ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಮಹಾಸಂಸ್ಥಾನ ವಿಶ್ವಕ್ಕೆ ಮಾದರಿಯಾಗಿತ್ತಲ್ಲದೆ, ಅಲ್ಲ ರಂಗಗಳಲ್ಲಿಯೂ ರಾಜರು ಮಾಡಿದ ಸಾಧನೆ ಮತ್ತು ಜನಪರವಾದ ಕೆಲಸಗಳು ಸೂರ್ಯಚಂದ್ರರಿರುವವರೆಗೂ ಶಾಶ್ವತ.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತಮ್ಮ ರಾಜಾಡಳಿತದ ಅವಧಿಯಲ್ಲಿ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಯದುವಂಶದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ದಿ ಪರವಾದ ಕೆಲಸಗಳು ಜಗತ್ತಿಗೆ ಮಾದರಿ ಎಂದು ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಸಂಸ್ಥಾನವನ್ನು 25 ಆಳರಸರು ಆಳಿದ್ದರು, ನಾಲ್ವಡಿಯವರ ಕಾಲದಲ್ಲಿ ಅಭಿವೃದ್ದಿಯ ರಥ ಕ್ಷಿಪ್ರವಾಗಿ ಸಾಗಿ ಜಗತ್ತಿಗೆ ಮಾದರಿಯಾಯಿತು ಎಂದರು.
ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಮಾತನಾಡಿ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಮಹಾಸಂಸ್ಥಾನ ವಿಶ್ವಕ್ಕೆ ಮಾದರಿಯಾಗಿತ್ತಲ್ಲದೆ, ಅಲ್ಲ ರಂಗಗಳಲ್ಲಿಯೂ ರಾಜರು ಮಾಡಿದ ಸಾಧನೆ ಮತ್ತು ಜನಪರವಾದ ಕೆಲಸಗಳು ಸೂರ್ಯಚಂದ್ರರಿರುವವರೆಗೂ ಶಾಶ್ವತ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ವಕೀಲ ಶಿವರಾಜು, ಮುಖಂಡರಾದ ಎಂ. ಅಪ್ಪಾಜಿಗೌಡ, ಸುರೇಶ್, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.
ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರದೆ ಮಹಾರಾಜರಿಗೆ ಅಪಮಾನ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಟ್ಟಣದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಬುಧವಾರ ನಡೆದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಸುರೇಂದ್ರಮೂರ್ತಿ ಅವರನ್ನು ಹೊರತುಪಡಿಸಿ ಯಾವೊಬ್ಬ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರದೆ ಮಹಾರಾಜರಿಗೆ ಅಪಮಾನ ಮಾಡಿದ ಪ್ರಸಂಗ ನಡೆಯಿತು.
ಎರಡು ದಿನಗಳ ಹಿಂದೆಯೇ ತಾಲೂಕು ಕಚೇರಿಯಿಂದ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ, ಕನಿಷ್ಠ ಸೌಜನ್ಯಕಾದರೂ ಕಾರ್ಯಕ್ರಮಕ್ಕೆ ಬಾರದ ಅವರು, ತಮ್ಮ ದಾರ್ಷ್ಟ್ಯ ಮೆರೆದಿದ್ದು, ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಶಾಸಕ ಡಿ.ರವಿಶಂಕರ್ ಅವರು ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಅವರ ಅನುಪಸ್ಥಿಯಲ್ಲಿ ನಡೆದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸೇರಿದಂತೆ ಇತರರು ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಚೇರಿಗೆ ಬಂದಿದ್ದ ಹಲವು ನಾಗರೀಕರು ಜಾತಿ ಹೆಸರಿನಲ್ಲಿ ಮಾಡುವ ಜಯಂತಿಗಳಿಗೆ ನೂರಾರು ಮಂದಿ ಸೇರಿ ಜಯ ಘೋಷ ಮೊಳಗಿಸುತ್ತಾರೆ, ಆದರೆ ಕೆ.ಆರ್. ನಗರ ಪಟ್ಟಣದ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಜಯಂತಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರ ರಾಜಕೀಯ ಮುಖಂಡರು ಬಾರದಿರುವುದು ಅವರಿಗೆ ಮಾಡಿದ ದೊಡ್ಡ ಅಪಮಾನ ಎಂದು ನೊಂದು ನುಡಿಯುತ್ತಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.