ಗುರುಪುರದ ಸುಕ್ಷೇತ್ರ ಎಂಬಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಮೂರ್ತಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಉಡುಪಿದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಸುಕ್ಷೇತ್ರ ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದಕ್ಷಿಣ ಭಾರತದ ಪ್ರಪ್ರಥಮ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹಕ್ಕೆ ಮೇ 15ರಿಂದ 17ರ ವರೆಗೆ 3 ದಿನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಈ ಬಗ್ಗೆ ಸೋಮವಾರ ಮಾಜಿ ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.ವೇದ ಕೃಷಿಕ ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. 16ರಂದು ಸಂಜೆ 4 ಗಂಟೆಯಿಂದ ಕಾಲೇಶ್ವರ ವಿಗ್ರಹಕ್ಕೆ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭೀಷೇಕ ನಡೆಯಲಿದೆ. ಈ ಕಾರ್ಯದಲ್ಲಿ ಜಾತಿ, ಪಂಥ, ಲಿಂಗ ಭೇದ ಇಲ್ಲದೇ ಎಲ್ಲರೂ ಕುಟುಂಬ ಸಮೇತರಾಗಿ, ಭಾರತೀಯ ಉಡುಗೆಯಲ್ಲಿ ಭಾಗವಹಿಸಿ ಕಲಶಾಭೀಷೇಕ ನಡೆಸಬಹುದಾಗಿದೆ ಎಂದರು17ರಂದು ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಕೆ.ಎಸ್. ನಿತ್ಯಾನಂದ ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಯಾಜಿ ನಿರಂಜನ್ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಪಡುಬಿದ್ರಿ ಬೀಡಿನ ರತ್ನಾಕರ ರಾಜ್ ಅಸರು, ಶ್ರೀ ವರದರಾಜ ವೆಂಕಟರಮಣ ದೇವಳದ ಕ್ಷೇತ್ರೇಶ ಟಿ.ಪಾಂಡುರಂಗ ಪ್ರಭು, ಸಂಸದ ಕ್ಯಾ.ಬ್ರಿಜೇಷ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್, ಡಾ.ವೈ.ಭರತ್ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ್ ಟಿ. ಆಮೀನ್, ಮಹಿಳಾ ಪ್ರಮುಖ್ ಸುಜಾತ ಸದಾಶಿವ, ಹೊರೆಕಾಣಿಕೆ ಸಮಿತಿ ಸಂಚಾಲಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.----------------45.50 ಅಡಿ ಏಕಶಿಲಾ ವಿಗ್ರಹಶ್ರೀ ಗುರುಮಹಾಕಾಲೇಶ್ವರ ದೇವರ ವಿಗ್ರಹವು, ಪೀಠ 23.50 ಅಡಿ ಎತ್ತರ ಮತ್ತು ಮೂರ್ತಿ 23 ಅಡಿ ಸೇರಿ ಒಟ್ಟು 45.50 ಅಡಿ ಎತ್ತರವಿದೆ. 5 ಕೈಗಳನ್ನು ಹೊಂದಿರುವ ಕಮಲದ ಮಧ್ಯೆ ನಿಂತಿರುವ ಭಂಗಿಯ ಈ ವಿಗ್ರಹ ಬಹಳ ಅಪೂರ್ವವಾಗಿದೆ. ಇದರ ಶಿಲೆಯನ್ನು ಕಾರ್ಕಳದ ಕಿರೋಡಿ ಎಂಬಲ್ಲಿಂದ ತರಲಾಗಿದೆ. ರಾ.ಹೆ. ಸಮೀಪ, ಪಲ್ಗುಣಿ ನದಿ ತೀರದ ಸುಮಾರು 2.50 ಎಕ್ರೆ ಬಯಲು ದೇವಾಲಯದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಈಗಾಗಲೇ ಅತಿಥಿಗೃಹ, ಸಭಾಂಗಣ, ಸ್ನಾನಘಟ್ಟಗಳು ನಿರ್ಮಾಣಗೊಂಡಿವೆ.