ದಕ್ಷಿಣ ಕ್ಷೇತ್ರ ಸೋಲಿಗೆ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಡಿ

KannadaprabhaNewsNetwork |  
Published : May 06, 2026, 01:30 AM IST
5ಕೆಡಿವಿಜಿ1-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೇವಲ 5708 ಮತಗಳ ಅಂತರದಲ್ಲಿ ನಾವು ಸೋತಿದ್ದರೂ, ನಮ್ಮ ಯಾವುದೇ ಕಾರ್ಯಕರ್ತರೂ ಎದೆಗುಂದಬೇಕಾಗಿಲ್ಲ. ಇನ್ನು 2 ವರ್ಷಕ್ಕೆ ಸಾರ್ವತ್ರಿಕ ಚುನಾವಣೆಗೆ ನಾವೆಲ್ಲಾ ಸನ್ನದ್ಧರಾಗೋಣ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

- ನನ್ನ ಮನೆ ಮುಂದೆ ಕಾಂಗ್ರೆಸ್ ಸಂಭ್ರಮ, ಸಾಮಾನ್ಯ ಕಾರ್ಯಕರ್ತ ಫೈಟ್ ಕೊಟ್ಟ: ಯಶವಂತ ರಾವ್ ಹೇಳಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೇವಲ 5708 ಮತಗಳ ಅಂತರದಲ್ಲಿ ನಾವು ಸೋತಿದ್ದರೂ, ನಮ್ಮ ಯಾವುದೇ ಕಾರ್ಯಕರ್ತರೂ ಎದೆಗುಂದಬೇಕಾಗಿಲ್ಲ. ಇನ್ನು 2 ವರ್ಷಕ್ಕೆ ಸಾರ್ವತ್ರಿಕ ಚುನಾವಣೆಗೆ ನಾವೆಲ್ಲಾ ಸನ್ನದ್ಧರಾಗೋಣ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಜೊತೆಗೆ ನಾವು ಸದಾ ಇದ್ದೇ ಇರುತ್ತೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಇದು ಹೀಗೆಯೇ ಮುಂದುವರಿಯುತ್ತದೆ. ನಮ್ಮ ಅಭ್ಯರ್ಥಿ ಇಲ್ಲಿ 63 ಸಾವಿರಕ್ಕೂ ಅಧಿಕ ಮತ ಪಡೆದಿದ್ದನ್ನು ನಾವ್ಯಾರೂ ಮರೆಯಬಾರದು ಎಂದರು.

ಕಾಂಗ್ರೆಸ್‌ ಗೆಲವಿಗೆ ಸ್ವಾಗತ:

ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಿನ್ನೆಲೆಯಲ್ಲಿ ಆ ಪಕ್ಷದ ಕೆಲ ಕಾರ್ಯಕರ್ತರು ನನ್ನ ಮನೆಯ ಮುಂದೆ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಕ್ಷಿಣ ಕ್ಷೇತ್ರದ ವಿಜೇತ ಅಭ್ಯರ್ಥಿ ಸಮರ್ಥ ಶಾಮನೂರು ಪರ ಘೋಷಣೆ ಕೂಗಿದರು. ಕಾಂಗ್ರೆಸ್ಸಿನ ಗೆಲುವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಾವು ಯಾರದ್ದೋ ಸಂಸ್ಥೆ ಹೊಡೆದು, ದುಡ್ಡು ಮಾಡಿಲ್ಲ. ಸಾಮಾನ್ಯ ಬಡ ಕುಟುಂಬದವರು ನಾವು. ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ, ಚುನಾವಣೆ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

ಕಣ್ಣಲ್ಲಿ ನೀರು ಹಾಕಿದ್ದೇನೆ:

ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಹೇಳುವುದಿಷ್ಟೇ. ನಾವು ಯಾರದ್ದೇ ಹಿಂಬಾಲಕರಲ್ಲ, ನಾವು ಯಾವುದೇ ಸಂಸ್ಥೆ ಹೊಡೆದುಕೊಂಡವರಲ್ಲ. ಎದುರಾ‍ಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಷ್ಟೇ ಪ್ರಬಲವಾಗಿದ್ದರೂ 63 ಸಾವಿರಕ್ಕೂ ಅಧಿಕ ಮತಗಳನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪಡೆದಿದ್ದು, ಇಂತಹದ್ದೊಂದು ಸಾಧನೆ ನಮ್ಮೆಲ್ಲಾ ಕಾರ್ಯಕರ್ತರ ಅವಿರತ ಪರಿಶ್ರಮದಿಂದಾಗಿ ಸಾಧ್ಯವಾಗಿದೆ. ನಮ್ಮ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿಯಾಗಿದ್ದು, ಆ ಎಲ್ಲರಿಗೂ ಅಭಿನಂದಿಸುತ್ತೇನೆ. ಈ ಚುನಾವಣೆಯಲ್ಲಿ ಗೆಲುವಿನ ಅಂತರ ಕೇವಲ 5708 ಮತಗಳಷ್ಟೇ ಆಗಿದ್ದು, ಶ್ರೀನಿವಾಸ ದಾಸಕರಿಯಪ್ಪ ಸೋತಾಗ ಕಣ್ಣಲ್ಲಿ ನೀರು ಹಾಕಿದ್ದೇನೆ ಎಂದು ತಿಳಿಸಿದರು.

ಸಚಿವರಾಗಿ ಪ್ರತಿ ಬೂತ್‌ನಲ್ಲಿ ಸುತ್ತಾಡಿದ್ದು ಎಷ್ಟು ಸರಿ?:

ದಿವಂಗತ ಜಿ.ಮಲ್ಲಿಕಾರ್ಜುನಪ್ಪ 1998ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಾಗ ಕಣ್ಣೀರು ಬಂದಿತ್ತು. ನಾನು ನಾಲ್ಕು ಸಲ ವಿಧಾನಸಭೆ ಚುನಾವಣೆಯಲ್ಲಿ ನಿಂತು, ಸೋತವನು. ಎದುರಾಳಿ ಪಕ್ಷ ಎಷ್ಟೇ ಜೋರಾಗಿದ್ದರೂ ನಮ್ಮ ಕಾರ್ಯಕರ್ತರ ಪರಿಶ್ರಮ, ಪ್ರಯತ್ನದಿಂದ 63 ಸಾವಿರಕ್ಕೂ ಅದಿಕ ಮತ ಈ ಸಲ ಗಳಿಸಿದ್ದೇವೆ. ಒಂದು ಲೋಟ ಟೀ ಋಣ ಸಹ ಇಟ್ಟುಕೊಳ್ಳಬಾರದು ಎಂಬುದಾಗಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದ್ದರು. ಅಂತಹ ವ್ಯಕ್ತಿ ಚುನಾವಣೆ ದಿನವೂ ದಕ್ಷಿಣ ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಸುತ್ತಾಡುತ್ತಿದ್ದರು. ನೀವೊಬ್ಬ ಜಿಲ್ಲಾ ಮಂತ್ರಿಯಾಗಿ ಅಡ್ಡಾಡುತ್ತಿದ್ದುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಡಿಸಿ, ಎಸ್‌ಪಿ, ಆರ್‌ಓಗೆ ಈ ವಿಚಾರ ತಂದರೂ ಯಾರೂ ಸ್ಪಂದಿಸಲಿಲ್ಲ. ದೂರು ನೀಡಲು ಪಾಲಿಕೆ ಕಚೇರಿಗೆ ತೆರಳಿದರೆ ಚುನಾವಣಾಧಿಕಾರಿ ಕಚೇರಿಯಲ್ಲೇ ಇರಲಿಲ್ಲ. ಅಧಿಕಾರಿಗಳ ವರ್ತನೆಯೇ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಎಷ್ಟರಮಟ್ಟಿಗೆ ನ್ಯಾಯಯುತವಾಗಿ ಮಾಡಿದ್ದಾರೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಡಿಆರ್‌ಆರ್ ಶಾಲೆ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂ ಬೀಗಗಳನ್ನು ತೆಗೆಯದೇ, ಚಿಲಕಗಳನ್ನು ಒಡೆದು, ಮುರಿದು ಹಾಕಿದ್ದಾರೆ. ಇದರಲ್ಲೇ ಅಧಿಕಾರಿಗಳು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಂಬುದು ಗೊತ್ತಾಗುತ್ತದೆ ಎಂದು ಯಶವಂತ ರಾವ್ ಜಾಧವ್‌ ದೂರಿದರು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಸತತ 3 ತಿಂಗಳು ಹಗಲು-ರಾತ್ರಿ ಶ್ರಮವಹಿಸಿ, ಮನೆ, ಮಠ ಬಿಟ್ಟು ನಮ್ಮೆಲ್ಲಾ ಕಾರ್ಯಕರ್ತರು ನಿಸ್ವಾರ್ಥದಿಂದ ಕೆಲಸ ಮಾಡಿದ್ದಾರೆ. ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತ ಹಾಗೂ ಜಿಲ್ಲಾ ಮಂತ್ರಿ ಮತ್ತು ಸಂಸದರ ಮಗ ಕಾಂಗ್ರೆಸ್ ಅಭ್ಯರ್ಥಿ. ಮುಂದಿನ ದಿನಗಳಲ್ಲೂ ಸಾಮಾನ್ಯ ವ್ಯಕ್ತಿಗೆ ನಿಲ್ಲಿಸಿ ಗೆಲ್ಲಿಸುತ್ತೇವೆ. ದಕ್ಷಿಣ ಕ್ಷೇತ್ರ ಚುನಾವಣೆಯಿಂದ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯಲ್ಲ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಿದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ ಮುಂಬರುವ ದಿನಗಳಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದ ಮಾತುಗಳನ್ನು ಸಾಕಾರಗೊಳಿಸಿದ್ದೇವೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಗಳಲ್ಲಿ ನಾವು ಆಡಳಿತಕ್ಕೆ ಬಂದಿದ್ದೇವೆ. 2028ರಲ್ಲಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅ‍ವರು ತಿಳಿಸಿದರು.

