ಭಟ್ಕಳ, ಕಾರವಾರ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ; ಹೈ ಅಲರ್ಟ್ ಘೋಷಣೆ

KannadaprabhaNewsNetwork |  
Published : Dec 17, 2025, 02:30 AM IST
ಕಾರವಾರ ತಹಸೀಲ್ದಾರ್ ಕಚೇರಿಗೆ ಭದ್ರತೆ ಒದಗಿಸಿರುವುದು. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಆಯಕಟ್ಟಿನ ಪ್ರದೇಶಗಳಾದ ಭಟ್ಕಳ ಹಾಗೂ ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆಯು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

ಆತಂಕಪಡುವ ಅಗತ್ಯವಿಲ್ಲ: ಎಸ್ಪಿ ದೀಪನ್ ಎಂ.ಎನ್

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಆಯಕಟ್ಟಿನ ಪ್ರದೇಶಗಳಾದ ಭಟ್ಕಳ ಹಾಗೂ ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆಯು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

ಬೆಳಗ್ಗೆ ಸುಮಾರು 7.20ರ ವೇಳೆಗೆ ''ಗಯನಾ ರಮೇಶ್'' ಎಂಬುವವರ ಹೆಸರಿನ ಮೇಲ್ ಖಾತೆಯಿಂದ ಭಟ್ಕಳ ತಹಶೀಲ್ದಾರರ ಕಚೇರಿಗೆ ಬಂದಿರುವ ಇಮೇಲ್ ಸಂದೇಶದಲ್ಲಿ ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಎಚ್ಚರಿಸಲಾಗಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು ಎಂದು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.

ಬಾಂಬ್ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ, ಕಾರವಾರ ತಹಶೀಲ್ದಾರ್ ಕಚೇರಿ ಮೇಲ್ ಐಡಿಗೆ ಇಮೇಲ್ ಬಂದಿದ್ದು, ತಹಶೀಲ್ದಾರರ ಕಚೇರಿಗೆ ಬಾಂಬ್ ಇಡುತ್ತಿದ್ದೇವೆ ಎಂದು ಬರೆಯಲಾಗಿತ್ತು. ಆದರೆ ಯಾವ ತಹಶಿಲ್ದಾರ್ ಕಚೇರಿ ಎಂದು ಸ್ಪಷ್ಟವಾಗಿ ತಿಳಿಸಿಲ್ಲವಾಗಿದ್ದು, ಕೂಡಲೇ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಅವರ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಎಲ್ಲರನ್ನೂ ಹೊರಗೆ ಕಳುಹಿಸಿ, ಕಚೇರಿ ತಪಾಸಣೆ ನಡೆಸಿದ್ದರು. ಅಲ್ಲದೇ ಕಚೇರಿಗೆ ನಿಯಮಿತವಾಗಿ ಬಂದು ಹೋಗುವವರ ಮಾಹಿತಿ ನೀಡುವಂತೆ ಕೋರಿದ್ದು, ಲಭ್ಯ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಡಿ.16ರ ಮುಂಜಾನೆ ಸುಮಾರು 7.25ರ ಸಮಯದಲ್ಲಿ ಭಟ್ಕಳ ತಹಸೀಲ್ದಾರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. ಮಾಹಿತಿ ಬಂದ ತಕ್ಷಣವೇ ನಮ್ಮ ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿ ಕಚೇರಿ ಆವರಣವನ್ನು ಬಂದ್ ಮಾಡಿಸಿ ಪರಿಶೀಲನೆ ನಡೆಸಿದ್ದಾರೆ. ಕಾರವಾರದಿಂದ ಎಎಸಿ ಟೀಮ್ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಕಳುಹಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಟ್ಕಳದ ಘಟನೆಯ ಬೆನ್ನಲ್ಲೇ ಕಾರವಾರ ತಹಸೀಲ್ದಾರ್ ಕಚೇರಿಗೂ ಇದೇ ರೀತಿಯ ಬೆದರಿಕೆ ಇ-ಮೇಲ್ ಬಂದಿದೆ. ನಿನ್ನೆ ಮಂಗಳೂರು ಹಾಗೂ ಹಾಸನದಲ್ಲೂ ಇಂತಹದ್ದೇ ಬೆದರಿಕೆಗಳು ಬಂದಿದ್ದು, ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಉತ್ತರ ಕನ್ನಡದಲ್ಲಿ ಬಂದಿರುವ ಬೆದರಿಕೆ ಬಗ್ಗೆಯೂ ಪ್ರಕರಣ ದಾಖಲಿಸಿಕೊಂಡು, ಇ-ಮೇಲ್ ಮೂಲವನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಕಳೆದ ಜು. 10 ರಂದು ಭಟ್ಕಳ ಪೊಲೀಸ್ ಠಾಣೆಗೆ ಬಂದಿದ್ದ ಬಾಂಬ್ ಬೆದರಿಕೆ ಪ್ರಕರಣವನ್ನು(ಪ್ರಕರಣ ಸಂಖ್ಯೆ 84/2025) ಯಶಸ್ವಿಯಾಗಿ ಭೇದಿಸಿ, ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈಗಿನ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಕಚೇರಿಗೆ ಬರುವವರನ್ನು ತಪಾಸಣೆ ನಡೆಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಕಂಡುಬಂದರೂ, ಕಾರವಾರ ತಹಸೀಲ್ದಾರ್ ನರೋನಾ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಗಂಭೀರ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!