ಹರಪನಹಳ್ಳಿ: ಬಳ್ಳಾರಿ, ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ದೇವರ ತಿಮಲಾಪುರದ ಪ್ರಸಿದ್ಧ ಲಕ್ಷ್ಮಿ ವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕೈಗೊಂಡಿದ್ದೇವೆ ಎಂದು ಹೇಳಿದರು.ಪ್ರತಿ ಮನೆ ಮನೆಗೂ ತೆರಳಿ ಬಿಜೆಪಿ ಅಭ್ಯರ್ಥಿ ಯಾವ ಕಾರಣಕ್ಕೆ ಗೆಲ್ಲಬೇಕು ಎಂಬುದನ್ನು ತಿಳಿಸಿ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗಲು ಹರಪನಹಳ್ಳಿ ಬಿಜೆಪಿ ಮಂಡಲದ ಅಳಿಲು ಸೇವೆ ಇರುತ್ತದೆ ಎಂದು ಅವರು ಹೇಳಿದರು.
ಮೋದಿ ಅವರನ್ನು ಅಧಿಕಾರದಿಂದ ದೂರ ಇಡಲು ವಿಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಅವರಿಗೆ ತಾವು ಲೂಟಿ ಮಾಡಿದ ಆಸ್ತಿ ಕಾಪಾಡಿಕೊಳ್ಳುವ ಉದ್ದೇಶವಿದೆಯೇ ಹೊರತು ದೇಶದ ಭದ್ರತೆ ಬೇಕಾಗಿಲ್ಲ ಎಂದು ಅವರು ಆರೋಪಿಸಿದರು.
ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370 ವಿಧಿ ರದ್ದು ಸೇರಿದಂತೆ ಅನೇಕ ಭರವಸೆಗಳನ್ನು ಈಡೇರಿಸಿದ್ದಾರೆ. ಇಂದಿನ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ಸರ್ವೆ ವರದಿ ಇದೆ ಎಂದು ಅವರು ತಿಳಿಸಿದರು.ಬಿಜೆಪಿ ಹರಪನಹಳ್ಳಿ ಮಂಡಲ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಆರುಂಡಿ ನಾಗರಾಜ, ಜಿ.ನಂಜನಗೌಡ,ಎಂ.ಪಿ.ನಾಯ್ಕ, ಎಚ್.ಎಂ.ಅಶೋಕ, ಮುದುಕನವರ ಶಂಕರ, ಬಾಗಳಿ ಕೊಟ್ರೇಶಪ್ಪ, ಕಣವಿಹಳ್ಳಿ ಮಂಜುನಾಥ, ಉದಯಕುಮಾರ, ಬಿ.ವೈ. ವೆಂಕಟೇಶ ನಾಯ್ಕ, ಸತ್ತೂರು ಹಾಲೇಶ, ಮಂಜನಾಯ್ಕ, ಚೆನ್ನನಗೌಡ, ಮುತ್ತಿಗಿ ವಾಗೀಶ, ಒಂಕಾರಗೌಡ, ಮಂಜುನಾಥ ಇಜಂತಕರ್, ಕುಸುಮಾ ಜಗದೀಶ, ಸ್ವಪ್ನ ಮಲ್ಲಿಕಾರ್ಜುನ, ರೇಖಮ್ಮ, ವಕೀಲ ದೇವರಾಜ ಮತ್ತಿತರರು ಉಪಸ್ಥಿತರಿದ್ದರು.