ಪಕ್ಷದ ಮುಖಂಡರಾದ ಟಿಂಕರ್ ಮಂಜಣ್ಣ, ಶಿವನಗೌಡ ಟಿ.ಪಾಟೀಲ, ರಾಜು ಗೌಡ ಇತರರು ಇದ್ದರು.

- - -

(ಕೋಟ್‌) ಏನೇ ಕೇಳಿದರೂ ಜಾಣ ಕುರುಡರಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ವೇಳೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. 2028ರ ಸಾರ್ವತ್ರಿಕ ಚುನಾವಣೆಗೆ ನಾವು ತಯಾರಿ ನಡೆಸುತ್ತೇವೆ. ದಾವಣಗೆರೆ ನಗರಕ್ಕಾಗಲೀ, ಜಿಲ್ಲೆಗಾಗಲೀ ಜಿಲ್ಲಾ ಮಂತ್ರಿ ಯಾವುದೇ ವಿಶೇಷ ಅನುದಾನ ತಂದಿಲ್ಲ. ಆದರೆ, ಉಪ ಚುನಾವಣೆ ಗಿಮಿಕ್ ಮಾಡಲು ₹100 ಕೋಟಿ ಅನುದಾನ ಘೋಷಿಸಿದ್ದರಷ್ಟೇ.

- ಯಶವಂತ ರಾವ್ ಜಾಧವ್, ಬಿಜೆಪಿ ಹಿರಿಯ ಮುಖಂಡ.

- - -

-5ಕೆಡಿವಿಜಿ1:

ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಆದೇಶ ಕೈಬಿಟ್ಟು, ಸಮರ್ಪಕ ಬೀಜ, ರಸಗೊಬ್ಬರ ಪೂರೈಸಿ
ಬೀಗ ಪ್ರಕರಣ ತನಿಖೆಗೆ ಕಠಿಣ ಕ್ರಮಕ್ಕೆ ಶಿವಕುಮಾರಪ್ಪ ಒತ್ತಾಯ