ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಟಿಬೆಟ್ ಧರ್ಮಗುರು ದಲೈಲಾಮ ಅವರ 90ನೇ ಜನ್ಮದಿನದ ಅಂಗವಾಗಿ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್ ಹಾಗೂ ಇಂಡೋ ಟಿಬೆಟ್ ಸ್ನೇಹ ಸೋಸೈಟಿ ವತಿಯಿಂದ ಆಯೋಜಿಸಲಾಗಿದ್ದ ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನ ನಾಡಿನಲ್ಲಿ ಬುದ್ಧನ ಸ್ಮರಣೆ ಅವಿಸ್ಮರಣೀಯ ಹಾಗೂ ಐತಿಹಾಸಿಕ ಕಾರ್ಯಕ್ರಮ ಚಿತ್ರದುರ್ಗದ ಪರಿಸರವೂ ಬೌದ್ಧ ಧರ್ಮ ಮಾರ್ಗದಲ್ಲಿ ನಡೆದಿದೆ. ಅದಕ್ಕೆ ನಿದರ್ಶನವೆಂಬಂತೆ ಅಶೋಕನ ಕಾಲದ ಅನೇಕ ಶಾಸನಗಳು ಇಲ್ಲಿವೆ. ಈ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಸಂಸ್ಕೃತಿಯನ್ನು ಕೂಡ ನಾವಿಲ್ಲಿ ಕಾಣಬಹುದು. ಬುದ್ಧ ಮತ್ತು ಬಸವ ಭಾರತ ಕಂಡ ಅತ್ಯಂತ ಶ್ರೇಷ್ಠ ಸುಧಾರಕರು. ಭಿನ್ನ ದಾರಿಯಲ್ಲಿ ನಡೆದು ತಮ್ಮ ಕಾಲಘಟ್ಟದಲ್ಲಿ ಶೋಷಿತರ ದೀನದಲಿತರ ನೊಂದವರ ಪರವಾಗಿ ಧ್ವನಿ ಎತ್ತಿದವರು. ಅಹಿಂಸೆ ಸಮಾನತೆ ಮಾನವೀಯತೆ ಕಾರುಣ್ಯ ಪ್ರಮುಖ ತತ್ವಗಳಾಗಿವೆ ಎಂದರು.ಟಿಬೆಟ್ 7ನೇ ಶತಮಾನದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದು, ವಿಶ್ವದ ಹಲವು ರಾಷ್ಟ್ರಗಳು ಅದನ್ನೇ ಅನುಸರಿಸುತ್ತಿವೆ. 1950ರಲ್ಲಿ 3,500 ಕಿ.ಮೀ ಗಡಿ ಹೊಂದಿದ್ದ ಟಿಬೆಟ್ ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಭಾರತದಲ್ಲಿ ಅಂದಿನ ಪ್ರಧಾನಿ ನೆಹರೂ ಹಾಗೂ ಮುಖ್ಯಮಂತ್ರಿಗಳಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಅವರು ಕರ್ನಾಟಕದಲ್ಲಿ ಟಿಬೆಟಿಯನ್ನರಿಗೆ ಆಶ್ರಯ ಕಲ್ಪಿಸಿದರು. ರಾಜ್ಯದಲ್ಲೂ ಅವರ ಸಂಖ್ಯೆ ಹೆಚ್ಚಿದೆ. ಸೌಹಾರ್ದಯುತ ಸಂಬಂಧವಿದೆ ಹೀಗಾಗಿ ಭಾರತೀಯ ಸಮಾಜ ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಾರಸಂದ್ರ ಮುನಿಯಪ್ಪ ಮಾತನಾಡಿ, ಬುದ್ಧ ನೊಂದವರಿಗಾಗಿ ರಾಜ ಮನೆತನ ಬಿಟ್ಟರು ಮಾನವತಾ ಧರ್ಮ ಪ್ರತಿಪಾದಿಸಿದರು. ಬಸವಣ್ಣ ಸ್ಥಾಪಿಸಿದ್ದು ಜಾತಿಯಲ್ಲ ಅದೊಂದು ಪವಿತ್ರವಾದ ಧರ್ಮ, ಅಂಬೇಡ್ಕರ್ ಮತದಾನದ ಹಕ್ಕು ನೀಡಿದ್ದರಿಂದಾಗಿ ಶೋಷಿತ ದಲಿತ ಹಿಂದುಳಿದವರು ಜನಪ್ರತಿನಿಧಿಯಾಗಲು ಸಹಕಾರಿಯಾಗಿದೆ. ಬುದ್ಧ, ಬಸವ, ಅಶೋಕ ಚಕ್ರವರ್ತಿ, ಅಂಬೇಡ್ಕರ್ ಇವರೆಲ್ಲರೂ ನಮ್ಮ ತಾತಂದಿರು ಎಂಬುದನ್ನು ಮರೆಯಬಾರದು ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಟಿಬೆಟ್ ಬೌದ್ಧ ಗುರು ದಲೈ ಲಾಮಾ ಅವರು ಅನಾರೋಗ್ಯ ಕಾರಣಕ್ಕೆ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ. ಅದಕ್ಕಾಗಿ ನೇರ ಪ್ರಸಾರದ ಮೂಲಕ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ,
ಡಾ.ಬಸವಕುಮಾರ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ವೇದಿಕೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ದಲೈಲಾಮರ ಪ್ರತಿನಿಧಿ ಜಿಗ್ಮೆ ಜಗ್ನೆ, ಮುಂಡಗೋಡಿನ ರಿನ್ ಚೆನ್ ವಾನ್ಗೋ, ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ ಇತರರಿದ್ದರು.