ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಕೊಡುಗೆ ಇಲ್ಲ: ಸಿದ್ದರಾಮಯ್ಯ

KannadaprabhaNewsNetwork |  
Published : Sep 06, 2026, 01:30 AM IST
5 ಬೀರೂರು1ಬೀರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ಕುರುಬ ಸಮಾಜದಿಂದ ನಿರ್ಮಾಣಗೊಂಡಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪುತ್ತಳಿಯನ್ನು ಶನಿವಾರ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಉದ್ಘಾಟಿದರು. ಸಚಿವ ಭೈರತಿ ಸುರೇಶ್ ಶಾಸಕ ಕೆ.ಎಸ್.ಆನಂದ್ , ಕುರುಬ ಸಮಾಜದ ಮುಖಂಡರು ಸೇರಿದಂತೆ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರುಕಾಂಗ್ರೆಸ್ ನಾಯಕರ ಹೋರಾಟ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಯಾವುದೇ ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಭಾಗವಹಿಸಿದವರ ಹೇಸರೇನಾದರು ಇದ್ದರೆ ಹೇಳಿ ಎಂದು ಸಭೀಕರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೀರೂರಲ್ಲಿ ಸಂಗೊಳ್ಳಿರಾಯಣ್ಣ-ಕನಕದಾಸರ ಪುತ್ಥಳಿ ಅನಾವರಣ । ಕೆ.ಎಲ್.ಕೆ.ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೀರೂರುಕಾಂಗ್ರೆಸ್ ನಾಯಕರ ಹೋರಾಟ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಯಾವುದೇ ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಭಾಗವಹಿಸಿದವರ ಹೇಸರೇನಾದರು ಇದ್ದರೆ ಹೇಳಿ ಎಂದು ಸಭೀಕರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೀರೂರು ಪಟ್ಟಣದಲ್ಲಿ ಶನಿವಾರ ಸಂಗೊಳ್ಳಿರಾಯಣ್ಣ ಮತ್ತು ದಾಸಶ್ರೇಷ್ಠ ಕನಕದಾಸರ ಪ್ರತಿಮೆಗಳನ್ನು ಅನಾವರಣಗೊಳಿಸಿ ಬಳಿಕ ಕೆ.ಎಲ್.ಕೆ.ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರಸ್‌ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದರು.ಈ ಹಿಂದೆ ನಾನೊಂದು ದೇವಸ್ಥಾನಕ್ಕೆ ಹೋದ ವೇಳೆ ಕೆಲ ಯುವಕರು ಮೋದಿ..ಮೋದಿ.. ಎಂದು ಕೂಗಿದರು. ಮೋದಿ ಯುವಕರಿಗಾಗಿ ಏನು ಮಾಡಿದ್ದಾರೆ?. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿ ಯುವಕರಿಗೆ ನೀಡುತ್ತೇವೆ ಎಂದು ಹೇಳಿದ್ದರು. ನೀಡಿದ್ದಾರಾ?, ಎಲ್ಲಾ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಮಾಡಿದ್ದಾರಾ?, ದೇಶಕ್ಕೆ ಅಚ್ಚೆದಿನ ಬಂದಿದೆಯಾ. ಹಾಗಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಯುವಕರು ಯಾಕೆ ಮೋದಿಗೆ ಮತ ಹಾಕಬೇಕು ಎಂದರು.ದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ತಲಾ ₹15 ಲಕ್ಷ ಹಾಕ್ತೀನಿ ಅಂತ ಹೇಳಿದ್ದರು. ಯಾಕೆ ಹಾಕಿಲ್ಲ. ಮೋದಿ ಪ್ರಧಾನಿಯಾಗಿ 12ವರ್ಷ ಆಯ್ತು, ಇವೆಲ್ಲವನ್ನು ನೀಡದೇ ಯುವಕ ರನ್ನು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ದೇಶದ ಯುವಕರು ಅರ್ಥ ಮಾಡಿ ಕೊಳ್ಳಬೇಕು ಎಂದರು.ಮುಖ್ಯಮಂತ್ರಿಯಾಗಿದ್ದಾಗ ಜನರಿಗಾಗಿ ಮಾಡಿದ ಸಾಧನೆಗಳನ್ನು ಹೇಳುತ್ತೇನೆ. ಬಿಜೆಪಿಗರು ಅವರು ಮಾಡಿದ ಸಾಧನೆ ಹೇಳಲಿ ಎಂದು ಬಹಿರಂಗ ಸವಾಲು ಹಾಕಿದರು.ಜಿಲ್ಲೆಯಲ್ಲಿದ್ದ ಬಿಜೆಪಿ ಶಾಸಕರು ಅವರ ಅವಧಿಯಲ್ಲಿ ಏನು ಮಾಡಿದ್ದಾರೆಂಬುದನ್ನು ಬಹಿರಂಗಪಡಿಸಲಿ. ಶಾಸಕ ಆನಂದ್ ಕಡೂರು ಕ್ಷೇತ್ರದ ಜನ ಆರಿಸಿದಕ್ಕಾಗಿ ಕಳೆದ 3ವರ್ಷಗಳಲ್ಲಿ ಕ್ಷೇತ್ರದ ಆಬಿವೃದ್ದಿಗೆ ₹1,300 ಕೋಟಿ ಹಣ ತಂದು ಕೆಲಸ ಮಾಡಿದ್ದಾರೆ. ನನ್ನ ಸಹಕಾವೂ ಇದೆ. ಹಾಗೇಯೆ ನಿಮ್ಮ ಸಹಕಾರವನ್ನು ಮುಂದಿನ ಚುನಾವಣೆಯಲ್ಲಿ ಕೊಡಿ ಎಂದರು.ನನಗೆ ಜಾತಿ ಇಲ್ಲ: ಸಿದ್ದರಾಮಯ್ಯಕುರುಬ ಜಾತಿಯಲ್ಲಿ ಹುಟ್ಟಿದ್ದೇನಷ್ಟೆ. ಅದರ ಹೊರತಾಗಿ ನನಗೆ ಜಾತಿ ಇಲ್ಲ. ಎಲ್ಲಾ ಬಡವರು ವಿದ್ಯಾವಂತ ರಾಗುವ ಜೊತೆಗೆ ಎಲ್ಲರಿಗೂ ಸರ್ಕಾರಿ ಕೆಲಸ ಸಿಕ್ಕಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ. ಅದನ್ನೆ ಕನಕದಾಸರು ಬಯಸಿದ್ದು ಎಂದು ಹೇಳಿದರು.ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮಹಾನ್ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪ್ರೇಮಿ, ಬಹಳ ನಿಯತ್ತಿನ ಮನುಷ್ಯ. ಕಿತ್ತೂರಾಣಿ ಚೆನ್ನಮ್ಮನ ಬಂಟ. ಅವರಿಗೆ ಇರುವಂತ ದೇಶ ಪ್ರೇಮ ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಗೊಳ್ಳಿಗೆ 125 ಎಕರೆ ಜಮೀನು ಮಂಜೂರು ಮಾಡಿ, ಅಲ್ಲಿ ಬಡವರಿಗೆ ಅನುಕೂಲವಾಗುವಂತೆ ಸೈನಿಕ ಶಾಲೆ ಸ್ಥಾಪಿಸಿ, ಪ್ರೇಕ್ಷಣಿಯ ಸ್ಥಳವನ್ನಾಗಿಸಿದ್ದೇನೆ. ಸಂಗೊಳ್ಳಿರಾಯಣ್ಣನ ಹೋರಾಟದ ಕಿಚ್ಚು ಯುವಕರಲ್ಲಿ ಮೂಡಬೇಕು. ಅವರ ಸ್ಫೂರ್ತಿ ಇಂದಿನ ಜನಾಂಗಕ್ಕೆ ಮಾದರಿ ಎಂದರು.