ಧಾರವಾಡ:
ಧಾರವಾಡದ ಜೆಎಸ್ಎಸ್ ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ಲೈಟ್ ಸರಿಪಡಿಸಿ, ವಾಹನಗಳು ಮತ್ತು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಆಗಬೇಕು. ಯಾಲಕ್ಕಿ ಶೆಟ್ಟರ್ ಕಾಲನಿಯ ಎದುರಿನ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕು. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿನ ಬ್ಯಾರಿಕೇಡ್ ತೆಗೆದು ಸಾರ್ವಜನಿಕರ ವಾಹನಗಳಿಗೆ ಅವಕಾಶ ಒದಗಿಸಬೇಕು. ಸದ್ಯ ಸಾರ್ವಜನಿಕರ ವಾಹನಗಳು ಸಂಚರಿಸುವ ಎರಡೂ ಬದಿಯ ರಸ್ತೆಯಲ್ಲಿನ ಮನೆ, ವಾಣಿಜ್ಯ ಮಳಿಗೆ ಇನ್ನಿತರ ಸ್ಥಳಗಳ ಬಳಿ ವಾಹನಗಳ ನಿಲುಗಡೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಬೇಕು. ಸುಮಾರು ಶೇ. 95ರಷ್ಟು ಸಮಯ ಬಿಆರ್ಟಿಎಸ್ ರಸ್ತೆಗಳು ಖಾಲಿಯಾಗಿದ್ದರೆ, ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯವಾಗಿ ಸರ್ಕಾರದ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ ಶಿವಳ್ಳಿ ತಿಳಿಸಿದರು.
ಸಾರ್ವಜನಿಕರ ಅಪಾರ ಪ್ರಮಾಣದ ತೆರಿಗೆ ಹಣ ಬಳಸಿ ಅನುಷ್ಠಾನಗೊಳಿಸಿರುವ ಈ ಯೋಜನೆಯು ಜನರ ಹಿತಕ್ಕೆ ಪೂರಕ ಆಗಲೇಬೇಕು. ಆದ್ದರಿಂದ ಈ ಸದುದ್ದೇಶದ ಹೋರಾಟಕ್ಕೆ ಈಗಾಗಲೇ 14 ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅವಳಿ ನಗರ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಂಜು ನಡಟ್ಟಿ, ಶರಣಗೌಡ ಗಿರಡ್ಡಿ, ಸಂತೋಷ ಪಟ್ಟಣಶೆಟ್ಟಿ, ಪರಮೇಶ ಕಾಳೆ , ವೆಂಕಟೇಶ ರಾಯ್ಕರ್, ಮಂಜುನಾಥ ನೀರಲಕಟ್ಟಿ , ಇಮ್ರಾನ ತಾಳಿಕೋಟಿ, ಬಸವರಾಜ ಪೋಮೊಜಿ, ಕಲಂದರ ಮುಲ್ಲಾ, ಸುರೇಖಾ ಮೇದ ಇದ್ದರು.