ಧರ್ಮ ಅವಹೇಳನ: ಖಾಸಗಿ ಶಾಲೆ ಶಿಕ್ಷಕಿ ವಜಾ

KannadaprabhaNewsNetwork |  
Published : Feb 13, 2024, 12:46 AM IST
ಶಾಲಾ ಪ್ರಮುಖರೊಂದಿಗೆ ಮಾತುಕತೆ ನಡೆಸುತ್ತಿರುವ ಶಾಸಕ ವೇದವ್ಯಾಸ ಕಾಮತ್‌. | Kannada Prabha

ಸಾರಾಂಶ

ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆ ಶಿಕ್ಷಕಿ ಅಯೋಧ್ಯೆ ರಾಮಮಂದಿರ ಮತ್ತು ಶ್ರೀರಾಮ ದೇವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಪೋಷಕರಲ್ಲಿ ತಿಳಿಸಿದ್ದರು. ನಂತರ ಇದು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಸಂಘಟನೆಗಳು, ರಾಜಕೀಯ ಮುಖಂಡರು, ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ವಜಾ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೂ ಧರ್ಮದ ಅವಹೇಳನ ಮಾಡಿದ ಆರೋಪ ಹೊಂದಿರುವ ನಗರದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿ ವಜಾಗೊಳಿಸಿದೆ. ಪೋಷಕರು ಮತ್ತು ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ, ಶಿಕ್ಷಕಿ ಸಿಸ್ಟರ್‌ ಪ್ರಭಾ ಅವರನ್ನು ವಜಾ ಮಾಡಿ ಆದೇಶ ಹೊರಡಿಸುವುದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.

ಕೆಲ ದಿನಗಳ ಹಿಂದೆ ಶಿಕ್ಷಕಿ ಪ್ರಭಾ ಅವರು ಅಯೋಧ್ಯೆ ರಾಮಮಂದಿರ ಮತ್ತು ಶ್ರೀರಾಮ ದೇವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಪೋಷಕರಲ್ಲಿ ತಿಳಿಸಿದ್ದರು. ನಂತರ ಇದು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಸಂಘಟನೆಗಳು, ರಾಜಕೀಯ ಮುಖಂಡರು, ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಶಾಲೆ ಎದುರು ಪ್ರತಿಭಟನೆ: ಸೋಮವಾರ ಬೆಳಗ್ಗಿನಿಂದಲೇ ಶಾಲೆ ಗೇಟ್‌ ಹೊರಗೆ ಜಮಾಯಿಸಿದ ಪೋಷಕರು ಹಾಗೂ ಹಿಂದೂ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಬಳಿಕ ಶಾಸಕ ವೇದವ್ಯಾಸ ಕಾಮತ್‌ ಮಧ್ಯಸ್ಥಿಕೆ ವಹಿಸಿ ಶಾಲಾಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯ ತೀವ್ರತೆಗೆ ಮಣಿದ ಆಡಳಿತ ಮಂಡಳಿ ಪ್ರಮುಖರು ಕೊನೆಗೆ ಶಾಲಾ ಲೆಟರ್‌ ಹೆಡ್‌ನಲ್ಲಿ ಶಿಕ್ಷಕಿಯ ವಜಾ ಆದೇಶಪತ್ರ ಹೊರಡಿಸಿದೆ.

