ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವ ಪತ್ತೆ

KannadaprabhaNewsNetwork | Published : May 15, 2025 1:34 AM
Follow Us

ಸಾರಾಂಶ

5 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಡಗು - ಹಾಸನ ಗಡಿಭಾಗದ ಸಕಲೇಶಪುರ ತಾಲೂಕಿನ ಹೊಸಳ್ಳಿ ಮಠದ ನಿರ್ಜನ ಪ್ರದೇಶದಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದೊರೆತಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಡಗು- ಹಾಸನ ಗಡಿಭಾಗದ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಮಠದ ನಿರ್ಜನ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದೊರೆತಿದೆ.

ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ದಾಮೋದರ ನಾಯರ್ ಅವರ ದ್ವಿತೀಯ ಪುತ್ರ ಸಂಪತ್ ಅಲಿಯಾಸ್ ಶಂಭು (45) ಕೊಲೆಯಾದವರು. ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ರಕ್ತಸಿಕ್ತವಾದ ಕಾರು ಮೇ 10ರ ಶನಿವಾರ ಕಂಡು ಬಂದಿತ್ತು.

ಶನಿವಾರ ಬೆಳಗ್ಗೆ ಕಾರ್ಮಿಕರನ್ನು ಕರೆತಂದ ಕಾರಿನ ಚಾಲಕನೋರ್ವ ಅಪರಿಚಿತ ರಕ್ತಸಿಕ್ತ ಕಾರನ್ನು ಗಮನಿಸಿ, ಯಸಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಯಸಳೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ತನಿಖೆ ಮಾಡಿದ ನಂತರ ಕಾರು ಮಾಲೀಕ ಕುಶಾಲನಗರದ ಜಾನ್ ಎಂಬುದು ತಿಳಿದಿದೆ. ಈ ಕುರಿತು ಕಾರಿನ ಮಾಲೀಕ ಜಾನ್ ಎಂಬುವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕುಶಾಲನಗರ, ಸೋಮವಾರಪೇಟೆ, ಯಸಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ಸೋಮವಾರಪೇಟೆಯಿಂದ ಯಸಳೂರು, ಸಕಲೇಶಪುರ ಮಾರ್ಗದ ಎಲ್ಲಾ ಸಿ.ಸಿ. ಕ್ಯಾಮೆರಾಗಳ ಫೂಟೇಜ್‌ಗಳನ್ನು ಪರಿಶೀಲಿಸಿದ ಸಂದರ್ಭ ಸಂಪತ್ ತೆರಳಿದ ಕಾರಿನ ಜೊತೆಯಲ್ಲೇ ಮತ್ತೆರಡು ಕಾರುಗಳು ತೆರಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರು ಸಂಪತ್ ಜೊತೆಯಲ್ಲಿ ಗಲಾಟೆ ಮಾಡಿಕೊಂಡಿರುವ ಅನೇಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಅದರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ. ಸಂಪತ್ ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ಖಚಿತವಾಗುತ್ತಿದ್ದಂತೆ ಬುಧವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಹಾಗು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಶ್ವಾನದಳ ಹಾಗು ಬೆರಳಚ್ಚು ತಜ್ಞರು ದಾಖಲೆಯನ್ನು ಸಂಗ್ರಹಿಸಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬುಧವಾರದಂದು ಸಂಜೆ ಸಾಗಿಸಲಾಗಿದೆ.

ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ. ಇನ್ನು ಹಲವರ ವಿಚಾರಣೆ ನಡೆಸಬೇಕಿದ್ದು, ಸದ್ಯಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಸ್ಪಿ ರಾಮರಾಜನ್ ಹೇಳಿದ್ದಾರೆ.

ತನಿಖೆಗೆ ಸಿಗದ ಈರ್ವರು: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ!

ಕೊಲೆಯ ನಂತರ ಆರೋಪಿಗಳು ನಾಪತ್ತೆಯಾಗಿದ್ದು, ಐದು ದಿವಸಗಳಾದರೂ ಪೊಲೀಸರಿಗೆ ಮಾಹಿತಿ ದೊರೆತಿಲ್ಲ. ಪ್ರಕರಣದ ಸಂಬಂಧ ಭಾನುವಾರದಿಂದ ಹಲವರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಎಲ್ಲಾ ಆಯಾಮಾಗಳಿಂದ ತನಿಖೆ ಮುಂದುವರೆಸಿದ್ದಾರೆ. ಈರ್ವರು ವಿಚಾರಣೆಗೆ ಸಿಗದೆ ತಲೆಮರೆಸಿಕೊಂಡಿದ್ದು, ಈವರೆಗೂ ಪೊಲೀಸರ ತನಿಖೆಗೆ ಸಿಗುತ್ತಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಗುಮಾನಿಗೆ ಎಡೆಮಾಡಿಕೊಟ್ಟಿದೆ.

ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು, ಬೆಳಗಿನ ಜಾವ 4.30ಕ್ಕೆ ಮಾಗೇರಿ ಸಮೀಪದ ಬಾಣಗೇರಿ ಬಳಿಯ ಕಲ್ಲಹಳ್ಳಿಯಲ್ಲಿ ಸಂಪತ್ ಚಲಿಸಿರುವ ಕಾರು ಪತ್ತೆಯಾಗಿದೆ. ಅದರ ಹಿಂದೆಯೇ ಎರಡು ಕಾರುಗಳು ಸಂಚರಿಸಿರುವುದು ಅಲ್ಲೇ ಸಮೀಪದಲ್ಲಿರುವ ಹೋಂ ಸ್ಟೇವೊಂದರ ಸಿಸಿ ಟಿವಿ ಫೂಟೇಜ್ನಲ್ಲಿ ದಾಖಲಾಗಿದೆ. ನಂತರ ಸಂಪತ್ ನ ಶವವನ್ನು ಕಾರು ನಿಲ್ಲಿಸಿದ ಸನಿಹ ದೂರದಲ್ಲಿರುವ ಹೊಸಳ್ಳಿ ಮಠದ ನಿರ್ಜನ ಪ್ರದೇಶದಲ್ಲಿ ಬಿಸಾಡಿರುವ ಆರೋಪಿಗಳು ಮತ್ತೆ ಸೋಮವಾರಪೇಟೆಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ.

