ನಾಗರಾಜ ಎಸ್.ಬಡದಾಳ್
ದುಡಿಯುವ ಕೈಗಳಿರುವ ದಾವಣಗೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಮೆಕ್ಕೆಜೋಳ ಮತ್ತು ಬತ್ತದ ಕಣಜ ಖ್ಯಾತಿಯ ಇಲ್ಲಿ ಕೃಷಿ ಸಂಸ್ಕರಣಾ ಘಟಕ, ಐಟಿ ಬಿಟಿ ಪಾರ್ಕ್ ಸ್ಥಾಪನೆ, ಕೃಷಿ, ತೋಟಗಾರಿಕೆ ವಿವಿ ಸ್ಥಾಪನೆ, ಭೈರನಪಾದ ಸೇರಿದಂತೆ ವಿವಿಧ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ, ಭದ್ರಾ ನಾಲೆಗಳ ಆಧುನೀಕರಣ, ಇಲ್ಲಿಗೊಂದು ವಿಮಾನ ನಿಲ್ದಾಣ..
ಹೀಗೆ ನೂರಾರು ಕನಸು, ನಿರೀಕ್ಷೆಯ ಕಣ್ಣುಗಳಿಂದ ಇಡೀ ದಾವಣಗೆರೆ ಜಿಲ್ಲೆಯು ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ದಾಖಲೆಯ 2026-27ನೇ ಸಾಲಿನ ಬಜೆಟ್ ನತ್ತ ಮುಖ ಮಾಡಿದ್ದರೆ, ಜಿಲ್ಲೆಯ ಜನರ ನಿರೀಕ್ಷೆಯ ಜೋಳಿಗೆಗೆ ಭರಪೂರ ಯೋಜನೆಗಳನ್ನಾಗಲೀ, ವಿಶೇಷ ಕೊಡುಗೆಯನ್ನಾಗಲೀ ಸಿದ್ದರಾಮಯ್ಯ ತಮಗೆ ರಾಜಕೀಯ ಪುನರ್ಜನ್ಮ ಕೊಟ್ಟ, ಸಿದ್ಧರಾಮೋತ್ಸವದ ಮೂಲಕ ಶಕ್ತಿ ತುಂಬಿದ್ದಂತಹ ದಾವಣಗೆರೆಗೆ ಈ ಸಲವಾದರೂ ಸಿದ್ದರಾಮಯ್ಯ ಕೈಬಿಚ್ಚಿ ಯೋಜನೆ, ಕಾರ್ಯಕ್ರಮ ನೀಡಲೆಂಬ ನಿರೀಕ್ಷೆ ಸಹಜವಾಗಿವೆ.ಆದರೆ, ಬೆಂಗಳೂರು, ಮೈಸೂರು, ತುಮಕೂರು ಹೊರತುಪಡಿಸಿ, ಉಳಿದ 2ನೇ ಸಾಲಿನ ಊರುಗಳನ್ನು ಬೆಳೆಸುವ ಬದ್ಧತೆ ಆಳುವವರಿಗೆ ಇಲ್ಲವಾಗಿದೆ. ಮೆಕ್ಕೆಜೋಳ ಅತೀ ಹೆಚ್ಚು ಬೆಳೆವ ಜಿಲ್ಲೆ ಇದು. ನಂತರ ಬತ್ತ ಬೆಳೆಯಲಾಗುತ್ತದೆ. ಅಡಿಕೆಯೂ ಉತ್ತಮ ಬೆಳೆಯಾಗಿದೆ. ಕೃಷಿ ಪ್ರದಾನವಾದ ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ಹಿಂದಿನಿಂದಲೂ ಒತ್ತಾಯವಿದೆ. ಆದರೆ, ಈವರೆಗೆ ಅಂತಹ ಬಿಚ್ಚುಗೈನಿಂದ ಸಿಎಂ ಸಿದ್ದರಾಮಯ್ಯ ಕೃಪಾದೃಷ್ಟಿ ಹರಿಸಿಲ್ಲ.
ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಗೆ ಮೆಗಾ ಡೈರಿ ಸ್ಥಾಪಿಸಬೇಕೆಂಬುದೂ ಕನ್ನಡಿಯೊಳಗಿನ ಗಂಟಾಗಿದೆ. ಕೃಷಿ ಉತ್ಪನ್ನ ಶೇಖರಿಸಿಡಲು ಶೀಥಲೀಕರಣ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯವೂ ಇದೆ. ಆದರೂ, ಆಳುವ ಸರ್ಕಾರದ ಚಿತ್ತ ಇತ್ತ ಹರಿದಿಲ್ಲ.
ಏಷ್ಯಾದಲ್ಲೇ ಅತೀ ದೊಡ್ಡ 2ನೇ ಕೆರೆ ಸೂಳೆಕೆರೆ, ವಿಶಾಲ ತೂಗು ಕಾಲುವೆ, ಸಾಗರಪೇಟೆ, ಆತ್ಯಾಕರ್ಷಕ ಪುಷ್ಕರಣಿ, ಅಮ್ಮನ ಗುಡ್ಡ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೇ ಬೋಸ್ಲೆ ಸಮಾಧಿ ಸ್ಥಳ, ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಉಬ್ರಾಣಿ ಹೋಬಳಿ, ಅರಣ್ಯ ಪ್ರದೇಶ, ಭಾರತದಲ್ಲೇ ಅತೀ ದೊಡ್ಡ ಆಕರ್ಷಕ ಗಾಜಿನ ಮನೆ, ಆನಗೋಡು ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ, ಕೊಂಡಜ್ಜಿ ಅರಣ್ಯ ಪ್ರದೇಶ, ಜಗಳೂರು ತಾ. ರಂಗಯ್ಯನದುರ್ಗ ಅರಣ್ಯ ಪ್ರದೇಶ, ಪ್ರಕೃತಿ ಮಡಿಲಲ್ಲಿರುವ ಕಣ್ವಕುಪ್ಪೆ ಅರಣ್ಯ ಪ್ರದೇಶ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳಿದ್ದರೂ, ಹೊನ್ನಾಳಿ, ನ್ಯಾಮತಿ ತಾಲೂಕಿನ ಪ್ರವಾಸಿ, ಪುಣ್ಯತಾಣಗಳು ಕಡೆಗಣಿಸಲ್ಪಟ್ಟಿವೆ.