೫೦ ಕೋಟಿ ರುಪಾಯಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ನಿರ್ಮಾಣ
ಕನ್ನಡಪ್ರಭ ವಾರ್ತೆ ಶಿರಾ
ನೀರು ಶೇಖರಣೆ ಮಾಡುವ ಉದ್ದೇಶದೊಂದಿಗೆ, ಶಿರಾ ತಾಲೂಕಿನ ಹಲವಾರು ಕಡೆ ಭದ್ರಾ ಮೇಲ್ದಂಡೆ ಯೋಜನೆಯಡಿ ೫೦ ಕೋಟಿ ರುಪಾಯಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ, ನೀರಿನಿಂದ ಮಾತ್ರ ರೈತ ಮತ್ತು ಜನಸಾಮಾನ್ಯರ ಜೀವನದಲ್ಲಿ ಆರ್ಥಿಕ ಸಮೃದ್ಧಿ ಕಾಣಲು ಸಾಧ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಮಂಗಳವಾರ ತಾಲೂಕಿನ ಇನಕನಹಳ್ಳಿ ಸಮೀಪ ೨ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಇನಕನಹಳ್ಳಿ ಮತ್ತು ಕುರುಡನಹಳ್ಳಿ ಭಾಗದ ಹಳ್ಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುತ್ತಿದ್ದು, ಇದರಿಂದ ೦.೭೧ ಎಂ ಸಿ ಎಫ್ ಟಿ ನೀರು ಸಂಗ್ರಹವಾಗಲಿದ್ದು, ಒಂದು ಕಿಲೋಮೀಟರ್ ಗಿಂತ ಹೆಚ್ಚು ದೂರ ನೀರು ನಿಲ್ಲಲಿದ್ದು ನೂರಾರು ರೈತರಿಗೆ ಅನುಕೂಲವಾಗಲಿದೆ.
ಅಪ್ಪರ ಭದ್ರ ನೀರಾವರಿ ಯೋಜನೆಯಲ್ಲಿ ಶಿರಾ ತಾಲೂಕಿಗೆ ಹೆಚ್ಚು ನೀರು ಲಭ್ಯವಾಗಲಿದ್ದು, ರೈತರು ತಮ್ಮ ಜಮೀನಿಗೆ ಹೋಗುವ ಸಂದರ್ಭದಲ್ಲಿ ಯಾವುದೇ ತೊಂದರೆಗಳಾಗಬಾರದು ಎಂಬ ದೂರ ದೃಷ್ಟಿ ಯೋಚನೆಯೊಂದಿಗೆ ಬ್ರಿಡ್ಜ್ ಗಳನ್ನು ಕೂಡ ನಿರ್ಮಾಣ ಮಾಡುತ್ತಿದ್ದೇವೆ. ಶಿರಾ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಸಹ, ಹೇಮಾವತಿ ನೀರು ಹರಿದ ಕಾರಣ ಮದಲೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಹೆಚ್ಚು ಹರ್ಷ ತಂದಿದೆ. ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ನೀಡಬೇಕೆಂಬುದೇ ನಮ್ಮ ಸಂಕಲ್ಪ ಎಂದರು.
ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಿ.ಸಿ.ಅಶೋಕ್ ಮಾತನಾಡಿದರು
ಈ ಸಂದರ್ಭದಲ್ಲಿ ಮದಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ. ಎಲ್. ರೂಪ ರಂಗನಾಥಪ್ಪ, ಕಾಂಗ್ರೆಸ್ ಯುವ ಮುಖಂಡ ಡಿ.ಸಿ.ಅಶೋಕ್, ಕಾಡುಗೊಲ್ಲ ಮುಖಂಡ ಗುಡ್ಡಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಲೀಲಾವತಿ, ಶಾಂತಮ್ಮ ,ಉಮೇಶ್, ಚಂದ್ರಪ್ಪ,ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.