ಶಿಕ್ಷಕರ ಸ್ಥಾನವನ್ನು ಯಾವುದೇ ಎಐ, ಆಧುನಿಕ ತಂತ್ರಜ್ಞಾನವೂ ತುಂಬಲಾರದು: ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork |  
Published : Sep 06, 2026, 01:30 AM IST
ಫೋಟೋ: 5 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ನಗರದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ತಹಸೀಲ್ದಾರ್ ಶೀತಲ್ ಟಿ.ಎಸ್. ಮಾತನಾಡಿ, ಶಿಕ್ಷಕರು ಶಿಕ್ಷಣದ ಜತೆಗೆ ಚುನಾವಣೆ, ಎಸ್‌ಐಆರ್, ಜನಗಣತಿ, ಸಮೀಕ್ಷೆ ಸೇರಿ ಸರ್ಕಾರ ವಹಿಸುವ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಹೆಚ್ಚುವರಿ ಕರ್ತವ್ಯಗಳ ನಡುವೆಯೂ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಷ್ಟೇ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಂದರೂ ಶಿಕ್ಷಕರ ಸ್ಥಾನವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಖಾಸಗಿ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದಿಂದ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿದ್ದರೂ ವಿದ್ಯಾರ್ಥಿಗಳನ್ನು ಆಳವಾಗಿ ಅಧ್ಯಯನ ಮಾಡಿಸಿ, ಅವರಲ್ಲಿ ವಿಶ್ಲೇಷಣಾತ್ಮಕ ಹಾಗೂ ತಾರ್ಕಿಕ ಚಿಂತನೆ ಬೆಳೆಸಿ, ತಪ್ಪುಗಳನ್ನು ತಿದ್ದುವ ಕಾರ್ಯವನ್ನು ಶಿಕ್ಷಕರೇ ಪರಿಣಾಮಕಾರಿಯಾಗಿ ಮಾಡಬಲ್ಲರು. ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಶಿಕ್ಷಕರ ಕೊಡುಗೆ ಅನನ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪರಿಶ್ರಮ ಅತ್ಯಂತ ಮಹತ್ವದ್ದಾಗಿದೆ. ಹೊಸಕೋಟೆ ತಾಲೂಕಿನಲ್ಲಿ 10 ತರಗತಿ ಪರೀಕ್ಷೆಯಲ್ಲಿ ಶೇ.೯೯.೬೩ರಷ್ಟು ಫಲಿತಾಂಶ ದಾಖಲಾಗಿರುವುದು ಹೆಮ್ಮೆಯ ವಿಚಾರ. ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಪರಿಶ್ರಮವಿದೆ. ತಾಲೂಕಿನಲ್ಲಿ ರೂಪಿಸಿರುವ ‘ಅರಿವಿನ ಬೆಳಕು’ ಪುಸ್ತಕ ಹಾಗೂ ಪ್ರಶ್ನೆ ಬ್ಯಾಂಕ್ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಸರ್ಕಾರವೇ ಇಂತಹ ಯೋಜನೆಗಳನ್ನು ಇತರೆ ಭಾಗಗಳಲ್ಲೂ ಅಳವಡಿಸಿಕೊಳ್ಳಲು ಮುಂದಾಗಿರುವುದು ತಾಲೂಕಿಗೆ ಸಂದ ಗೌರವವಾಗಿದೆ ಎಂದರು.

ತಹಸೀಲ್ದಾರ್ ಶೀತಲ್ ಟಿ.ಎಸ್. ಮಾತನಾಡಿ, ಶಿಕ್ಷಕರು ಶಿಕ್ಷಣದ ಜತೆಗೆ ಚುನಾವಣೆ, ಎಸ್‌ಐಆರ್, ಜನಗಣತಿ, ಸಮೀಕ್ಷೆ ಸೇರಿ ಸರ್ಕಾರ ವಹಿಸುವ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಹೆಚ್ಚುವರಿ ಕರ್ತವ್ಯಗಳ ನಡುವೆಯೂ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ ಎಂದರು.

ಸಂಪನ್ಮೂಲ ವ್ಯಕ್ತಿ ಮುಕುಂದರಾಜ್ ಮಾತನಾಡಿ, ಶಿಕ್ಷಕರಲ್ಲಿ ವಿದ್ವತ್ ಕೊರತೆ ಇರುವ ಕಾರಣ ಸರ್ಕಾರಗಳು ಶಿಕ್ಷಕರನ್ನು ಜನಗಣತಿ, ಎಸ್‌ಐಆರ್, ಬಿಸಿಯೂಟ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಳ್ಳುತ್ತಿವೆ. ಶಿಕ್ಷಕರು ನಿರಂತರ ಅಧ್ಯಯನ ನಡೆಸಿ ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಪಠ್ಯದ ಜತೆಗೆ ಉತ್ತಮ ನಡವಳಿಕೆ ಮತ್ತು ಮೌಲ್ಯಗಳನ್ನು ತಮ್ಮ ಮಾತು ಹಾಗೂ ನಡೆ-ನುಡಿಯ ಮೂಲಕ ಕಲಿಸಿಕೊಡಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ತಾಲೂಕು ಅಧ್ಯಕ್ಷ ಪಿ.ರಾಜಣ್ಣ, ಬಿಇಒ ಪದ್ಮನಾಭ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್. ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯರಾದ ಕೊರಳೂರು ಸುರೇಶ್, ಸುಬ್ಬರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ.ಸಿ. ಲಕ್ಷ್ಮೀ, ಟೌನ್ ಅಧ್ಯಕ್ಷೆ ಆರತಿ, ತಾಪಂ ಮಾಜಿ ಅಧ್ಯಕ್ಷ ಡಿ.ಟಿ. ವೆಂಕಟೇಶ್, ಮುಖಂಡ ಆರ್.ಟಿ.ಸಿ. ಗೋವಿಂದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಒಬ್ಬರ ರಕ್ತದಾನದಿಂದ ಮೂವರಿಗೆ ಜೀವದಾನ: ಡಾ.ಆನಂದ್‌