ಕನ್ನಡಪ್ರಭ ವಾರ್ತೆ ಹರಿಹರ
ಕಪ್ಪುತಲೆ ಹುಳು ಬಾಧೆಯಿಂದ ಕೆಲವು ತೋಟಗಳಲ್ಲಿ ತೆಂಗಿನ ಮರಗಳು ಮುರಿದುಬಿದ್ದಿವೆ. ಕಂಗಾಲಾದ ರೈತರು ಹರಿಹರ ತಾಲೂಕು ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ, ಸಮಸ್ಯೆ ವಿವರಿಸಿದರು. ರೈತರ ಮನವಿಗೆ ಸ್ಪಂದಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್. ಎನ್ ಶಶಿಧರಸ್ವಾಮಿ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಕೀಟಬಾಧಿತ ಗರಿಗಳನ್ನು ಕತ್ತರಿಸಿ ತೋಟದ ಹೊರಗಡೆ ರಾಶಿ ಹಾಕಿ ಸುಡುಬೇಕು, ಉತ್ತಮ ಪೋಷಕಾಂಶಗಳ ನಿರ್ವಹಣೆ, ಇಲಾಖೆಯಲ್ಲಿ ದೊರೆಯುವ ಗೋನಿಯೋಜಸ್ ಪರೋಪಜೀವಿ ಹುಳುಗಳನ್ನು ತೋಟಗಳಲ್ಲಿ ಬಿಡುವುದು ಹಾಗೂ ಕೆಲವು ಔಷಧಿಗಳನ್ನು ಸಿಂಪರಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿಕೊಟ್ಟರು.ಇದೇ ವೇಳೆ ದಾವಣಗೆರೆಯ ಪರೋಪಜೀವಿ ಪ್ರಯೋಗಾಲಯದ ಎಚ್.ಎಸ್ ಪವನ್ ಕುಮಾರ್ ಪ್ರಾಯೋಗಿಕವಾಗಿ ಹತ್ತರಿಂದ ಹದಿನೈದು ಪರೋಪಜೀವಿಗಳನ್ನು ತೆಂಗಿನ ಮರಗಳಿಗೆ ಬಿಡುವ ರೀತಿಯ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಅನಂತರ ಯಾವ ರೈತರ ತೋಟಗಳು ಹಾನಿಯಾಗಿವೆಯೋ, ಅವರೆಲ್ಲರೂ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ಇಲಾಖೆಯ ಜಿ.ಆರ್ ಸಂತೋಷ್ ರೈತರಿಗೆ ತಿಳಿಸಿದರು.
ಈ ಸಂದರ್ಭ ತೋಟಗಾರಿಕೆ ಇಲಾಖೆ ಸಹಾಯಕ ಮಂಜುನಾಥ್, ರೈತರಾದ ಗಂಟೇರ ಅಂಜಿನಪ್ಪ, ಕುಶಪ್ಪರ ಚಂದ್ರಪ್ಪ, ಜಿ.ಮಲ್ಲಿಕಾರ್ಜುನ್, ಗಿರೀಶ್ ಮತ್ತಿತರರಿದ್ದರು.