ಹಿಂದಿನಿಂದ ಮುಗ್ಧರನ್ನು ಪ್ರಚೋದಿಸಬೇಡಿ: ಸಚಿವ

KannadaprabhaNewsNetwork |  
Published : Aug 11, 2025, 12:30 AM IST
 ಸಿಕೆಬಿ-9 ಸಚಿವ ಡಾ.ಎಂ.ಸಿ.ಸುಧಾಕರ್ | Kannada Prabha

ಸಾರಾಂಶ

ಉದ್ಯೋಗ ಮೇಳದ ಫಲಿತಾಂಶ ನನಗೆ ಗೊತ್ತಿದೆ. ಈವತ್ತು ಉದ್ಯೋಗ ಬೇಕಾದರೆ ಕೌಶಲ್ಯ ಬೇಕಾಗುತ್ತದೆ. ನಿರುದ್ಯೋಗ ಯುವಕರಲ್ಲಿ ಈ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ತುಂಬಲು ನಾವು ಶ್ರಮಿಸುತ್ತಿದ್ದೇವೆ. ಕಾಟಾಚಾರಕ್ಕೆ ಉದ್ಯೋಗ ಮಾಡಿದರೆ ಸಾಲದು. ಉದ್ಯೋಗ ಮೇಳದಲ್ಲಿ ಎಂತಹ ಉದ್ಯೋಗ ನೀಡಿದ್ದಾರೆ ಹೇಳಲಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿವೃತ್ತ ನ್ಯಾ. ಗೋಪಾಲಗೌಡರೇ ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ. ನೀವು ಈ ತಲೆಮಾರಿನವರಲ್ಲ. ಹಿರಿಯರಿದ್ದೀರಿ. ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾಗಿದ್ದೀರಿ. ಆದರಿಂದಲೇ ನಿಮಗೆ ಬಹಳ ಗೌರದಿಂದಲೇ ಹೇಳುತ್ತಿದ್ದೇನೆ. ರಾಜಕಾರಣ ಮಾಡುವಂತಿದ್ದರೆ ನೇರವಾಗಿ ಬಂದು ಮಾಡಿ. ಹಿಂದಿನಿಂದ ಮುಗ್ದರನ್ನು ಪ್ರಚೋಧನೆ ಮಾಡಿ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಕಿಡಿಕಾರಿದರು.ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ದಿವ್ಯಶ್ರೀ ವಿಸ್ಪರ್ ಆಫ್ ವಿಂಡ್ಸ್ ರೆಸಾರ್ಟ್ ಆವರಣದಲ್ಲಿ ಭಾನುವಾರ ನಡೆದ ದಿವ್ಯಶ್ರೀ ನಂದಿ ಹಿಲ್ಸ್ ಆವರಣದಲ್ಲಿ ನಡೆದ ವೇದಿಕೆ ಕಾರ್ಯಾಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿ, ಚಿಂತಾಮಣಿಯಲ್ಲಿ ನ್ಯಾ.ಗೋಪಾಲಗೌಡರು ಮಾಡಿದ ಭಾಷಣದ ಮೂಲಕ ಪ್ರಚೋದನೆ ಕೊಡುವ ಕೆಲಸ ಮಾಡಿದ್ದಾರೆ ಎಂದರು.

ಇವರಿಗೆ ಉತ್ತರ ನೀಡಬೇಕಿಲ್ಲ

ಉನ್ನತ ಶಿಕ್ಷಣ ಇಲಾಖೆಯಲ್ಲಿ ನಾನೆಷ್ಟು ಉದ್ಯೋಗ ಕೊಡಿಸಿದ್ದೇನೆ ಎಂದು ನಿವೃತ್ತ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ನನ್ನ ಇಲಾಖೆಯಲ್ಲಿ ನಾನು ಏನು ಮಾಡುತ್ತಿದ್ದೇನೆ.ಉದ್ಯೋಗ ಲಭ್ಯತೆಗೆ, ಮಕ್ಕಳಿಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಇವರಿಗೆ ನಾನು ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು. ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕೆಗಳನ್ನು ತರಬೇಕು ಎಂದು 10 ವರ್ಷದ ಹಿಂದೆಯೇ ಪ್ರಯತ್ನಿಸಿದವನು ನಾನು. ಈ ಸಂಬಂಧ ಅಧಿಸೂಚನೆ ತಂದೆ. ಆದರೆ 10 ವರ್ಷಕಾಲ ಅದನ್ನು ಹಾಳು ಮಾಡಿದರು. ಕನಿಷ್ಟ ವಿದ್ಯುತ್ ಒದಗಿಸುವ ಕೆಲಸ ಮಾಡಲಿಲ್ಲ. ಅದರ ಬಗ್ಗೆ ನಾನು ಹೇಳಿದ್ದೇನೆ. ಕೈಗಾರಿಕೆಗಳು ಇಲ್ಲಿ ಬರಲು ನೀವು ಸಹಕಾರ ನೀಡಲಿಲ್ಲ, ರೈತರಿಗೆ ನೀಡಬೇಕಾದ ಪರಿಹಾರದ ಸಮಸ್ಯೆ ನೀವಾರಣೆ ಮಾಡಲಿಲ್ಲ. ಯಾವುದೂ ಮಾಡದೆ, ಮಕ್ಕಳು ಮನೆ ಸಮೀಪದಲ್ಲಿಯೇ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ತಪ್ಪಿಸಿ, ದೂರದಲ್ಲಿ ಉದ್ಯೋಗ ದೊರೆಯುವಂತೆ ಮಾಡಲು ಮೇಳ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಅಮಾಯಕರಿಗೆ ಪ್ರಚೋದನೆ

