9 ಮೊಬೈಲ್ಗಳು, 4 ಬ್ಲೂಟೂತ್ ಡಿವೈಎಸ್, ವಾಕಿಟಾಕಿ ಜಪ್ತಿ
ಶನಿವಾರ ಸಂಜೆ ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಜಿ.ಸಂಗೀತಾ, ಬ್ಲೂಟೂತ್ ಅಕ್ರಮ ಕುರಿತು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ನೀಡಿರುವ ದೂರಿನಂತೆ, ಐಪಿಸಿ ವಿವಿಧ ಕಲಂ ಗಳ ಅಡಿಯಲ್ಲಿ ನಗರ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದರು. (ಅಪರಾಧ ಸಂಖ್ಯೆ : 144/2023, 145/2023, 146/2023, 147/2023 ಹಾಗೂ 148/2023)
ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜು, ಸರ್ಕಾರ ಪದವಿ ಪೂರ್ವ ಕಾಲೇಜು, ಸಭಾ ಪಿಯು ಕಾಲೇಜು, ಮಹಾತ್ಮಾಗಾಂಧಿ ಪಿಯು ಕಾಲೇಜು ಹಾಗೂ ಎಲ್ಕೆಇಟಿ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಆರೋಪಿ ಅಭ್ಯರ್ಥಿಗಳು ಬ್ಲೂಟೂತ್ ನಕಲು ನಡೆಸಲೆತ್ನಿಸಿದ್ದರು ಎಂಬ ಆರೋಪದಡಿ, ಈ 9 ಜನರನ್ನು ಬಂಧಿಸಲಾಗಿತ್ತು.ಬಂಧಿತರಿಂದ 8 ಮೊಬೈಲ್, 4 ಬ್ಲೂಟೂತ್ ಡಿವೈಸ್, 2 ವಾಕಿಟಾಕಿ ಹಾಗೂ ನಕಲು ಮಾಡಲು ಅನುಕೂಲವಾಗಲೆಂದೇ ವಿಶೇಷವಾಗಿ ಹೊಲಿಸಲಾಗಿದ್ದ ಅಂಗಿ, ಬನಿಯನ್ ಹಾಗೂ ಒಳ ಉಡುಪುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆಯ 17 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದು, 7 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಶನಿವಾರ ಬೆಳಗ್ಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿದ್ದರಿಂದ, ಮಧ್ಯಾಹ್ನ ಹಾಗೂ ಮರುದಿನ (ಭಾನುವಾರ) ಪರೀಕ್ಷೆಗಳಲ್ಲಿ ಅಕ್ರಮಕ್ಕೆ ಸಿದ್ಧತೆ ನಡೆಸಿದ್ದ ಅನೇಕರು ಕಾಲ್ಕಿತ್ತು, ಗೈರಾಗಿದ್ದಾರೆನ್ನಲಾಗಿದೆ.
ಬಂಧಿತ ಆರೋಪಿಗಳು : ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕು ಸೊನ್ನ ಗ್ರಾಮದ ಸಿದ್ರಾಮ ಖಾನಾಪುರ, ಅಫಜಲ್ಪೂರ ತಾಲೂಕು ಚಿಂಚೋಳಿಯ ಸಾಗರ್ ಜಮಾದಾರ್, ಕಲಬುರಗಿಯ ಹಿರೇ ರಾಜಾಪೂರಿನ ನಿವಾಸಿ ನಿರಂಜನ್ ಸರಡಗಿ, ಅಫಜಲ್ಪೂರ ತಾಲೂಕು ಹಳಗಿಯ ಸಂತೋಷ್ ಸೊನ್ನ, ಡೊಣ್ಣೂರು ಗ್ರಾಮದ ಬಾಬುರಾವ್ ಸೊನ್ನ, ಜೇರಟಗಿಯ ಹಸನ್ ಸಾಬ್ ಮುಳ್ಳೊಳ್ಳಿ, ಅಫಜಲ್ಪುರದ ರಾಕೇಶ್ ಬಿರಾದರ್, ಬಾದರಹಳ್ಳಿಯ ಬಾಬುರಾವ್ ಜಮಾದಾರ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಆಲಮೇಲದ ಪ್ರವೀಣ್ ಪೋದ್ದಾರ ಬಂಧಿತ ಆರೋಪಿಗಳ ವಿಚಾರಣೆ ನಂತರ ಭಾನುವಾರ ಸಂಜೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.