)
ಬೆಳ್ತಂಗಡಿ: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಫೆ. 28ರಿಂದ ಮಾ. 9 ರವರೆಗೆ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.ಅವರು ಬುಧವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.
1 ರಂದು ಸಂಜೆ 3 ರಿಂದ ಅರಸುಕಟ್ಟೆ ಬಳಿಯಿಂದ ಹಸಿರವಾಣಿ ಹೊರೆಕಾಣಿಕೆ ಶೋಭಾಯಾತ್ರೆ, ಸಂಜೆ 5 ರಿಂದ ಸೂರ್ಯವಂದನಾ ಭಜನೋತ್ಸವ ನಡೆಯಲಿದ್ದು, ಧಾರ್ಮಿಕ ಸಭೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ನೃತ್ಯ ವೈಭವ ನಡೆಯಲಿದೆ.2 ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬಳಿಕ ಮೈಸೂರು ಶ್ರೀ ರಾಮಚಂದ್ರ ರಾವ್ ಅವರಿಂದ ದಾಸರ ಹಾಡುಗಳ ಗಾಯನ ನಡೆಯಲಿದೆ.3ರಂದು ಸಂಜೆ 6.30 ರಿಂದ ಯೋಗಾಸನ ನೃತ್ಯ ನಡೆಯಲಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೂಡಬಿದಿರೆ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಹಾಗೂ ಉಡುಪಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ ಗಂಟೆ 7 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
4 ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಗಂಟೆ 7 ರಿಂದ ಭರತನಾಟ್ಯ ನೃತ್ಯವೃಕ್ಷ ಹಾಗೂ ಮಹಿಷಮರ್ದಿನಿ ಮಹಿಳಾ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.5ರಂದು ಬೆಳಿಗ್ಗೆ 11.30 ಕ್ಕೆ ಮಹಿಳಾ ಧಾರ್ಮಿಕ ಸಭೆಯಲ್ಲಿ ಮಹಿಳೆಯರೇ ಭಾಗವಹಿಸಲಿದ್ದು, ಸಂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬಳಿಕ ಜಾನಪದ ನೃತ್ಯ ಹಾಗೂ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.6 ರಂದು 10.44 ಕ್ಕೆ ಬ್ರಹ್ಮಕಲಶಾಭಿಷೇಕ ಪ್ರಸನ್ನ ಪೂಜೆ, ಮಧ್ಯಾಹ್ನ ಗಂಟೆ 2 ರಿಂದ ಯಕ್ಷ ಹಾಸ್ಯ ವೈಭವ, 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಗಂಟೆ 8 ರಿಂದ ದೇವಿದಾಸ್ ಕಾಪಿಕಾಡ್ ತಂಡದಿಂದ ಪುದರ್ ದೀತಿಜಿ ಎಂಬ ತುಳು ಹಾಸ್ಯ ನಾಟಕ ನಡೆಯಲಿದೆ.7 ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ. ಸಂಜೆ ಗಂಟೆ 7 ರಿಂದ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ಇವರಿಂದ ರಂಗ ಸಂಗೀತ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.8 ರಂದು ಬೆಳಿಗ್ಗೆ 8.30 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ನಾರಾವಿ, ಜನಜಾಗೃತಿ ವೇದಿಕೆ ನಾರಾವಿ ಹಾಗೂ ಶ್ರೀ ಸೂರ್ಯನಾರಾಯಣ ದೇವಸ್ಥಾನ ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಲಿದ್ದು, ಭಕ್ತಿ ಸಂಗೀತ ಹಾಗೂ ರಾತ್ರಿ ಎಕ್ಸೆಲ್ ವೈಭವ ಕಾರ್ಯಕ್ರಮ ನಡೆಯಲಿದೆ.
9 ರಂದು ರಾತ್ರಿ 8.30ಕ್ಕೆ ಕೊಡಮಣಿತ್ತಾಯ ದೈವದ ನೇಮ, 10ರಂದು ರಾತ್ರಿ 8 ರಿಂದ ಶ್ರೀ ಮೂಜಿಲ್ನಾಯ ಬೊಮ್ಮರ್ದಾಯ ಪಿಲ್ಚಂಡಿ ದೈವಗಳಿಗೆ ಬಲಿನೇಮ ಹಾಗೂ 14 ರಂದು ಏಕಾಹೋರಾತ್ರಿ ಭಜನೋತ್ಸವ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಇದರ ಯೋಜನಾಧಿಕಾರಿ ಅಶೋಕ್ ಬಿ, ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ಜಗದೀಶ್ ಅಂಚನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಎನ್ ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋಧ, ರಶ್ಮಿ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಇದ್ದರು.