ಪ್ರಯಾಣಿಕರು ಹೆಚ್ಚಿದರೂ ಬಿಎಂಟಿಸಿ ಬಸ್‌ ಟ್ರಿಪ್‌ ಕಡಿತ!

KannadaprabhaNewsNetwork |  
Published : May 01, 2024, 02:01 AM IST
ಬಿಎಂಟಿಸಿ ಬಸ್‌ | Kannada Prabha

ಸಾರಾಂಶ

ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದರೂ ಬಿಎಂಟಿಸಿ ಬಸ್‌ಗಳ ಟ್ರಿಪ್‌ಗಳನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಕಾರಣ ಬೇಡಿಕೆಗೆ ತಕ್ಕಂತೆ ನಿಗಮದಲ್ಲಿ ಬಸ್‌ಗಳು ಲಭ್ಯವಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸಾರ್ವಜನಿಕರ ಜೀವನಾಡಿಯಾದ ಬಿಎಂಟಿಸಿ ಬಸ್‌ಗಳ ಟ್ರಿಪ್‌ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಪರಿಣಾಮ ಬಸ್‌ಗಳಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಬಸ್‌ಗಳ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗದ ಕಾರಣ, 520 ಟ್ರಿಪ್‌ಗಳು ಕಡಿತ ಮಾಡಲಾಗಿದೆ.

ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಖಾಸಗಿ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸದ್ಯ ನಗರದಲ್ಲಿ 1 ಕೋಟಿಗೂ ಹೆಚ್ಚಿನ ವಾಹನಗಳಿವೆ. ಆದರೆ, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾಗಿ ಬಸ್‌ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಬಸ್‌ಗಳಲ್ಲಿ ಒತ್ತಡ ಹೆಚ್ಚುವಂತಾಗಿದೆ.

ಬಿಎಂಟಿಸಿ ಅಂಕಿ ಅಂಶದ ಪ್ರಕಾರ 2017-18ರಿಂದ 2023-24ರ ಜನವರಿವರೆಗೆ 3,375 ಬಸ್‌ಗಳನ್ನು ಗುಜರಿಗೆ ಹಾಕಲಾಗಿದೆ. ಆದರೆ, ಇದೇ ಅವಧಿಯಲ್ಲಿ ನಿಗಮಕ್ಕೆ 3,370 ಬಸ್‌ಗಳು ಮಾತ್ರ ಸೇರ್ಪಡೆಯಾಗಿವೆ. ಪ್ರಯಾಣಿಕರ ಸಂಖ್ಯೆಯನ್ವಯ ಬಿಎಂಟಿಸಿ ಸಮರ್ಪಕವಾಗಿ ಸೇವೆ ನೀಡಲು ಕನಿಷ್ಠ 10 ಸಾವಿರ ಬಸ್‌ಗಳ ಅವಶ್ಯಕತೆಯಿದೆ. ಆದರೆ, ಸದ್ಯ 6 ಸಾವಿರ ಬಸ್‌ಗಳು ಮಾತ್ರ ಸೇವೆಗೆ ಲಭ್ಯವಿದೆ. ಪ್ರಸಕ್ತ ವರ್ಷದಲ್ಲಿ 1,900 ಹೊಸ ಬಸ್‌ಗಳ ಸೇರ್ಪಡೆಗೆ ಸರ್ಕಾರ ಮುಂದಾಗಿದೆಯಾದರೂ ಅಂಕಿ ಅಂಶಗಳನ್ನು ಗಮನಿಸಿದರೆ ಆ ಸಂಖ್ಯೆಯೂ ಕಡಿಮೆಯಾಗಲಿದೆ.

ಹೀಗಾಗಿ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗದ ಕಾರಣ ಟ್ರಿಪ್‌ಗಳ ಸಂಖ್ಯೆ ಕಡಿತಗೊಳ್ಳುತ್ತಿದೆ. 2017-18ರಲ್ಲಿ 6,159 ಟ್ರಿಪ್‌ಗಳಲ್ಲಿ ಸೇವೆ ನೀಡಲಾಗುತ್ತಿತ್ತು. ಅದೇ ಈಗ ಆ ಸಂಖ್ಯೆ 5,639 ಟ್ರಿಪ್‌ಗಳಲ್ಲಿ ಸೇವೆ ನೀಡಲಾಗುತ್ತಿದೆ. ಅದರ ನಡುವೆ ಶಕ್ತಿ ಯೋಜನೆ ಜಾರಿಯಿಂದಾಗಿ ಕಳೆದ ಜೂನ್‌ನಿಂದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೀಗಾಗಿ ಟ್ರಿಪ್‌ಗಳ ಸಂಖ್ಯೆ ಹೆಚ್ಚಳಕ್ಕೆ ಬೇಡಿಕೆಯಿದೆಯಾದರೂ, ಹೊಸ ಬಸ್‌ಗಳ ಸೇರ್ಪಡೆ ಆಗುವವರೆಗೂ ಟ್ರಿಪ್‌ಗಳ ಸಂಖ್ಯೆ ಹೆಚ್ಚಳ ಕಷ್ಟವಾಗಲಿದೆ. ಆದರೂ, ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಟ್ರಿಪ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