ ಆತ್ಮಶುದ್ಧಿ ಇರಬೇಕು ಎಂದು ಶಾಸಕ ಗೋವಿಂದಪ್ಪ ವಾಗ್ದಾಳಿ ನಡೆಸಿದರು.