ಐದು ದಿನಗಳ ನಂತರ ಸಂಪತ್ ಶವ ಪತ್ತೆ, ಆರೋಪಿಗಳು ನಾಪತ್ತೆ!

ಭಾನುವಾರದವರೆಗೂ ಫೋನ್ ರಿಸೀವ್ ಮಾಡಿರುವ ಈರ್ವರು ಭಾನುವಾರ ಬೆಳಗ್ಗೆ ಓರ್ವ ಮೈಸೂರಿಗೆ ತೆರಳಿದ್ದು, ಮತ್ತೋರ್ವ ಭಾನುವಾರ ಸಂಜೆ ಕಣ್ಮರೆಯಾಗಿದ್ದಾರೆ. ನಂತರ ಪೊಲೀಸರು ಕರೆ ಮಾಡಿದಾಗ ಈರ್ವರೂ ಕೂಡ ತಮ್ಮ ಮನೆಗಳಲ್ಲಿ ಮೊಬೈಲ್ ಫೋನ್ ಅನ್ನು ಇಟ್ಟು ಪಟ್ಟಣದಿಂದ ಪರಾರಿಯಾಗಿದ್ದಾರೆ. ಘಟನೆ ಸಂಭವಿಸಿ ಐದು ದಿನಗಳ ನಂತರ ಸಂಪತ್ ನ ಶವ ಪತ್ತೆಯಾಗಿದ್ದು, ಆರೋಪಿಗಳು ಮಾತ್ರ ನಾಪತ್ತೆಯಾಗಿರುವುದು ಪೊಲೀಸರ ಪಾಲಿಗೆ ಯಕ್ಷಪ್ರಶ್ನೆಯಾಗಿದೆ.

ಪ್ರಕರಣದ ಕುರಿತು ತಾಲೂಕು ಕಚೇರಿಯ ಮಹಿಳಾ ಅಧಿಕಾರಿಯೋರ್ವರು ಸೇರಿದಂತೆ ಈರ್ವರು ಮಹಿಳೆಯರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು, ಅವರಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಸೋಮವಾರಪೇಟೆಯ ಹಾನಗಲ್ ಗ್ರಾಮಕ್ಕೆ ಬಂದಿರುವ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು, ಸೂರ್ಲಬ್ಬಿ, ಹಾನಗಲ್, ಯಡವನಾಡು, ಕುಶಾಲನಗರ, ಸೋಮವಾರಪೇಟೆ, ಯಸಳೂರು ವ್ಯಾಪ್ತಿಯ ಮಾಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶವ ಪತ್ತೆಗಾಗಿ ಕಳೆದ ಐದು ದಿನಗಳಿಂದ ಹರಸಾಹಸ ಪಟ್ಟಿದ್ದಾರೆ. ಇದರೊಂದಿಗೆ ಸ್ಥಳೀಯರು ಹಾಗೂ ಸೋಮವಾರಪೇಟೆಯ ಹಲವು ಯುವಕರು ಶವ ಪತ್ತೆಗಾಗಿ ಶ್ರಮಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ, ಸೋಮವಾರಪೇಟೆ ಹಾಗೂ ಯಸಳೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳ ಹುಡುಕಾಟಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಕೊಲೆಗೆ ಕಾರಣ?

ಮೃತ ಸಂಪತ್ ಕೆಲವು ವ್ಯಕ್ತಿಗಳ ರಹಸ್ಯ ವಿಡಿಯೋಗಳ ಪೆನ್ ಡ್ರೈವ್ ಇಟ್ಟುಕೊಂಡಿದ್ದು, ಅದರಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದ ಕುರಿತು ಕೊಲೆ ಆರೋಪಿಗಳು ಹಾಗೂ ಮೃತ ಸಂಪತ್ ನಡುವೆ ಕಳೆದ ಒಂದುವರೆ ತಿಂಗಳಿನಿಂದ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಸಂಪತ್ ಗೆ ಸೇರಿದ ಕಾರಿನಲ್ಲಿ ಪೆನ್ ಡ್ರೈವ್ ಪತ್ತೆಯಾಗಿದ್ದು, ಪೊಲೀಸರು ಪೆನ್ ಡ್ರೈವ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸಂಪತ್‌ನ ಆಪ್ತ ಸ್ನೇಹಿತೆಯರ ವಿಚಾರವಾಗಿ ಆತನ ಒಂದು ಕಾಲದ ಆಪ್ತ ಮಿತ್ರರ ನಡುವೆ ಕಳೆದ ಒಂದುವರೆ ತಿಂಗಳಿನಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಕೊಲೆಗೆ ಸಹಕರಿಸಿರುವವರ ಕುರಿತು ಹೆಚ್ಚಿನ ಮಾಹಿತಿಗಳು ಪೊಲೀಸರಿಗೆ ಕೊಲೆ ಆರೋಪಿಗಳು ಪತ್ತೆಯಾದ ನಂತರವಷ್ಟೇ ಲಭಿಸಬೇಕಾಗಿದೆ.