ಅವಿರೋದ ಆಯ್ಕೆ । ಉಪಾಧ್ಯಕ್ಷರಾಗಿ ಮೀರಾಬಾಯಿ ನೇಮಕ । ಸಹೋದರನಾದ ಶಾಸಕ ಸಂಗಮೇಶ್ವರ್ ಅಭಿನಂದನೆ
ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಿ.ಕೆ ಸಂಗಮೇಶ್ವರ್ರವರ ಸಹೋದರ ಬಿ.ಕೆ. ಶಿವಕುಮಾರ್ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಚುನಾವಣೆಯಲ್ಲಿ ಸಾಲ ಪಡೆಯದ ಕ್ಷೇತ್ರದ ನಿರ್ದೇಶಕ ಸ್ಥಾನದಿಂದ ಆಯ್ಕೆಯಾಗಿದ್ದ ಬಿ.ಕೆ ಶಿವಕುಮಾರ್ ಅಧ್ಯಕ್ಷರಾಗಿ ಮತ್ತು ತಾಲೂಕಿನ ವೀರಾಪುರ ಕ್ಷೇತ್ರದ ನಿರ್ದೇಶಕ ಸ್ಥಾನದಿಂದ ಆಯ್ಕೆಯಾಗಿದ್ದ ಮೀರಾಬಾಯಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರಾದ ಎಸ್. ವಿರುಪಾಕ್ಷಪ್ಪ, ಎಸ್. ಕೃಷ್ಣಪ್ಪ, ಜಿ.ಎಂ ಚನ್ನಬಸಪ್ಪ, ಬಿ. ನಾಗೇಶ್, ಎಚ್.ಎಲ್ ಏಕಾಂತ, ಕೆ. ಶ್ರೀನಿವಾಸ್, ಎನ್.ಟಿ ಸಂಗನಾಥ, ಟಿ.ಎಸ್ ಮೌನೇಶ್ವರ, ಕೆ. ಕೇಶವಚಾರ್, ಬಿ. ಶಶಿಕಲಾ ಮತ್ತು ಸುಲೋಚನ ಸೇರಿ ಇತರರು ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು.
ಬಿ.ಕೆ ಶಿವಕುಮಾರ್ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ರವರ ಬೀಗರಾಗಿದ್ದು, ಅವರನ್ನು ಸಹೋದರ, ಶಾಸಕ ಬಿ.ಕೆ ಸಂಗಮೇಶ್ವರ್, ಇತರ ಗಣ್ಯರು ಅಭಿನಂದಿಸಿದರು.
ನಾನು ರೈತರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅಲ್ಲದೆ ಬ್ಯಾಂಕ್ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಶಾಸಕ ಬಿ.ಕೆ.ಸಂಗಮೇಶ್ವರ್, ಸಹಕಾರ ಸಚಿವ ಕೆ.ಎನ್ ರಾಜಣ್ಣ ಹಾಗೂ ಬ್ಯಾಂಕ್ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಬಿ.ಕೆ ಶಿವಕುಮಾರ್, ಅಧ್ಯಕ್ಷ, ಪಿಎಲ್ಡಿ ಬ್ಯಾಂಕ್, ಭದ್ರಾವತಿ.