ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ: ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Mar 25, 2026, 01:30 AM IST
ಪೋಟೋ: 24ಎಸ್‌ಎಂಜಿಕೆಪಿ09: ಬಿ.ವೈ.ರಾಘವೇಂದ್ರ  | Kannada Prabha

ಸಾರಾಂಶ

ದೇಶದ ಐದು ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ಐದು ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಸದಸ್ಯರೇ ಕ್ರಾಸ್ ವೋಟ್‌ಮಾಡಿ ಕಾಂಗ್ರೆಸ್ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗಲೇ ಸೇರಿದ ಜನಸ್ತೋಮವೇ ಶುಭ ಸೂಚನೆ ನೀಡಿದೆ. ನಿರಾಯಾಸವಾಗಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ಒಂದು ಕಡೆ ಕುಬೇರ ಸ್ಪರ್ಧಿಸಿದ್ದರೆ ಅವರಿಗೆ ಎದುರಾಳಿಯಾಗಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ನಿಂತಿದ್ದಾನೆ. ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಯ ಬಗ್ಗೆ ಜನ ಈಗಾಗಲೇ ಭ್ರಮನಿರಸನಗೊಂಡಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಜನ ಮತ ಚಲಾಯಿಸುತ್ತಾರೆ ಎಂದರು.

ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಎಲ್‌ಪಿಜಿ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಯುದ್ಧ ಪ್ರಾರಂಭವಾಗಿದ್ದರೂ ಭಾರತ ದೇಶದ ಮುನ್ನೆಚ್ಚರಿಕೆಯಿಂದ ಮೈಲುಗಟ್ಟಲೆ ಕ್ಯೂನಿಂತು ಪಡೆಯುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿಲ್ಲ. ವಾಣಿಜ್ಯ ಬಳಕೆ ಸಿಲಿಂಡರ್ ಸರಬರಾಜು ಕೂಡ ಇಂದಿನಿಂದ ಶೇ. 20 ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ದ ಸುಳ್ಳು ಸೃಷ್ಟಿಸಿ ಗೊಂದಲ ಮೂಡಿಸುವ ಪ್ರಕ್ರಿಯೆ ಯಥಾಪ್ರಕಾರವಾಗಿ ಮುಂದುವರೆದಿದೆ. ಆದರೆ ಜನರಿಗೆ ಎಲ್ಲವೂ ಅರಿವಿದೆ. ಪ್ರಧಾನಮಂತ್ರಿಗಳೇ ಸೂಕ್ತ ಎಚ್ಚರಿಕೆ ತೆಗೆದುಕೊಂಡು ದೇಶದ ಜನರಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು.

ಇವಿಎಂ ಬೇಡ ಮತಪತ್ರ ಬೇಕು ಎನ್ನುವ ಕಾಂಗ್ರೆಸ್ ದ್ವಂದ್ವ ನಿಲುವು ಜಗಜ್ಜಾಹೀರವಾಗಿದೆ. ಒಂದೆಡೆ ಗ್ರೇಟರ್ ಬೆಂಗಳೂರು ಅಂತಾರೆ. ಇನ್ನೊಂದೆಡೆ ಬ್ಯಾಲೇಟ್ ಪೇಪರ್ ಬೇಕು ಎನ್ನುತ್ತಾರೆ. ಗೆದ್ದಾಗ ಒಂದು, ಸೋತಾಗ ಒಂದು ಮನಸ್ಥಿತಿ ಕಾಂಗ್ರೆಸ್‌ನದ್ದು ಎಂದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಮತ್ತು ರಾಜ್ಯ ೬೦-೪೦ರ ಅನುಪಾತದಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಯಾವುದೇ ಒತ್ತಡವನ್ನು ಹೇರಿಲ್ಲ. ಸಧ್ಯಕ್ಕೆ ಪರಿಸರದ ದೃಷ್ಟಿಯಿಂದ ತಡೆ ಹಿಡಿಯುವ ಕೆಲಸ ಆಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಇಂಡಿಗೋ ಕಂಪನಿ ತನ್ನ ವಿಮಾನಯಾನವನ್ನು ಶಿವಮೊಗ್ಗದಲ್ಲಿ ಮೇ.1 ರಿಂದ ನಿಲ್ಲಿಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಂಪನಿಯ ಪ್ರಮುಖರೊಂದಿಗೆ ಮಾತುಕತೆ ನಡೆದಿದೆ. ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದು, ಮೇ ನಿಂದ ಇಂಡಿಗೋ ಯಾನ ನಿಲ್ಲಿಸದಂತೆ ನಾನು ಕೂಡ ಹಲವು ಭಾರಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಶಿವಮೊಗ್ಗ-ಬೆಂಗಳೂರು ವಿಮಾನ ಮಾರ್ಗ ಉಡಾನ್ ಯೋಜನೆಯಡಿ ಬರುವುದಿಲ್ಲ. ಬಿಎಸ್‌ವೈ ಮುಖ್ಯಮಂತ್ರಿಗಳಾಗಿದ್ದಾಗ ಈ ಮಾರ್ಗಕ್ಕೆ ಸಹಾಯ ಧನವಾಗಿ ವಾರ್ಷಿಕ ಎರಡು ಕೋಟಿ ರು. ಸರ್ಕಾರದಿಂದಲೇ ವಿಮಾನ ಯಾನ ಕಂಪನಿಗೆ ನೀಡುತ್ತಿದ್ದರು. ಅದನ್ನು ಈಗಲೂ ಮುಂದುವರಿಸಲಾಗಿದೆ. ಉಳಿದ ಐದೂ ಮಾರ್ಗಗಳು ಉಡಾನ್ ಯೋಜನೆಯಡಿ ಯಶಸ್ವಿಯಾಗಿ ಮುಂದುವರಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕದ ಬಗ್ಗೆಯೂ ಈಗಾಗಲೇ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದೂ ಸಭೆ ನಡೆಸಿದ್ದೇನೆ. ಅದು ಕೂಡ ಬಗೆಹರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಹಾಗೂ ಎಸ್.ಜ್ಞಾನೇಶ್ವರ್, ರಾಜೇಶ್ ಕಾಮತ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