ಹಿಂದಿನಿಂದ ಮುಗ್ದರನ್ನು ಅಮಾಯಕರನ್ನು ಪ್ರಚೋಧನೆ ಮಾಡಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಬೇಡಿ. ಜಿಲ್ಲೆಯೂ ಸೇರಿದಂತೆ ಕ್ಷೇತ್ರದಲ್ಲಿ ಈ ಎರಡು ವರ್ಷದಲ್ಲಿ ಆಗಿರುವ ಅಭಿವೃದ್ಧಿ, ಶೈಕ್ಷಣಿಕವಾಗಿ ಆಗುತ್ತಿರುವ ಅಭಿವೃದ್ಧಿ ಸೇರಿ, ಬೇರೆ ಬೇರೆ ಮೂಲಭೂತ ಸೌಕರ್ಯಗಳಿಗೆ ಏನು ಮಾಡಿದ್ದೇನೆ ಇವೆಲ್ಲವನ್ನೂ ಕಣ್ಣಾರೆ ನೋಡಿ. ಆಮೇಲೆ ತಾವು ತಮ್ಮ ಅಭಿಪ್ರಾಯ ಹೇಳಿದರೆ ಬಹುಶಃ ನಿಮ್ಮ ಘನತೆ ಗೌರವಕ್ಕೆ ಶೋಭೆ ತರಲಿದೆ ಎಂದರು.ನಮ್ಮ ತಾಲೂಕಿನ ಪ್ರತಿಭೆಯಾದ ನೀವು ಬಹುಶಃ ಆ ಮಟ್ಟಕ್ಕೆ ಬೆಳೆದಿದ್ದೀರಿ. ನೀವೇ ಓದಿರುವ ಡಿಗ್ರಿ ಕಾಲೇಜನ್ನು ದಯವಿಟ್ಟು ಈವತ್ತೇ ಹೋಗಿ ಒಮ್ಮೆ ನೋಡಿ. ಯಾವರೀತಿ ಅದು ಬದಲಾಗುತ್ತಿದೆ, ಯಾವ ಸ್ವರೂಪ ಪಡೆಯುತ್ತಿದೆ ಎಂಬುದು ತಿಳಿಯಲಿದೆ ಎಂದು ವಿನಂತಿಸಿದರು.

ಯಾವ ತರಹದ ಉದ್ಯೋಗಉದ್ಯೋಗ ಮೇಳದ ಫಲಿತಾಂಶ ನನಗೆ ಗೊತ್ತಿದೆ. ಈವತ್ತು ಉದ್ಯೋಗ ಬೇಕಾದರೆ ಕೌಶಲ್ಯ ಬೇಕಾಗುತ್ತದೆ. ನಿರುದ್ಯೋಗ ಯುವಕರಲ್ಲಿ ಈ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ತುಂಬಲು ನಾವು ಶ್ರಮಿಸುತ್ತಿದ್ದೇವೆ. ಕಾಟಾಚಾರಕ್ಕೆ ಉದ್ಯೋಗ ಮಾಡಿದರೆ ಸಾಲದು. ಆಯ್ತು, ನಿನ್ನೆಯ ಉದ್ಯೋಗ ಮೇಳದಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ, ಯಾವ ತರದ ಉದ್ಯೋಗ ನೀಡಿದ್ದಾರೆ ಹೇಳಿ ನೋಡೋಣ. ಕಳೆದ ಎರಡುವರೆ ವರ್ಷದಲ್ಲಿ ತಾವು ತಮ್ಮ ಕೈಲಾದ ಮಟ್ಟಿಗೆ ಫಾಕ್ಸ್ಕಾನ್, ವಿಸ್ಟ್ರಾನ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಗಳಲ್ಲಿ ನೇರವಾಗಿ ಉದ್ಯೋಗ ಕೊಡಿಸಿದ್ದೇನೆ ಎಂದರು. ಬೂಟಾಟಿಕೆಯ ಉದ್ಯೋಗ ಮೇಳ

ಚಿಂತಾಮಣಿಯಲ್ಲಿ ಶನಿವಾರ ಆಗಿದ್ದು ಬೂಟಾಟಿಕೆಯ ಉದ್ಯೋಗ ಮೇಳವಾಗಿದೆ,ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವು ಅವಕಾಶಗಳಿಲ್ಲ. ನಾವು ಇವತ್ತು ಪಠ್ಯಗಳಲ್ಲಿ ಬದಲಾವಣೆ ತರುತ್ತಿದ್ದೇವೆ. ಕೈಗಾರಿಕೆ ಮತ್ತು ಶಿಕ್ಷಣ ಒಟ್ಟಿಗೆ ಸೇರಿ ಮಕ್ಕಳಿಗೆ ಉದ್ಯೋಗ ಲಭಿಸುವಂತಹ ರೀತಿಯಲ್ಲಿ ಶಿಕ್ಷಣ ಕೊಡುತ್ತಿದ್ದೇವೆ. ಉದ್ಯೋಗ ದಾತರು ಕೇಳುವ ಪ್ರಶ್ನೆಗೆ ತೃಪ್ತಿಯಾಗುವಂತೆ ಉತ್ತರ ನೀಡುವ ಆತ್ಮಸ್ಥೈರ್ಯ ಬೆಳೆಸುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಸ್ಕಿಲ್ಲಿಂಗ್, ಅಪ್‌ಸ್ಕಿಲ್ಲಿಂಗ್, ರೀಸ್ಕಿಲ್ಲಿಂಗ್ ಬೆಳೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಇದನ್ನು ಮನಗಾಣದೆ ಟೀಕೆ ಮಾಡುವುದು ಸರಿಯಿಲ್ಲ ಎಂದು ಹೇಳಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