ಕನ್ನಡಪ್ರಭ ವಾರ್ತೆ ಬ್ಯಾಕೋಡು
ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದೇ ರಕ್ತದಾನ ಎಂದು ಶಿವಮೊಗ್ಗ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಹೇಳಿದರು.ಬ್ಯಾಕೋಡು ಸಮೀಪದ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಪೂಜ್ಯ ಶ್ರೀ ರಾಮಪ್ಪಾಜಿ ಅಭಿಮಾನಿ ಬಳಗ, ಹಾಗೂ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ವತಿಯಿಂದ ಸಿಗಂದೂರು ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಶ್ರೇಷ್ಠ ಎನ್ನುವುದು ಎಂದು ತಿಳಿಸಿದರು.ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಮಾತನಾಡಿ, ಹಿಂದಿನಿಂದಲೂ ದೇವಸ್ಥಾನವು ಸಾರ್ವಜನಿಕರಿಗೆ ಒಳಿತಾಗುವ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದು, ಈಗ ಅಭಿಮಾನಿಗಳು ಹಾಗೂ ಕ್ಷೇತ್ರದ ಭಕ್ತರು ಸೇರಿ ಕಷ್ಟದಲ್ಲಿರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ಸಂತಸ ತಂದಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಪ್ರಾಸ್ತಾವಿಕವಾಗಿ ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಕೃತಕವಾಗಿ ತಯಾರುಮಾಡಲು ಆಗದೆ ಇರುವ ವಸ್ತು ಎಂದರೆ ಅದು ರಕ್ತ. ಒಬ್ಬರಿಗೊಬ್ಬರು ಹಂಚಿಕೊಂಡಾಗ ಸಾಕಷ್ಟು ಜೀವಗಳು ಉಳಿಯುತ್ತವೆ. ಸಿಗಂದೂರು ಈಗ ಜೀವ ಉಳಿಸುವ ಕೆಲಸಕ್ಕೆ ಸಾಕ್ಷಿಯಾಗಿದೆ. ನಾರಯಣ ಗುರುಗಳ ಪ್ರಮುಖ ಧ್ಯೆಯೆಗಳಾದ ಶಿಕ್ಷಣ, ಆರೋಗ್ಯ, ದಾನ, ಸಮಾನತೆ ಇನ್ನೂ ಹಲವು ಕಾರ್ಯಗಳಿಗೆ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿ ಎಂದರು.ಶಿವಮೊಗ್ಗ ರಕ್ತನಿಧಿ ಕೇಂದ್ರದದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 89 ಜನರು ಹೆಚ್ಚು ಜನರು ರಕ್ತದಾನ ಮಾಡಿದರು. 98 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಯಿತು.
"ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ " ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಇಲ್ಲಿಯವರೆಗೆ 63 ಶಾಲೆಗಳನ್ನು. ಪೂರೈಸಿದ್ದು, 64 ಮತ್ತು 65ನೇ ಶಾಲೆಗಳಾಗಿ ಮರಾಠಿ ಹಾಗೂ ಹುರುಳಿ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ವಿತರಿಸಲಾಯಿತು. ರಕ್ತ ದಾನಿಗಳಿಗೆ ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲಕ್ಷಿತ, ಅಭಿಮಾನಿ ಬಳಗದ ಸಂಚಾಲಕರು, ದೇವಾಲಯದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ಮತ್ತಿತರರು ಹಾಜರಿದ್ದರು.