ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕ್ರೀಡೆಗಳಲ್ಲಿ ಶಕ್ತಿಶಾಲಿಯಾಗುವುದರ ಜೊತೆಗೆ ನೈಪುಣ್ಯತೆಯು ಅತಿ ಮುಖ್ಯವಾಗುತ್ತದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ತಾಲೂಕಿನ ವೆಂಕಟಯ್ಯನ ಛತ್ರ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರತಿಭಾನ್ವಿತ ಕ್ರೀಡಾಪಟುಗಳು ಸಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಹೆಸರು ಮಾಡುತ್ತಿದ್ದಾರೆ. ಜಿಲ್ಲೆಯ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಖೋಖೋ ಕ್ರೀಡೆಯನ್ನು ಪ್ರದರ್ಶಿಸುತ್ತ ಬಂದಿರುವುದು ಸಂತಸದ ಸಂಗತಿ ಎಂದರು.ಖೋಖೋವನ್ನು ಸಣ್ಣ ಬಾಲಕ, ಬಾಲಕಿಯರು ಆಡಬಹುದು. ಕಬಡ್ಡಿಯನ್ನು ಶಕ್ತಿವಂತವರು ಮಾತ್ರ ಆಡಲು ಸಾಧ್ಯ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಖೋಖೋ ಸಂಘದ ಅಧ್ಯಕ್ಷ ಎಚ್.ಬಿ.ಶಮಿತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಹೆಚ್ಚಿನ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಖೋಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದ ಕ್ರೀಡಾಪಟು ಚೈತ್ರಾಳಿಗೆ ಸರ್ಕಾರ ₹5ಲಕ್ಷ ನೀಡಲು ಬದಲು ₹50 ಲಕ್ಷ ಬಹುಮಾನ ನೀಡಬೇಕಿತ್ತು. ಕ್ರೀಡಾಪಟುಗಳಿಗೆ ಜನಪ್ರತಿನಿಧಿಗಳು ಸೇರಿದಂತೆ ಕ್ರೀಡಾ ಇಲಾಖಾಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್ ಮಾತನಾಡಿ, ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಎರಡರಲ್ಲೂ ಸಾಧನೆ ಮಾಡಬೇಕಾದರೆ ಪರಿಶ್ರಮ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಖೋಖೋ ಸಂಘದ ಅಧ್ಯಕ್ಷ ಶಮಿತ್ ಕುಮಾರ್ ಟಾಸ್ ಚಿಮ್ಮಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು.ಗೌರವಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ನಟರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಲ್ಲೇಶ್, ಸರ್ಕಾರಿ ಪ್ರೌಡಶಾಲೆ ಉಪಪ್ರಾಂಶುಪಾಲೆ ನಾಗರತ್ನ ಎಸ್ಡಿಎಂಸಿ ಆಧ್ಯಕ್ಷ ಶಶಿಕುಮಾರ್, ಗ್ರಾಪಂ ಸದಸ್ಯ ಶಿವಮಲ್ಲು ಸೇರಿದಂತೆ ಚಾಮರಾಜನಗರ ಜಿಲ್ಲಾ ಖೋಖೋ ಸಂಸ್ಥೆ ಪದಾಧಿಕಾರಿಗಳು ೧೬ ತಂಡಗಳ ಕ್ರೀಡಾಪಟುಗಳು ಹಾಜರಿದ್ದರು.