ಕನಕದಾಸ ಪುತ್ಥಳಿ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್ ಈ ಹಿಂದೆ ಇದ್ದ ಶಾಸಕರು ಕ್ಷೇತ್ರದ ಕೆರೆ ತುಂಬಿಸಿ ಎಂದರೆ ಅವರ ಮನೆ ತುಂಬಿಸುವ ವ್ಯಕ್ತಿಗೆ ತಿಲಾಂಜಲಿ ಹಾಡಿ ರೈತನ ಮಗ ಆನಂದ್ ರನ್ನು ಗೆಲ್ಲಿಸಿ ಕ್ಷೇತ್ರದ ಜನತೆ ಉತ್ತಮ ನಿರ್ಧಾರ ತೆಗೆದುಕೊಂಡ ಪರಿಣಾಮ ರಾಜ್ಯ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದು ಕ್ಷೇತ್ರದಲ್ಲಿ ಉತ್ತಮ ಕಾಮಗಾರಿ ಆನಂದ್‌ ಮಾಡಿದ್ದಾರೆಂದು ಶ್ಲಾಘಿಸಿದರು,ಸಿದ್ದರಾಮಯ್ಯ ರಾಜ್ಯದಲ್ಲಿ ದೀರ್ಘ ಮುಖ್ಯಮಂತ್ರಿಯಾಗಿ, 136 ಶಾಸಕರ ಬೆಂಬಲದಿಂದ 2 ಬಾರಿ ರಾಜ್ಯದ ಆಡಳಿತ ನಡೆಸಿರುವ ಜೊತೆ ಒಂದು ಕಪ್ಪು ಚುಕ್ಕೆ ಎಳೆದುಕೊಳ್ಳದೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ. ಅವರು ಕುರುಬ ಜನಾಂಗದಲ್ಲಿ ಜನಿಸಿರುವುದು ನಮ್ಮ ನಿಮ್ಮೆಲ್ಲ್ಮರಿಗೆ ಹೆಮ್ಮೆಯ ವಿಚಾರ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 2028 ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಗಾಯತ್ರಿ ಶಾಂತೇಗೌಡ, ಕುರುಬ ಸಮಾಜದ ಅಧ್ಯಕ್ಷ ಎಸ್.ಎಚ್.ತಿಮ್ಮಯ್ಯ, ಬೀರೂರು ದೇವರಾಜ್, ಕಡೂರು ಕುರುಬ ಸಂಘದ ಅಧ್ಯಕ್ಷ ಭೋಗಪ್ಪ, ಸಿಡಿಎ ಅಧ್ಯಕ್ಷ ಮಂಜೇಗೌಡ, ಎ,ಎನ್, ಮಹೇಶ್, ಜಿ.ಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ತೋಟಪ್ಪ, ಸೇರಿದಂತೆ ಕುರುಬ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.-- ಬಾಕ್ಸ್‌--2028ಕ್ಕೆ ಆನಂದ್‌ ಪರ ಪ್ರಚಾರ: ಸಿದ್ದುಮುಂದಿನ 2028ರ ಚುನಾವಣೆಗೆ ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡುವ ಜೊತೆ ಆನಂದ್ ಪರವಾಗಿ ಕಡೂರಿನಲ್ಲಿ ವಿಧಾನಸಭಾ ಚುನಾವಣೆಗೂ ಪ್ರಚಾರಕ್ಕೆ ಬಂದೇ ಬರುತ್ತೇನೆ. ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಸಿದ್ದರಾಮಯ್ಯ ಹೇಳಿದರು.---ಬಾಕ್ಸ್‌--ಶೀಘ್ರದಲ್ಲಿ ಅಂಬೇಡ್ಕರ್‌, ಬಸವಣ್ಣ ಪ್ರತಿಮೆ: ಕೆ.ಎಸ್‌.ಆನಂದ್‌ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಬೀರೂರು ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸರ ಪುತ್ಥಳಿಗಳನ್ನು ಅನಾವರಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್, ಬಸವಣ್ಣ ಸೇರಿದಂತೆ ಮತ್ತಿತರ ಮಹನೀಯರ ಪುತ್ಥಳಿ ಅನಾವರಣ ಮಾಡಲಾಗುವುದು ಎಂದರು.ಕ್ಷೇತ್ರದ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಭದ್ರಾ ಉಪ ಕಣಿವೆ ಹಾಗು ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಮಹತ್ ಕಾರ್ಯ ಶೀಘ್ರದಲ್ಲಿ ನಡೆಯ ಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

