ಬಾಣಂತಿಯರ ಸರಣಿ ಸಾವು ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Jan 4, 2025 12:31 AM

ಸಾರಾಂಶ

ಬಡ ಜನರೇ ಹೆಚ್ಚು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಾರೆ. ಆದರೆ ಅಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿ ಮೆಡಿಕಲ್ ಸೌಲಭ್ಯಗಳಿರುವುದಿಲ್ಲ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಣಂತಿಯರ ಸರಣಿ ಸಾವಿನ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಬಾಣಂತಿಯರ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆಗ್ರಹಿಸಿದರು.

ನಗರದ ಬಸವೇಶ್ಚರ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಬಾಣಂತಿಯರ ಸರಣಿ ಸಾವು ಕುರಿತು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡ ಜನರೇ ಹೆಚ್ಚು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಾರೆ. ಆದರೆ ಅಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿ ಮೆಡಿಕಲ್ ಸೌಲಭ್ಯಗಳಿರುವುದಿಲ್ಲ. ಸೌಲಭ್ಯ ವಂಚಿತ ತಾಯಂದಿರಿಗೆ ಸಕಾಲಕ್ಕೆ ವೈದ್ಯಕೀಯ ಉಪಲಬ್ಧತೆ ಸಿಗದಿರುವ ಕಾರಣ ಅತಿ ಹೆಚ್ಚು ಬಾಣಂತಿಯರ ಸಾವು ಕರ್ನಾಟಕದಲ್ಲಿ ಕಾಣುತ್ತಿದ್ದೇವೆ. ಈ ಹಿಂದೆ ಎಂದು ಈ ರೀತಿ ಸಾವುಗಳನ್ನು ಕಂಡಿದ್ದಿಲ್ಲ. ಸರಕಾರ ಇದರ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳದ ಕಾರಣ ಇಂದು ಅನಿವಾರ್ಯವಾಗಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಪ್ರತಿಭಟಣೆ ಮಾಡುತ್ತಿದೆ. ಕೂಡಲೇ ಬಾಣಂತಿಯರ ಸಾವಿಗಿ ಸರಕಾರ ನೈತಿಕ ಹೋಣೆ ಹೊತ್ತು ಆರೋಗ್ಯ ಮಂತ್ರಿ ಕೂಡಲೆ ರಾಜೀಮನಾಮೆ ನೀಡಬೇಕು. ಮುಂದೆ ಬಾಣಂತಿಯರ ಸುರಕ್ಷತೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದ್ದರೂ ಕಾಂಗ್ರೆಸ್‌ ಸರ್ಕಾರ ಮಾತ್ರ ಇನ್ನೂ ನಿದ್ರೆಯಿಂದ ಎಚ್ಚರವಾಗಿಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಗಳು ಶವಾಗಾರವಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಆಗ್ರಹಿಸಿದರು.

ಇದಕ್ಕೂ ಮುಂಚೆ ಬಿಜೆಪಿ ಕಾರ್ಯಾಲಯದಿಂದ ಬಸವೇಶ್ವರ ವೃತ್ತದ ವರೆಗೂ ಪಾದಯಾತ್ರೆ ಮೂಲಕ ಆಗಮಿಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಸಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟಣೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಸುಮೇದಾ ಮಾನೆ, ಭಾಗ್ಯಾ ಹುದ್ನೂರ, ವೈಷ್ಣವಿ, ಬಾಗೇವಾಡಿ, ಸುಜಾತಾ ಶಿಂದೆ, ಭಾಗಿರತಿ ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೇನ್ನವರ, ಕಾವೇರಿ ರಾಥೋಡ, ಗೀತಾ ಸೂರ್ಯವಂಶಿ, ಶಶಿಕಲಾ ಮಜ್ಜಗಿ, ಪಾರ್ವತಿ ಹುಗ್ಗಿ, ಸಾವಿತ್ರಿ ಜೋಗುರ, ಶಿವಲೀಲಾ ಪಟ್ಟಣಶೆಟ್ಟಿ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ನಾಯ್ಕರ, ಸತ್ಯನಾರಾಯಣ ಹೆಮಾದ್ರಿ, ಸುರೇಶ ಕೋಣ್ಣುರ, ಗುಂಡುರಾವ ಶಿಂದೆ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಸೇರಿ ಅನೇಕರಿದ್ದರು.

Share this article