ಪಾವಗಡ: ರಸ್ತೆ ಬದಿನಿಂತಿದ್ದ ಆಟೋಗೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ ಆಂಧ್ರದ ಕಂಬದೂರು ತಾ.ಕುರಲಪಲ್ಲಿ ಮಂದಲಟ್ಟಿ ಬಳಿ ನಡೆದಿದೆ.
ಪಾವಗಡ ತಾಲೂಕಿನ ಆರ್.ಡಿ.ರೊಪ್ಪದ ಅನ್ನಪೂರ್ಣಮ್ಮ 45 ಸಾವನ್ನಪ್ಪಿದ ಮಹಿಳೆ.ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಹೋಬಳಿಯ ಆರ್.ಡಿ.ರೊಪ್ಪ ಗ್ರಾಮದ ಮಹಿಳೆಯರು ಆಂಧ್ರದ ಕಂಬದೂರು ಹಾಗೂ ಸುತ್ತಮುತ್ತ ಗ್ರಾಮಗಳ ಜಮೀನುಗಳಿಗೆ ಕೂಲಿ ಕೆಲಸಕ್ಕಾಗಿ ಪ್ಯಾಸೆಂಜರ್ ಆಟೋದಲ್ಲಿ ನಿತ್ಯ ತೆರಳುತ್ತಿದ್ದರು. ಎಂದಿನಂತೆ ಸೋಮವಾರ ಬೆಳಗ್ಗೆ 16 ಮಂದಿ ಕೂಲಿಕಾರರು ಪ್ಯಾಸೆಂಜರ್ ಆಟೋದಲ್ಲಿ ಆಂಧ್ರ ಪ್ರದೇಶದ ರೈತರ ಜಮೀನುಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಆಂಧ್ರದ ಕಂಬದೂರು ತಲುಪುತ್ತಿದ್ದಂತೆ ಅಲ್ಲಿನ ಹೊರವಲಯ ಕುರಲಪಲ್ಲಿ ಮಂದಲಟ್ಟಿಯ ಸಮೀಪ ರಸ್ತೆ ಪಕ್ಕದಲ್ಲಿ ಆಟೋ ನಿಲ್ಲಿಸಿದ್ದ ವೇಳೆ ಎದುರುಗಡೆಯಿಂದ ಬುಲೆರೋ ವಾಹನ ಡಿಕ್ಕಿಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಅನ್ನಪೂರ್ಣಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಟೋ ಚಾಲಕ ರಾಮು ಸೇರಿದಂತೆ 8 ಮಂದಿ ಕೂಲಿಯ ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ.ಆಟೋ ಚಾಲಕನನ್ನು ಆಂಧ್ರದ ಆನಂತಪುರ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಘಾತದಲ್ಲಿ ಗಾಯಗೊಂಡಿದ್ದ ಕೂಲಿ ಕೆಲಸದ ಮಹಿಳೆಯರನ್ನು ಕಂಬದೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರದ ಕಂಬದೂರು ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಮಕ್ಕೆ ಆಗ್ರಹ: ಈ ಕುರಿತು ತಾಲೂಕು ಜೆಡಿಎಸ್ ಮುಖಂಡ ಭೀಮನಕುಂಟೆಯ ವೈ.ಆರ್.ಚೌಧರಿ ಮಾಧ್ಯಮದ ಜತೆ ಮಾತನಾಡಿ, ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಭೀಮನಕುಂಟೆ, ಆರ್.ಡಿ.ರೊಪ್ಪ ದಳವಾಯಿಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಆನೇಕ ಮಂದಿ ಮಹಿಳೆಯರು ಆಂಧ್ರದ ಕಂಬದೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ನಿತ್ಯ ತೆರಳುತ್ತಾರೆ. ಇವರನ್ನು ಪ್ಯಾಸೆಂಜರ್ ಆಟೋದವರು ಕೂಲಿ ಕೆಲಸಕ್ಕೆ ಕರೆದ್ಯೊಯುತ್ತಿದ್ದು, ಈ ಆಟೋಗಳಿಗೆ ಸರಿಯಾದ ದಾಖಲೆ ಇರುವುದಿಲ್ಲ. ನಿತ್ಯ ಆಟೋಗಳಲ್ಲಿ ಮಿತಿಮೀರಿ ಕೂಲಿಕಾರರನ್ನು ಆಂಧ್ರಕ್ಕೆ ಕರೆದ್ಯೊಯುತ್ತಿರುತ್ತಾರೆ. ಈ ಬಗ್ಗೆ ಮಾಹಿತಿ ಇದ್ದರೂ ಸಂಬಂಧಪಟ್ಟ ತಾ.ಹೊಸಕೋಟೆ ಪೊಲೀಸರು ಕ್ರಮ ಜರುಗಿಸುತ್ತಿಲ್ಲ. ಪ್ಯಾಸೆಂಜರ್ ಆಟೋಗಳಲ್ಲಿ ಆಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವುದರ ವಿರುದ್ಧ ಸ್ಥಳೀಯ ಪೊಲೀಸರು ಕ್ರಮವಹಿಸುವಂತೆ ಅವರು ಆಗ್ರಹಿಸಿದ್ದಾರೆ.