ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ನಾಗರಿಕರ ನೀಡುವ ಶಿಕ್ಷಕರ ಶ್ರಮ ಅನನ್ಯ: ಕೆ.ಜೆ.ಜಾರ್ಜ್

KannadaprabhaNewsNetwork |  
Published : Sep 06, 2026, 01:30 AM IST
ನರಸಿಂಹರಾಜಪುರ  ಎಲ್.ಎಫ್.ಚರ್ಚ್ ಸಭಾಂಗಣದಲ್ಲಿ ನಡೆದ  ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶಕ್ಕೆ, ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ ನೀಡುವ ಶಿಕ್ಷಕರ ಶ್ರಮ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ । 24 ಉತ್ತಮ ಶಿಕ್ಷಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶಕ್ಕೆ, ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ ನೀಡುವ ಶಿಕ್ಷಕರ ಶ್ರಮ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಶನಿವಾರ ಎಲ್.ಎಫ್.ಚರ್ಚ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಂದೆ, ತಾಯಿ, ಶಿಕ್ಷಕರಿಗೆ ಗೌರವ ನೀಡಬೇಕು. ನಮ್ಮ ರಾಜ್ಯ ದೇಶದಲ್ಲಿ 5 ನೇ ಸ್ಥಾನಕ್ಕೆ ಬರಲು ಶಿಕ್ಷಕರ ಪಾತ್ರವೂ ಪ್ರಮುಖವಾಗಿದೆ. ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮ ದಿನವನ್ನು ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿ ಶಿಕ್ಷಕರಿಗೆ ಗೌರವ ನೀಡಲಾಗುತ್ತದೆ. ಇಂದು ರಾಜ್ಯ, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಎಲ್ಲಾ ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ 24 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ ಅಜ್ಞಾನ ಎಂಬ ಕತ್ತಲೆಯಿಂದ ಸುಜ್ಞಾನ ಎಂಬ ಬೆಳಕಿನೆಡೆಗೆ ಕೊಂಡೊ ಯ್ಯುವ ಶಿಕ್ಷಕರು ದೇವರ ಸಮಾನಾಗಿದ್ದಾರೆ. ಇಂದಿನ ಕಾಲ ಘಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಅತಿ ಅಗತ್ಯ. ಶಿಕ್ಷಣದಲ್ಲೂ ಹೊಸ, ಹೊಸ ಅವಿಷ್ಕಾರದ ಅಗತ್ಯವಿದೆ. ಶಿಕ್ಷಕರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ನನ್ನ ಅರಿವಿಗೆ ಬಂದಿದೆ. ನಾನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ರಾಜ್ಯ ಉತ್ತಮ ಶಿಕ್ಷಣ ಪ್ರಶಸ್ತಿ ಪಡೆದ ಮುತ್ತಿನಕೊಪ್ಪ ಪ್ರೌಢ ಶಾಲೆಯ ಮಥಾಯ್ ಅವರನ್ನು ಅಭಿನಂದಿಸುತ್ತೇನೆ. ಈ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಶೃಂಗೇರಿ ಕ್ಷೇತ್ರದ 3 ತಾಲೂಕುಗಳು ಉತ್ತಮ ಫಲಿತಾಂಶ ಬಂದಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಮಾತನಾಡಿ ನಾನು ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಕೆಲ ಮಾಡುತ್ತಿದ್ದಾಗ ಬೆಂಗಳೂರಿನಲ್ಲಿ ಕೃಷ್ಣ ಫೌಂಡೇಷನ್ ಹುಟ್ಟು ಹಾಕಿ ಅನೇಕ ಶಾಲೆಗಳಿಗೆ ಕೊಡುಗೆ ನೀಡಿದ್ದೇನೆ. ಶೃಂಗೇರಿ ಮೆಣಸೆ ಸ್ಕೂಲಿಗೆ ಶಾಲಾ ಬಸ್ಸು ನೀಡಿದ್ದೇನೆ ಎಂದರು.

ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ। ಶ್ರೀಪತಿ ಹಳಗುಂದ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ 12 ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ 24 ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬಿ.ಇ.ಓ ಕಚೇರಿಯಿಂದ ಎಲ್.ಎಫ್ ಚರ್ಚ್ ಸಭಾ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಮಟ್ಟದ 24 ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ/ಪ್ರದಾನಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಎಂಟು ಶಿಕ್ಷಕರಂತೆ ಒಟ್ಟು 24 ಉತ್ತುಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಿರಿಯ ಪ್ರಾಥಮಿಕ ವಿಭಾಗಸುರೇಶ್ ಕುಮಾರ್, ಲಾವಣ್ಯ ಎನ್.ಜಿ., ಲೋಕೇಶ್ ಎಚ್.ಕೆ., ಜಗದೀಶ್ ಎಚ್.ಎಸ್., ಅಸ್ಗರ್ ಅಲಿಖಾನ್, ನಸೀಮಾ ಬಾನು, ನಿಲೂಫರ್ ಬೇಗಂ ಹಾಗೂ ಪ್ರಸನ್ನ ಬಿ.ಹಿರಿಯ ಪ್ರಾಥಮಿಕ ವಿಭಾಗಜಯಂತ್, ವೈಯೋಲೆಟ್ ವಿಲ್ಮಾ ಗೊನಾಲ್ವಿಸ್, ನಾಗರತ್ನ ಎಚ್.ಸಿ., ಅಂಜಿಲಮ್ಮ, ಪ್ರೇಮಾ ಬಿ.ಟಿ., ಶೈನಿ, ಜಯಂತಿ ಹಾಗೂ ಲಕ್ಷ್ಮಣ್ ಎಂ.ಎಸ್.ಪ್ರೌಢಶಾಲಾ ವಿಭಾಗನಂಜುಂಡಯ್ಯ ಎ.ಜಿ., ಓಂಕಾರಪ್ಪ, ಹನುಮಂತಪ್ಪ ಎಂ., ಪ್ರಕಾಶ್ ಬಿ., ಸಂದೇಶ್ ಕೆ.ಎಲ್., ಗುಣಪಾಲ್ ಜೈನ್, ದೀಪಾ ಹಾಗೂ ಸುನೀತಾ ಕೆ.ಜಿ. ಅವರಿಗೆ ಸಚಿವ ಕೆ.ಜೆ.ಜಾರ್ಜ್ ಪ್ರಶಸ್ತಿ ಪ್ರದಾನ ಮಾಡಿದರು.ಇದಲ್ಲದೆ, ವಿಶೇಷ ಪುರಸ್ಕಾರಕ್ಕೆ ಕುಮಾರಸ್ವಾಮಿ, ಸುಮಿತ್ರಾ ಹಾಗೂ ಪ್ರಹ್ಲಾದ್ ಜೆ.ಎಚ್. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅತಿಥಿಗಳಾಗಿ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೋಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಾಯಾಮಾ, ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಕೆಡಿಪಿ ಸದಸ್ಯರಾದ ಎಂ.ವಿ. ರಮೇಶ್, ಕೆ.ವಿ.ಸಾಜು,ಸಮೀರ ನಹೀಂ, ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ಶಿಕ್ಷಕರ ದಿನಾಚರಣೆ ಹಣಕಾಸು ಸಮಿತಿ ಗೇರ್ ಬೈಲು ನಟರಾಜ, ಪಿ.ಆರ್.ಸದಾಶಿವ, ಪ್ರಶಾಂತಶೆಟ್ಟಿ, ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಜುಬೇದ, ಸುನೀಲ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮನೀಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಡಪ್ಪ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಉಪ ನಿರ್ದೇಶಕ ತಿಮ್ಮರಾಜು, ಶಿಲ್ಪಕುಮಾರಿ, ತಮನ್ನಾ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಒಬ್ಬರ ರಕ್ತದಾನದಿಂದ ಮೂವರಿಗೆ ಜೀವದಾನ: ಡಾ.ಆನಂದ್‌