-ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ಆಗ್ರಹ
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಎಸ್ಸಿಎಸ್ಪಿ/ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆಗ್ರಹಿಸಿ ಬಿಜೆಪಿಯಿಂದ ಮಂಗಳವಾರ ಜನಾಂದೋಲನವನ್ನು ನಡೆಸಲಾಯಿತು.ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜನಾಂದೋನ ಸಭೆಯನ್ನು ನಡೆಸಿದ ಪಕ್ಷದ ಮುಖಂಡರು ಅಲ್ಲಿಂದ ಮುಖ್ಯ ರಸ್ತೆ, ವೃತ್ತದ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ನಂತರ ವೃತ್ತದ ಸುತ್ತಲು ಕುಣಿತುಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದುರ್ಬಳ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಂಡು ಆ ಸಮುದಾಯಗಳಿಗೆ ತೀವ್ರ ಅನ್ಯಾಯ ಮಾಡಿದೆ. 2023 ರಲ್ಲಿ ಎಸ್ಸಿಎಸ್ಟಿ ಯಿಂದ 7713.15 ಸಾವಿರ ಕೋಟಿ ಮತ್ತು ಟಿಎಸ್ಪಿಯಿಂದ 3430.85 ಸಾವಿರ ಕೋಟಿ ಸೇರಿ ಒಟ್ಟು 11144 ಸಾವಿರ ಕೋಟಿ ರು.ಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದರ ಮುಖಾಂತರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನಿಡಬೇಕು, ಶೋಷಿತ ಸಮುದಾಯಗಳನ್ನು ವಂಚಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ,ಬಿ.ವಿ.ನಾಯಕ, ಮಾಜಿ ಶಾಸಕರಾದ ತಿಪ್ಪರಾಜು ಹವಲ್ದಾರ್,ಎನ್.ಶಂಕ್ರಪ್ಪ, ಮುಖಂಡರಾದ ರವೀಂದ್ರ ಜಲ್ದಾರ್, ಶರಣಮ್ಮ ಕಾಮರೆಡ್ಡಿ ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
-----------------------03ಕೆಪಿಆರ್ಸಿಆರ್ 02: ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಜನಾಂದೋಲನಾ ಪ್ರತಿಭಟನೆ ನಡೆಸಲಾಯಿತು.