ಹಾನಗಲ್ಲ: ಧರ್ಮ, ದೇವರ ಹೆಸರು ಹೇಳಿ ನಾನು ಮತಯಾಚಿಸುವುದಿಲ್ಲ. ಸಾಧನೆ ಮಾಡದ ಬಿಜೆಪಿ ಸುಳ್ಳು ಹೇಳಿ, ಭಾವನಾತ್ಮಕವಾಗಿ ಮಾತನಾಡಿ ಮತ ಕೇಳುತ್ತಿದೆ. ಎಚ್ಚರಿಕೆಯಿಂದ ಮತ ಚಲಾಯಿಸದಿದ್ದರೆ ಜನಸಾಮಾನ್ಯರ ಬದುಕನ್ನು ಬಿಜೆಪಿ ಮತ್ತೆ ಕತ್ತಲೆಗೆ ನೂಕಲಿದೆ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಆತಂಕ ವ್ಯಕ್ತಪಡಿಸಿದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಬಡವರು, ರೈತರ ಏಳಿಗೆ ಬಗೆಗೆ ಚಿಂತನೆ ನಡೆಸುವ ಬದಲಿಗೆ ಹೊಟ್ಟೆ ತುಂಬದ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾ, ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ. ಸಂವಿಧಾನದ ಉಳಿವಿಗೆ ಬಿಜೆಪಿ ಸೋಲಿಸಲು ಪ್ರತಿಯೊಬ್ಬರೂ ದೃಢಸಂಕಲ್ಪ ಗೈಯ್ಯಬೇಕಿದೆ. ಬಿಜೆಪಿಯ ಜನವಿರೋಧಿ ನೀತಿಗಳು, ಆಡಳಿತ ವೈಫಲ್ಯಗಳು, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಚರ್ಚೆಯಾಗಬೇಕಿದೆ. ಸೂಕ್ಷ್ಮವಾಗಿ ಎಲ್ಲವನ್ನೂ ಅಳೆದು, ತೂಗಿ, ವಿಚಾರ ಮಾಡಿ ಮತ ಚಲಾಯಿಸದಿದ್ದರೆ, ಅಪಾಯ ಕಾದಿದೆ. ನಿಮ್ಮ ಬದುಕು ಹಸನಾಗಬೇಕಿದ್ದರೆ, ಮಕ್ಕಳ ಭವಿಷ್ಯ ಉಜ್ವಲವಾಗಬೇಕಿದ್ದರೆ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಯಣ್ಣ ಸಂಗನಗೌಡ್ರ, ಸುಲೇಮಾನ ಅವಲ್ಯಾನವರ, ಬಸಪ್ಪ ಹರವಿ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಕಲವೀರಪ್ಪ ಪವಾಡಿ, ಈರಣ್ಣ ಬೂದಿಹಾಳ, ಚಮನಸಾಬ ಪಠಾಣ, ಎಂ.ಎನ್. ನೆಗಳೂರ, ಬಾಷಾಸಾಬ ಗೌಂಡಿ, ಸುಲೇಮಾನ ಸವಣೂರ, ಸುರೇಶ ಮಾಚಾಪುರ, ಅಬ್ದುಲ್ಗನಿ ಪಟೇಲ, ಫಕ್ಕಿರೇಶ ಮಾವಿನಮರದ, ಪ್ರವೀಣ ಸಂತಣ್ಣನವರ, ಯಲ್ಲಪ್ಪ ನಿಂಬಣ್ಣನವರ, ಸುರೇಶ ಸೊಪ್ಪಿನ, ಶಾಂತಪ್ಪ ಶೀಲವಂತರ ಈ ಸಂದರ್ಭದಲ್ಲಿದ್ದರು.