--

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಸಿದ್ದು

ಬೀರೂರು: ಶಾಸಕ ಸ್ಥಾನದ ಅವಧಿ ಇನ್ನೆರಡು ವರ್ಷವಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ನನಗೀಗ 79 ವರ್ಷ ತುಂಬಿದ್ದು, ಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು, ಕಾಂಗೆಸ್ ಹೈಕಮಾಂಡ್‌ನ ರಾಹುಲ್ ಗಾಂಧಿಯವರಿಗೆ ಕೊಟ್ಟ ಮಾತಿನಂತೆ ನಡೆದು ಕೊಂಡು ರಾಜೀನಾಮೆ ನೀಡಿದ್ದೇನೆ. ಕೊಟ್ಟ ಮಾತಿನಂತೆ ನಡೆದ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯನವರು ಸರ್ಕಾರ, 17 ಬಜೆಟ್ ಮಂಡಿಸಿದ್ದೇನೆ. ರಾಜ್ಯದಲ್ಲಿ ಇಷ್ಟು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಾರು ಇಲ್ಲ ದೇವರಾಜ ಅರಸು ರವರಿಗಿಂತ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ ಎಂದರು.

ಸಿ.ಟಿ.ರವಿ ಕುರಿತು ಸಿದ್ದರಾಮಯ್ಯ ವ್ಯಂಗ್ಯ

“ತಮ್ಮಯ್ಯಾ... ಯಾರಯ್ಯಾ... ನಿನ್ನ ಮೇಲೆ ಸೋತದ್ದು ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಮಾಜಿ ಸಚಿವ ಸಿ.ಟಿ.ರವಿ ಕುರಿತು ವ್ಯಂಗ್ಯವಾಡಿದ ಪ್ರಸಂಗ ನಡೆಯಿತು.ಬೀರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಅವರು ಇತ್ತೀಚೆಗೆ ತಮ್ಮ ವಿರುದ್ಧ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು.

ನಮ್ಮ ಕಡೆ ಅವನನ್ನು ‘ಲೂಟಿ ರವಿ’ ಎಂದು ಕರೆಯುತ್ತಾರೆ ಎಂದರು.ಗೃಹಲಕ್ಷ್ಮಿ ಯೋಜನೆ ನೀಡಲಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಸಿ.ಟಿ.ರವಿ ಹೇಳಿದ್ದನಂತೆ ಎಂದರು.ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದರಿಂದ ಕೊಟ್ಟ ಮಾತಿ ನಂತೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಬಹಳಷ್ಟು ಜನರು ನನಗೆ ‘ಕೊಡಬೇಡಿ ಸರ್’ ಎಂದು ಸಲಹೆ ನೀಡಿದ್ದರು. ಆದರೆ, ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ರಾಜಕೀಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ಹೇಳಿದರು.

5 ಬೀರೂರು4

ಬೀರೂರಿನ ಪಟ್ಟಣದಲ್ಲಿ ಶನಿವಾರ ಕೆ.ಎಲ್.ಕೆ.ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಲ್ಲಿ ಡಾ.ರಾಧಕೃಷ್ಣ ನ್ ರವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶಾಸಕ ಕೆ.ಎಸ್.ಆನಂದ್ ಸೇರಿದಂತೆ ಮತ್ತಿತರಿದ್ದರು.

5 ಬೀರೂರು5

ಬೀರೂರಿನ ಪಟ್ಟಣದಲ್ಲಿ ಸಂಗೊಳ್ಳಿರಾಯಣ್ಣ ಮತ್ತು ದಾಸಶ್ರೇಷ್ಠ ಕನಕದಾಸರ ಪತ್ತಳಿ ಅನಾವರಣಗೊಳಿಸಿ ಕೆ.ಎಲ್.ಕೆ.ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಒಬ್ಬರ ರಕ್ತದಾನದಿಂದ ಮೂವರಿಗೆ ಜೀವದಾನ: ಡಾ.ಆನಂದ್‌