2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ

KannadaprabhaNewsNetwork | Published : Jun 5, 2025 1:42 AM
2026ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾನೇ ನೀರಾವರಿ ಸಚಿವನಾಗಿ ಅಥಣಿ ಹಾಗೂ ಕಾಗವಾಡ ಕ್ಷೇತ್ರವನ್ನು ಸಂಪೂರ್ಣ ನೀರಾವರಿಗೊಳಪಡಿಸುವೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

2026ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾನೇ ನೀರಾವರಿ ಸಚಿವನಾಗಿ ಅಥಣಿ ಹಾಗೂ ಕಾಗವಾಡ ಕ್ಷೇತ್ರವನ್ನು ಸಂಪೂರ್ಣ ನೀರಾವರಿಗೊಳಪಡಿಸುವೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಖಿಳೇಗಾಂವ ಗ್ರಾಮದ ಶ್ರೀ ಬಸವೇಶ್ವರ ದೇವರ ದರ್ಶನ ಪಡೆದು ಆರ್‌ಎಸ್‌ಪಿ ಸಮೂಹ ಸಂಸ್ಥೆಯ ಉದ್ಯಮಿ, ಸಮಾಜ ಸೇವಕ, ಭವಿಷ್ಯದ ನಾಯಕ ರವಿ ಪೂಜಾರಿ ಅವರ ಬಟ್ಟೆ ಅಂಗಡಿಗೆ ಮಂಗಳವಾರ ಭೇಟಿ ನೀಡಿ ಅವರ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಒಂದು ಕೆಟ್ಟ ಸರ್ಕಾರ. ಇಂತಹ ಸರ್ಕಾರ ನಾನು ಎಂದೂ ಕಂಡಿಲ್ಲ. ಗ್ಯಾರಂಟಿ ಗುಂಗಿನಲ್ಲಿ ಸರ್ಕಾರ ಅಭಿವೃದ್ಧಿಯನ್ನೇ ಮರೆತಿದೆ ಎಂದು ಕಿಡಿಕಾರಿದರು.ನಾನು ರಾಜಕೀಯ ಹೊರತುಪಡಿಸಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಕೆಟ್ಟ ಸರ್ಕಾರ. ಅವರ ನಿಲುವುಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಆರೋಪಿಸಿದ ಅವರು, ಮಹೇಶ ಕುಮಠಳ್ಳಿ ಶಾಸಕರಿದ್ದ ವೇಳೆ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪ್ರಾರಂಭಗೊಂಡಿದೆ. ನಾವೇ ಬಂದು ಪೂರ್ಣಗೊಳಿಸಿ ಯೋಜನೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ತಮ್ಮ ಅಧಿಕಾರವಧಿಯಲ್ಲಿ ಸರ್ಕಾರದ ಅನುದಾನದ ಜೊತೆಗೆ ತಮ್ಮ ಸ್ವಂತದ ಹಣ ವೆಚ್ಚ ಮಾಡಿ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದರು. ಆದರೆ ನೀರಾವರಿ ಯೋಜನೆಗೊಳಪಡುವ ಜನರೇ ಅವರಿಗೆ ಮತ ಹಾಕಲಿಲ್ಲ. ಈಗ ಸ್ಥಳೀಯ ಶಾಸಕರು, ನೀರಾವರಿ ಸಚಿವರು ಯಾವುದೇ ರಾಜಕೀಯ ಮಾಡದೇ ವಿಶೇಷ ಆಸಕ್ತಿ ತೋರಿ ಈ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಕಾಗವಾಡ ಕ್ಷೇತ್ರದ ರೈತ ಹಿತ ಕಾಪಾಡಲಿ ಎಂದು ಆಗ್ರಹಿಸಿದರು.ಅಥಣಿ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸುವುದಾಗಿ ಹೇಳಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಗುರಿಯಾಗಿದೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಮಂಜೂರಾಗಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸತತ ಪ್ರಯತ್ನದ ಫಲವಾಗಿಯೇ ಅಮ್ಮಾಜೇಶ್ವರಿ ಏತ ನೀರವರಿ ಯೋಜನೆ ಅನುಷ್ಠಾನಗೊಂಡಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ, ಉದ್ಯಮಿ ರವಿಅಣ್ಣಾ ಪೂಜಾರಿ, ಧುರೀಣರಾದ ಉಮೇಶರಾವ್ ಬಂಟೋಡಕರ,ಸಂತೋಷ ಕಕಮರಿ, ನಾನಾಸಾಹೇಬ ಅವತಾಡೆ, ಧರೆಪ್ಪ ಠಕ್ಕಣ್ಣವರ, ಗಿರೀಶ ಬುಟಾಳೆ, ಮಲ್ಲಿಕಾರ್ಜುನ ಅಂದಾನಿ, ಸಿದ್ದಪ್ಪ ಮುದಕನ್ನವರ, ಪ್ರಭಾಕರ ಚವ್ಹಾಣ, ರಾಜೇಂದ್ರ ಐಹೊಳೆ, ಬಾಳು ಹಜಾರೆ, ಅಶೋಕ ಯಲಡಗಿ, ತಮ್ಮಣ್ಣ ಪೂಜಾರಿ ಅನೇಕರು ಉಪಸ್ಥಿತರಿದ್ದರು.

ಮಾಜಿ ಸಚಿವರು, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ನಮ್ಮ ಬಟ್ಟೆ ಅಂಗಡಿಗೆ ಬಂದು ಶುಭ ಹಾರೈಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ.

- ರವಿ ಪೂಜಾರಿ, ಆರ್‌ಎಸ್‌ಪಿ ಸಮೂಹ ಸಂಸ್ಥೆಯ ಉದ್ಯಮಿ.