- ಬಿಜೆಪಿ ಪ್ರತಿಭಟನೆಗೆ ಎಚ್.ಎಂ. ಸತೀಶ್ ಸವಾಲ್
ಕನ್ನಡಪ್ರಭ ವಾರ್ತೆ, ಕೊಪ್ಪಬಿಜೆಪಿ ಆಡಳಿತದಲ್ಲಿದ್ದಾಗ ಒಂದೇ ಬಾರಿಗೆ ರು.೩೦ಕ್ಕೆ ಏರಿಕೆ ಮಾಡಿದ್ದರು. ಆಗ ಇಲ್ಲಿನ ಬಿಜೆಪಿಯವರು ಪ್ರತಿಭಟನೆ ಮಾಡದೇ ಬಾಯಿ ಮುಚ್ಚಿಕೊಂಡಿದ್ದರು. ಈಗ ೩ ರು. ಏರಿಕೆಯಾಗಿದೆ ಬಿಜೆಪಿಯವರು ಪ್ರತಿಭಟನೆಗೆ ಇಳಿದಿದ್ದಾರೆ. ಇದು ರಾಜಕೀಯ ಕಾರಣಕ್ಕೆ ನಡೆಯುತ್ತಿರುವ ಪ್ರತಿಭಟನೆಯೇ ಹೊರತು ಜನಹಿತದ ಪ್ರತಿಭಟನೆಯಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ. ಸತೀಶ್ ಹೇಳಿದರು. ಬೆಲೆ ಏರಿಕೆ ಕುರಿತು ಬಿಜೆಪಿಯಿಂದ ನಡೆದ ಪ್ರತಿಭಟನೆಗೆ ಪತ್ರಿಕಾಗೋಷ್ಠಿ ಮುಖಾಂತರ ತಿರುಗೇಟು ನೀಡಿದ ಅವರು ೨೦೦೪ ರಿಂದ ೨೦೧೪ರವರೆಗೂ ಯುಪಿಎ ಸರ್ಕಾರ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದರೂ ಪೆಟ್ರೋಲ್ ಲೀಟರ್ ೭೫, ಡೀಸೆಲ್ ೬೦ ರು., ಅಡುಗೆ ಅನಿಲ ಸಿಲಿಂಡರಿಗೆ ೪೫೦ ಇತ್ತು. ಇದನ್ನು ಯಾವುದೇ ಕಾರಣಕ್ಕೂ ಏರಿಕೆಯಾಗಲು ಬಿಟ್ಟಿರಲಿಲ್ಲ. ೨೦೧೪ರಲ್ಲಿ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆ ಯಾಗಿದ್ದರೂ ರು.೭೫ ಇದ್ದ ಪೆಟ್ರೋಲ್ ಬೆಲೆ ಒಂದೇ ಬಾರಿಗೆ ರು.೧೦೦, ರೂಪಾಯಿ ೬೦ ಇದ್ದ ಡೀಸೆಲ್ ಬೆಲೆ ೯೦ಕ್ಕೆ, ರು.೪೫೦ ಇದ್ದ ಗ್ಯಾಸ್ ಬೆಲೆ ೧೧೦೦ಕ್ಕೆ ಏರಿಕೆಯಾಯಿತು.
ಬಿಜೆಪಿಯವರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ ರು.೭೦೦ ಇದ್ದ ಗೊಬ್ಬರದ ಬೆಲೆ ರು. ೧ ಸಾವಿರಕ್ಕೆ ಏರಿಕೆ ಮಾಡಿದೆ. ರಸಗೊಬ್ಬರ ಬೆಲೆ ಏರಿಕೆಯಾಗಿದ್ದು ಈ ಬಗ್ಗೆ ಬಿಜೆಪಿ ಧ್ವನಿ ಎತ್ತುತ್ತಿಲ್ಲ, ಆದ್ದರಿಂದ ಇದು ರಾಜಕೀಯ ಕಾರಣಕ್ಕೆ ನಡೆಸಿದ ಪ್ರತಿಭಟನೆ, ಜನಪರ ಪ್ರತಿಭಟನೆಯಲ್ಲ ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಷ್ಟೇ ಆಯಿತು. ರಾಜ್ಯ ಬಿಜೆಪಿ ಅಧಿಕಾರದಿಂದ ಕೆಳಗಿಳಿ ಯುವಾಗ ಒಂದು ಲಕ್ಷ ಕಾಮಗಾರಿಗೆ ೨೦ ಲಕ್ಷಕ್ಕೆ ಅನುಮೋದನೆಗೊಂಡು ಖಜಾನೆ ಖಾಲಿ ಮಾಡಿ ಹೋಗಿದ್ದಾರೆ. ಆರ್ಥಿಕ ಸಮತೋಲನಕ್ಕಾಗಿ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಮಾಡಿದ್ದು ಈ ನಡುವೆಯೂ ಕೃಷಿ ಕ್ಷೇತ್ರದಲ್ಲಿ ರೈತರಿಗೆ ತೊಂದರೆಯಾಗದಂತೆ ಬಡ್ಡಿ ಮನ್ನಾದಂತಹ ಯೋಜನೆಗಳನ್ನು ನೀಡಿದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಎಸ್. ಇನೇಶ್ ಇದ್ದರು.