ಇದಕ್ಕೂ ಮೊದಲು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪೋಷಕರನ್ನು ಗೇಟ್‌ ಹೊರಗೆ ಪೊಲೀಸರು ತಡೆದರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್‌ ಆಗಮಿಸಿ ಸ್ಥಳದಲ್ಲಿದ್ದ ಬಿಇಒ ಹಾಗೂ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಗೆ ಕರೆಸಿ ತನಿಖೆ ಮಾಡುವುದು ಬಿಟ್ಟು ನೀವೇ ಶಾಲೆಗೆ ಬಂದು ತನಿಖೆ ಮಾಡೋದು ಸರಿಯಾ ಎಂದು ಆಕ್ಷೇಪಿಸಿದರು. ಬಳಿಕ ಶಾಲಾವರಣದ ಒಳಗೆ ತೆರಳಿದ ವೇದವ್ಯಾಸ ಕಾಮತ್‌, ಮುಖ್ಯಶಿಕ್ಷಕಿ ಮತ್ತು ಶಾಲಾಡಳಿತ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಗೇಟ್‌ ಮುರಿದು ಒಳ ಬರಲು ಜನರಿಗೆ ಎಷ್ಟು ಹೊತ್ತಿದೆ? ಹಿಂದೂ ಧರ್ಮ ಅವಹೇಳನ ಮಾಡುವುದು ಎಷ್ಟು ಸರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.ಪ್ರತಿಭಟನೆ ತೀವ್ರತೆ ಪಡೆಯುತ್ತಿರುವುದನ್ನು ಮನಗಂಡ ಶಾಲಾಡಳಿತ ಮಂಡಳಿಯವರು ಏಳನೇ ತರಗತಿ ಶಿಕ್ಷಕಿ ಪ್ರಭಾ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದರು. ಆದೇಶಪತ್ರ ಹಿಡಿದು ಹೊರಬಂದ ಶಾಲೆಯ ಪ್ರಮುಖರು, ಪೋಷಕರ ಎದುರು ಅದನ್ನು ಓದಿಹೇಳಿದರು. ಆದರೆ ಆದೇಶದಲ್ಲಿ ತಪ್ಪು ಒಪ್ಪಿಕೊಂಡಿಲ್ಲ. ತಪ್ಪು ಒಪ್ಪಿಕೊಳ್ಳದಿದ್ದರೆ ಬಿಡಲ್ಲ ಎಂದು ಶಾಸಕ ಕಾಮತ್‌ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತು ನಗರ ಪೊಲೀಸ್‌ ಆಯಕ್ತ ಅನುಪಮ್‌ ಅಗರ್ವಾಲ್ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ಇದಕ್ಕೂ ಮೊದಲು, ವಜಾ ಆದೇಶ ಹೊರಡಿಸಿದ ಬಳಿಕ ಶಾಲೆ ವಿದ್ಯಾರ್ಥಿಗಳು, ಪೋಷಕರು ಶಾಲೆ ಎದುರು ಕುಣಿದು ಸಂಭ್ರಮಾಚರಣೆ ಮಾಡಿದರು. ಹಿಂದೂ ಸಂಘಟನೆ ಮುಖಂಡರು ಇದ್ದರು.ಈ ಪ್ರಕರಣದ ಕುರಿತು ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಲಿದೆ. ಇದರ ವರದಿ ಆಧಾರದ ಮೇಲೆ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.-------------ಡಿಡಿಪಿಐ ಕಚೇರಿಗೆ ಮುತ್ತಿಗೆ ಯತ್ನಶಾಲೆ ಎದುರು ಪ್ರತಿಭಟನೆ ನಡೆಸುವ ಮೊದಲು ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಪೋಷಕರು ಜಿಲ್ಲಾ ಪಂಚಾಯ್ತಿಯಲ್ಲಿರುವ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಮುಖ್ವದ್ವಾರವನ್ನು ಬಂದ್‌ ಮಾಡಿ ಪ್ರತಿಭಟನಾಕಾರರನ್ನು ತಡೆದರು. ಧರ್ಮ ನಿಂದನೆ ಮಾಡಿದ ಶಿಕ್ಷಕಿಯನ್ನು ವಜಾಮಾಡಿ, ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ಜಿಪಂ ಗೇಟ್‌ ಬಳಿ ಆಗಮಿಸಿದ ಡಿಡಿಪಿಐ ದಯಾನಂದ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮಂಗಳವಾರ ಸಂಜೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಬುಧವಾರ ಜಿಲ್ಲಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸರ್ಕಾರ ಶಾಲೆ ಮತ್ತು ಶಿಕ್ಷಕಿಯನ್ನು ರಕ್ಷಿಸುವ ಕೆಲಸ ಮಾಡಿದರೆ ಹಿಂದೂ ಸಮಾಜ ತಿರುಗಿ ಬೀಳಲಿದೆ. ಮೊದಲು ವಜಾಗೊಳಿಸಿ ನಂತರ ತನಿಖೆ ಮಾಡಿ ಎಂದು ಆಗ್ರಹಿಸಿದರು. ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್‌ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಮಹತ್ತರ; ಡಾ. ಪುಷ್ಪಲತಾ
ಕನ್ನಡದ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು