ಬುಕರ್ ಪ್ರಶಸ್ತಿಯಿಂದ ಸಾಹಿತ್ಯ ಕ್ಷೇತ್ರ ಗರಿಮೆ ಇಮ್ಮಡಿ

KannadaprabhaNewsNetwork | Updated : Jun 16 2025, 01:20 PM IST

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ರೋಟರಿ ಬಾಲಭವನದಲ್ಲಿ ಭಾನವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಉದ್ಘಾಟಿಸಿದರು.

 ಚಿತ್ರದುರ್ಗ :  ಭಾನು ಮುಷ್ತಾಕ್‍ಗೆ ಬುಕರ್ ಪ್ರಶಸ್ತಿ ಸಿಕ್ಕಿರುವುದು ದೇಶದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗರಿಮೆಯನ್ನು ಇಮ್ಮಡಿಗೊಳಿಸಿದಂತಾಗಿದೆ ಎಂದು ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಡು ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಹೆಣ್ಣು ಮಗಳು ಮಾಡಿರುವ ಈ ಸಾಧನೆಯಿಂದಾಗಿ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತಾಗಿದೆ ಎಂದರು.

ಮುಸ್ಲಿಂ ಸಮುದಾಯದ ಹೆಣ್ಣು ಮಗಳು ಮಾಡಿರುವ ಈ ಸಾಧನೆ ಕಡೆ ವಿಶ್ವವೇ ತಿರುಗಿ ನೋಡುವಂತಾಗಿದೆ. ವಿದ್ಯೆಗಿಂತ ಶ್ರೇಷ್ಠದಾನ ಬೇರೆ ಇಲ್ಲ. ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡಿಗರೇ, ಹಾಗಾಗಿ ಕನ್ನಡ ಓದುವುದು, ಬರೆಯುವುದರಿಂದ ಮುಸ್ಲಿಂ ಯುವಕರು ಹಿಂದೆ ಸರಿಯಬಾರದು. ವಿದ್ಯೆ ಕಲಿತು ತಂದೆ-ತಾಯಿ, ಗುರು-ಹಿರಿಯರಿಗೆ ಹೆಸರು ತನ್ನಿ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ. ಚಿಕ್ಕಂದಿನಲ್ಲಿಯೇ ಹೆಣ್ಣು ಮಕ್ಕಳ ಮದುವೆ ಮಾಡಿದರೆ ಪೋಷಕರಿಗೆ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹುಡುಕಿ ಹೊರ ತರಬೇಕು. ಚಲನಚಿತ್ರ, ಮೊಬೈಲ್, ಮಕ್ಕಳನ್ನು ದಾರಿ ತಪ್ಪಿಸುತ್ತಿದೆ. ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಏರಿದವರು, ತಂದೆ ತಾಯಿಗಳನ್ನು ಮಕ್ಕಳು ಮಾದರಿಯನ್ನಾಗಿಟ್ಟುಕೊಳ್ಳಬೇಕೆ ವಿನಃ ಸಿನಿ ತಾರೆಯರು, ಕ್ರಿಕೆಟ್ ಆಟಗಾರರನ್ನಲ್ಲ. ಕಡು ಬಡತನದಿಂದ ದೊಡ್ಡ ಮಟ್ಟಕ್ಕೆ ಏರಿದವರು ನಿಮಗೆ ರೋಲ್ ಮಾಡಲ್‍ಗಳಾಗಬೇಕು. ಪದವಿ ಪಡೆದು ಉದ್ಯೋಗ ಹುಡುಕುವ ಬದಲು ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವಂತ ಉದ್ಯಮಿಗಳಾಬಹುದು ಎಂದು ಸಲಹೆ ನೀಡಿದರು.

ಮೊಬೈಲ್‍ನಿಂದ ಹೊರ ಬಂದು ಶಿಕ್ಷಣವಂತರಾಗಬೇಕು. ಮುಸ್ಲಿಂ ಸಮುದಾಯದಲ್ಲಿ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆಂಬ ತಪ್ಪು ಕಲ್ಪನೆಯಿದೆ. ಅದನ್ನು ಹೋಗಲಾಡಿಸಿ ಪೋಷಕರುಗಳು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ ಎಂದು ವಿನಂತಿಸಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಮುಸ್ಲಿಂ ಮಕ್ಕಳು ಓದು ಬಿಟ್ಟು ಚಿಕ್ಕಂದಿನಲ್ಲಿಯೇ ಕೆಲಸಕ್ಕೆ ಹೋಗುತ್ತಾರೆಂಬ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ಪೋಷಕರು ಕಡ್ಡಾಯವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಜ್ಯೋತಿಭಾಪುಲೆ, ಫಾತಿಮ ಶೇಖ್ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ನೂರಾರು ಮುಸ್ಲಿಂ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಪೂರ್ವಜರು, ಸರ್ಕಾರ, ಸಂವಿಧಾನ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮುಸ್ಲಿಂ ಮಹಿಳೆಯರಿದ್ದಾರೆ. ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಶಿಕ್ಷಣ ಪಡೆಯುವಂತ ವಾತಾವರಣವಿರಲಿಲ್ಲ. ಈಗ ಕಾಲ ಬದಲಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣವಂತರಾಗುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಅಲಿ ಮಾತನಾಡಿ, ನಾವುಗಳು ಓದುವ ಸಮಯದಲ್ಲಿ ಸವಲತ್ತುಗಳಿರಲಿಲ್ಲ. ಅಲ್ಪಸಂಖ್ಯಾತ ಇಲಾಖೆಯಿಂದ ಶಿಕ್ಷಣಕ್ಕಾಗಿ 30 ರಿಂದ 50 ಲಕ್ಷ ರು. ವರೆಗೆ ಸಾಲ ಸಿಗುತ್ತದೆ. ಎಲ್ಲವನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು. ಎಂಜಿನಿಯರ್, ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಈಗ ಅವಕಾಶವಿದೆ. ಸದ್ಭಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು.

ಎ.ಜಾಕೀರ್ ಹುಸೇನ್, ಎಚ್.ಆರ್.ಮಹಮದ್, ಮುದಸಿರ್ ನವಾಜ್, ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಇಸ್ಮಾಯಿಲ್,ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕಾಯಾಧ್ಯಕ್ಷ ನವೀದ್ ಅಬ್ದುಲ್ಲಾ, ಎಸ್.ಎಂ.ವಾಹಿದ್, ಮುಸ್ಲಿಂ ಹಾಸ್ಟೆಲ್ ಅಧ್ಯಕ್ಷ ನಯಾಜ್‍ಬಾಷ ವೇದಿಕೆಯಲ್ಲಿದ್ದರು.ಧಾರ್ಮಿಕ ಚಿಂತಕ ಮೌಲಾನ ಎಜಾಜುಲ್ಲಾ ಸಾನಿಧ್ಯ ವಹಿಸಿದ್ದರು.

ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಮುಸ್ಲಿಂ ಸಮುದಾಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

Read more Articles on