ಬೈಂದೂರು: ಇಲ್ಲಿನ ಶಿರೂರು ಸಮೀಪ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿದ್ದು, ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.ಈ ನಾಡದೋಣಿಯಲ್ಲಿದ್ದ ಮೀನುಗಾರರು ಪಡುವರಿ ಗ್ರಾಮದ ನಾಗರಾಜ್ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಮತ್ತು ಮತ್ತೊಬ್ಬ ನಾಗರಾಜ್ ಖಾರ್ವಿ ಎಂದು ಗುರುತಿಸಲಾಗಿದೆ.
ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಶೇಖರ ಖಾರ್ವಿ ಮತ್ತು ಇತರ ಮೀನುಗಾರರು ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ ಐದು ಮಂದಿಯನ್ನೂ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.
ದೋಣಿ ಸಂಪೂರ್ಣವಾಗಿ ಹಾಳಾಗಿದೆ. ದೋಣಿಯಲ್ಲಿದ್ದ ಎಂಜಿನ್, ಜಿಪಿಎಸ್ ಸಾಧನ, ಫಿಶ್ ಫೈಂಡರ್, ಐದು ಜೋಡಿ ಮೀನುಗಾರಿಕೆ ಬಲೆಗಳು ಹಾಗೂ 30 ಸಾವಿರ ರು. ನಗದು ಸಮುದ್ರಕ್ಕೆ ಬಿದ್ದು ಹೋಗಿವೆ. ಸುಮಾರು 7 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕರಾವಳಿ ಸುರಕ್ಷತಾ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.