ಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಮಕ್ಕಳಲ್ಲಿ ಕೃಷಿಯ ಕುರಿತ ಆಸಕ್ತಿಯನ್ನು ಮೂಡಿಸಲು ‘ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾರ್ಗದರ್ಶನದಲ್ಲಿ ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಡುಪಿ ಸಮೀಪದ ಉದ್ಯಾವರದ ಕುತ್ಪಾಡಿಯ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಮಾಡಿದರು.
ಸಂಪ್ರದಾಯ ಶೈಲಿಯಲ್ಲಿ ಕಂಬಳದ ಕೋಣಗಳಿಂದ ಗದ್ದೆಯನ್ನು ಉಳುಮೆ ಮಾಡಿ ಭತ್ತದ ಸಸಿಗಳ ನಾಟಿ ಪ್ರಾರಂಭಿಸಲಾಯಿತು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿ ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರನ್ನು ಸನ್ಮಾಯಿಸಲಾಯಿತು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಪೂರ್ತಿ ತುಂಬಿದರು. ಮಕ್ಕಳು ಮಧ್ಯಾಹ್ನ ಚಟ್ನಿಯ ಜೊತೆ ಗಂಜಿ ಊಟ ಮಾಡಿ ಹಳ್ಳಿಯ ಸೊಗಡನ್ನು ಅನುಭವಿಸಿದರು.........ಡಾ.ಆರ್.ಗಣೇಶರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಉಡುಪಿ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಬಹುಭಾಷಾ ವಿಶಾರದ, ಏಕವ್ಯಕ್ತಿ ಯಕ್ಷಗಾನದ ಹರಿಕಾರ, ಹಲವು ಶ್ರೇಷ್ಠ ಗ್ರಂಥಗಳನ್ನು ಸಾರಸ್ವತ ಲೋಕಕ್ಕೆ ನೀಡಿ ವಿದ್ವಜ್ಜನ ಗೌರವಕ್ಕೆ ಭಾಜನರಾದ ಶತಾವಧಾನಿ ಡಾ. ಆರ್. ಗಣೇಶ್ ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ಜು.4ರಂದು ಸಂಜೆ ೪ ಗಂಟೆಗೆ ಸಂಸ್ಥೆಯ ಐ. ವೈ. ಸಿ ಸಭಾಂಗಣದಲ್ಲಿ ಜರಗಲಿದೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ಈ ಪ್ರಶಸ್ತಿಯು ರೂ.೬೦,೦೦೦ ನಗದು ಪುರಸ್ಕಾರ ಒಳಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.