ರಕ್ತದಾನ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ: ಶ್ರೀ ಚನ್ನಬಸವ ಶ್ರೀ

KannadaprabhaNewsNetwork |  
Published : May 11, 2026, 01:45 AM IST
ರಕ್ತದಾನ ಶಿಬಿರಕ್ಕೆ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಜಾತಿ ಧರ್ಮಕ್ಕೆ ಸೀಮಿತವಾಗದೆ ಅಗತ್ಯವಿರುವ ರೋಗಿಗೆ ರಕ್ತದಾನದಿಂದ ಆರೋಗ್ಯಪೂರ್ಣವಾದ ಸಮಾಜ ನಿರ್ಮಾಣವಾಗಲಿದೆ ಎಂದು ಇಲ್ಲಿನ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಜಾತಿ ಧರ್ಮಕ್ಕೆ ಸೀಮಿತವಾಗದೆ ಅಗತ್ಯವಿರುವ ರೋಗಿಗೆ ರಕ್ತದಾನದಿಂದ ಆರೋಗ್ಯಪೂರ್ಣವಾದ ಸಮಾಜ ನಿರ್ಮಾಣವಾಗಲಿದೆ ಎಂದು ಇಲ್ಲಿನ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಭಾನುವಾರ ಪಟ್ಟಣದ ಕುಂಬಾರಗುಂಡಿಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗ, ಶ್ರೀ ಮುರುಘರಾಜೇಂದ್ರ ವಿರಕ್ತಮಠ ಟ್ರಸ್ಟ್, ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ, ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿ ಶಿವಮೊಗ್ಗ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಹಾಗೂ ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು ಎಂದು ಪ್ರಸಿದ್ದರಾಗಿದ್ದ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸತತ 16ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಕ್ತದಾನ ಅತ್ಯಂತ ಪುಣ್ಯದ ಕಾರ್ಯವಾಗಿದ್ದು, ಆರೋಗ್ಯವಂತ ವ್ಯಕ್ತಿಯ ರಕ್ತದಾನದಿಂದ ಅಗತ್ಯವಿರುವ 4 ರೋಗಿಗಳಿಗೆ ಉಪಯೋಗವಾಗಲಿದೆ ಎಂದ ಅವರು, ರಕ್ತಕ್ಕೆ ಜಾತಿ ಧರ್ಮದ ಬೇಧವಿಲ್ಲ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನದ ಮೂಲಕ ಸಾಮಾಜಿಕ ಸೇವೆಯಲ್ಲಿ ಸಾರ್ಥಕತೆಯನ್ನು ಪಡೆಯಲು ಸಾದ್ಯ ಎಂದು ತಿಳಿಸಿದರು.

ರಕ್ತದಾನ ಜಗಜ್ಯೋತಿ ಬಸವೇಶ್ವರರ ಸಮ ಸಮಾಜ ನಿರ್ಮಾಣದ ಕನಸಿಗೆ ಪೂರಕವಾಗಿದ್ದು, ಜಾತಿ ಮತ ಮೇಲು ಕೀಳು ಬೇಧವಿಲ್ಲದೆ ಅಗತ್ಯವಿರುವ ರೋಗಿಗೆ ರಕ್ತದಾನದಿಂದ ಸಮ ಸಮಾಜದ ಜತೆಗೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದ ಅವರು, ಈ ದಿಸೆಯಲ್ಲಿ ಜಗಜ್ಯೋತಿ ಬಸವೇಶ್ವರ ಯುವ ಬಳಗ ಬಸವಣ್ಣನವರ ಆಶಯ ತತ್ವಾದರ್ಶಗಳಿಗೆ ಪೂರಕವಾಗಿ ಕಳೆದ 15 ವರ್ಷದಿಂದ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸಿ ಯುವ ಪೀಳಿಗೆಯಲ್ಲಿ ರಕ್ತದ ಮಹತ್ವದ ಬಗ್ಗೆ ಜಾಗೃತಿ ರೂಪಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ತುರ್ತು ಅಗತ್ಯದ ಸಂದರ್ಭದಲ್ಲಿ ಬಳಗ ರಕ್ತವನ್ನು ಪೂರೈಸಿ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬಸವಣ್ಣನವರ ತತ್ವಾದರ್ಶಗಳಿಗೆ ಪೂರಕವಾಗಿ ಬಳಗದ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದು, ರಕ್ತದಾನ ಶಿಬಿರದ ಜತೆಗೆ ಸಾಣೇಹಳ್ಳಿಯ ಪ್ರಸಿದ್ದ ಶಿವ ಸಂಚಾರ ನಾಟಕ ತಂಡದಿಂದ ವಾರದ ಕಾಲ ನಾಟಕೋತ್ಸವ, ಸಿದ್ದಗಂಗಾ ಶ್ರೀಗಳ ಜಯಂತಿ ಅಂಗವಾಗಿ ಪ್ರತಿ ವರ್ಷ ಅನ್ನದಾಸೋಹ ಮತ್ತಿತರ ಹಲವು ಸಮಾಜಮುಖಿ ಕಾರ್ಯದಿಂದ ಮಾದರಿಯಾಗಿದೆ ಎಂದು ತಿಳಿಸಿದರು.

ಬಳಗದ ಅಧ್ಯಕ್ಷ ಡಿ.ಕೆ ಪ್ರವೀಣ್ ಕುಮಾರ್ ಮಾತನಾಡಿ, ಪ್ರತಿಫಲಾಪೇಕ್ಷೆಯಿಲ್ಲದ ಸಾಮಾಜಿಕ ಕಾರ್ಯ ಬಳಗದ ದ್ಯೇಯವಾಗಿದ್ದು, ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಬಳಗ ಕಾರ್ಯನಿರ್ವಹಿಸುತ್ತಿದೆ, ಸದಸ್ಯರ ನಿಸ್ವಾರ್ಥ ಸಹಕಾರ ಉತ್ತಮ ಕಾರ್ಯಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ 54 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಕಾರ್ಯದರ್ಶಿ ಪ್ರವೀಣ್ ಜಿ, ನವೀನ್ ಶಾಸ್ತ್ರಿ, ಡಿ.ಸಿ ಪ್ರಸಾದ್, ಸಂಜಿತ್ ಎಚ್.ಬಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ, ಹದಡಿ ಪ್ರವೀಣ್, ರಾಜೇಂದ್ರ ಪ್ರಸಾದ್, ಸಿದ್ದಲಿಂಗೇಶ್ ಕ್ವಾರಡಿ, ವಿವೇಕ್, ಗುರುಪ್ರಸಾದ್ ಮಡ್ಡಿ, ವಾಗೀಶ್ ಸ್ವಾಮಿ, ಜಯಣ್ಣ, ಜಡಿಯಪ್ಪ ಪಸಾರದ, ಶಿವಮೊಗ್ಗ ರಕ್ತ ನಿಧಿ ಕೇಂದ್ರದ ಧರಣೇಂದ್ರ ದಿನಕರ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಜಯಂತಿ ಆಚರಣೆಯಲ್ಲಿ ಲೋಪ: 15ರಂದು ದಸಂಸ ಪ್ರತಿಭಟನೆ
ಬಸ್‌ ಡಿಕ್ಕಿ ನವವಿವಾಹಿತ ಬೈಕ್‌ ಸವಾರ ಸಾವು