ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ನಿನ್ನೆ ಮಾಯಕೊಂಡ ಕ್ಷೇತ್ರದ ಸಭೆಯ ಬೆನ್ನಲ್ಲೇ ಬುಧವಾರ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳ ಮುಖಂಡರು, ಕಾರ್ಯ ಕರ್ತರ ಸರಣಿ ಸಭೆಯಲ್ಲಿ ಲೋಕಸಭೆ ಚುನಾವಣೆ ಇದ್ದಾಗಲೇ ಕೆಲವರು ಹುಟ್ಟು ಹಾಕುತ್ತಿರುವ ಗೊಂದಲ, ಗದ್ದಲಗಳ ಬಗ್ಗೆ ಬಹುತೇಕ ಎಲ್ಲರಿಂದಲೂ ತೀವ್ರ ಅಸಮಾಧಾನ ವ್ಯಕ್ತವಾಯಿತಲ್ಲದೇ, ನಿಮ್ಮ ಇಂತಹ ಕೆಲಸ ಸಾವಿರಾರು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು ಎಂದು ಗೊತ್ತಾಗಿದೆ.
ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಮಹಿಳಾ ಮುಖಂಡರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿ.ಮಲ್ಲಿಕಾರ್ಜುನಪ್ಪನವರು ಸ್ಪರ್ಧಿಸಿದಾಗಿನಿಂದ ತೀರಾ ಈಚಿನವರೆಗೂ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಇದೇ ಜಿಲ್ಲೆಯವರಾಗಿದ್ದರು. ಆದರೆ, ಮಾಜಿ ಸಟಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ಸಿನ ನಾಯಕರು, ಸಿಎಂ, ಡಿಸಿಎಂ, ಕೆಲ ಸಚಿವರು, ವಿಶೇಷವಾಗಿ ದಾವಣಗೆರೆ ಕಾಂಗ್ರೆಸ್ಸಿನ ನಾಯಕರ ಭೇಟಿ ಮಾಡಿ ಬಂದ ನಂತರವಂತೂ ಕಾಂಗ್ರೆಸ್ಸಿನವರ ಮಾತುಗಳು ರೇಣುಕಾ ಚಾರ್ಯ ಮತ್ತಿತರರಿಂದ ಬರುತ್ತಿವೆ. ಇದೆಲ್ಲದರ ಹಿಂದೆ ಯಾವ ಕಾಣದ ಕೈಗಳಿವೆ ಎಂಬ ನಮ್ಮ ಪ್ರಶ್ನೆಗೆ ಮುಖಂಡರೆನಿಸಿಕೊಂಡವರು ಉತ್ತರ ಕೊಡಲಿ ಎಂಬ ಒತ್ತಾಯ ಕೇಳಿ ಬಂದಿದೆ.ನಿಮ್ಮ ಚುನಾವಣೆ ವೇಳೆ ಸಿದ್ದೇಶಪ್ಪ ಬೇಕು, ಈಗ ಬೇಡ್ವಾ?!ವಿಧಾನಸಭೆ ಚುನಾವಣೆಗಳ ವೇಳೆ ಟಿಕೆಟ್ ವಿಚಾರಕ್ಕಾಗಲೀ, ಹಣದ ವಿಚಾರವೇ ಆಗಿರಲಿ ಎಲ್ಲದಲ್ಲೂ ಸಿದ್ದೇಶಪ್ಪ ಬೇಕು. ಈಗ ಲೋಕಸಭೆ ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ಸಿನವರೇ ಬೆಚ್ಚಿ ಬೀಳುವಂತೆ ಬಿಜೆಪಿಯಲ್ಲಿರುವ ಕೆಲವರು ಕಾಂಗ್ರೆಸ್ಸಿನವರ ಮಾತುಗಳನ್ನಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸತತವಾಗಿ 4 ಚುನಾವಣೆಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಭದ್ರ ನೆಲೆ ಮಾಡಿಕೊಟ್ಟವರು ಸಿದ್ದೇಶ್ವರ. ಒಟ್ಟು 6 ಸಲ ಬಿಜೆಪಿ ಗೆದ್ದಿದ್ದರೆ ಸಿದ್ದೇಶ್ವರರ ಕೊಡುಗೆ ಇದೆಯೆಂಬುದನ್ನು ಈಗ ವಿರೋಧಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಇಂತಹವರಿಗೆ ಸಿದ್ದೇಶಪ್ಪ ಬೇರೆ ಜಿಲ್ಲೆಯ ವರಾದರೆ ಎಂದು ಅವರು ಪ್ರಶ್ನಿಸಿದರೆನ್ನಲಾಗಿದೆ.
ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಉತ್ತರ ಅಧ್ಯಕ್ಷ ಬೇತೂರು ಸಂಗನಗೌಡ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ, ಮುಖಂಡರಾದ ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎ.ವೈ.ಪ್ರಕಾಶ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಕೊಂಡಜ್ಜಿ ಜಯಪ್ರಕಾಶ, ವಕೀಲ ರಾಘವೇಂದ್ರ ಮೊಹರೆ, ಮಾಜಿ ಮೇಯರ್ ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಪಾಲಿಕೆ ಉಪ ಮೇಯರ್ ಯಶೋಧ ಯೋಗೇಶ, ವಿಪಕ್ಷ ನಾಯಕ ಕೆ.ಎಸ್.ಪ್ರಸನ್ನಕುಮಾರ, ಆರ್.ಎಲ್.ಶಿವಪ್ರಕಾಶ, ಆರ್.ಶಿವಾನಂದ, ಮಾಜಿ ಉಪ ಮೇಯರ್ ಪಿ.ಎಸ್.ಜಯಣ್ಣ, ಆನಂದರಾವ್ ಸಿಂಧೆ, ರಾಜು ನೀಲಗುಂದ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಪಿ.ಎಸ್.ಬಸವರಾಜ, ಕೆ.ಹೇಮಂತಕುಮಾರ, ಮುಕುಂದ, ಶಿವಾಜಿ ರಾವ್, ಸುರೇಶ ಗಂಡಗಾಳೆ, ಸೇರಿದಂತೆ ಬಿಜೆಪಿಯ ಓರ್ವ ಮಹಿಳೆ, ಮತ್ತೋರ್ವ ಪುರುಷ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲಾ ಸದಸ್ಯರಿದ್ದರು.ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರಲ್ಲಿ ಉಂಟಾಗಿರುವ ಗೊಂದಲ, ಗದ್ದಲಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಫೆ.8ರಂದು ದಾವಣಗೆರೆಯ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳ ಸಭೆ ನಡೆಸಲು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.