17 ಕೆರೆಗಳಿಗೆ ನೀರು ತುಂಬಿಸಲು ಬಜೆಟ್‌ನಲ್ಲಿ ಅನುದಾನದ ನಿರೀಕ್ಷೆ

KannadaprabhaNewsNetwork |  
Published : Mar 04, 2026, 02:15 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಪುರಾತನ ಚಿಂತ್ರಪಳ್ಳಿ ಕೆರೆಹಗರಿಬೊಮ್ಮನಹಳ್ಳಿ ತಾಲೂಕಿನ ಪುರಾತನ ಚಿಂತ್ರಪಳ್ಳಿ ಕೆರೆ | Kannada Prabha

ಸಾರಾಂಶ

ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ತಾಲೂಕಿನ 21 ಗ್ರಾಪಂಗಳ 120 ಗ್ರಾಮಗಳ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗುವುದೇ ಎಂಬ ನಿರೀಕ್ಷೆ ಗರಿಗೆದರಿವೆ.

ಬಿ. ಲಕ್ಷ್ಮಿಕಾಂತಸಾ

ಹಗರಿಬೊಮ್ಮನಹಳ್ಳಿ: ಡಾ. ನಂಜುಂಡಪ್ಪ ವರದಿಯ ಅನ್ವಯ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನ ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳನ್ನು ಬದಲಾಯಿಸಲು, ಈಗ ರೂಪಿಸಲಾಗಿರುವ ಪೂರಕ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲು ಹಾಗೂ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ತಾಲೂಕಿನ 21 ಗ್ರಾಪಂಗಳ 120 ಗ್ರಾಮಗಳ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗುವುದೇ ಎಂಬ ನಿರೀಕ್ಷೆ ಗರಿಗೆದರಿವೆ.

ತಾಲೂಕಿನ ಪಶ್ಚಿಮ ಭಾಗದುದ್ದಕ್ಕೂ ತುಂಗಭದ್ರಾ ನದಿ ಹರಿಯುತ್ತದೆ. ಆದರೆ, ಪಶ್ಚಿಮ ಭಾಗದ 17 ಕೆರೆಗಳ ಅಚ್ಚುಕಟ್ಟು ಪ್ರದೇಶಗಳ ಕೃಷಿ ಭೂಮಿಗಳು ನೀರಿಲ್ಲದೇ ಬಸವಳಿದಿವೆ. ಬಹುತೇಕ ಕೆರೆಯಂಗಳಗಳು ರೈತರ ನಿಟ್ಟುಸಿರಿನ ಕೇಂದ್ರಗಳಾಗಿವೆ. ಈ ಭಾಗದ ರೈತರ ಪರಿಸ್ಥಿತಿ ಹೇಗಾಗಿದೆ ಎಂದರೆ ಸಮುದ್ರದ ಜೊತೆ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತಾಗಿದೆ.

ಈ ಹಿಂದೆ ನಿಜಲಿಂಗಪ್ಪನವರ ಕಾಲದಲ್ಲಿ ಚನ್ನಬಸವನಗೌಡರು ಶಾಸಕರಾಗಿದ್ದಾಗ ಜಾರಿಗೊಳಿಸಲಾದ ತಾಲೂಕಿನ 14 ಏತ ನೀರಾವರಿ ಯೋಜನೆಗಳು ಎದುಸಿರು ಬಿಡುತ್ತಿವೆ. ಯೋಜನೆಗಳ ಮೋಟಾರ್, ನೀರೆತ್ತುವ ಯಂತ್ರಗಳು ಕಾಲನ ದಾಳಿಗೆ ಸಿಲುಕಿ ಶಿಥಿಲಾವಸ್ಥೆಯಲ್ಲಿವೆ. ಎಲ್ಲ ಏತ ನೀರಾವರಿ ಯೋಜನೆಗಳನ್ನು ನವೀಕರಿಸಿ ರೈತರಿಗೆ ನೆರವಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪದವಿ ಕಾಲೇಜು ಸ್ಥಾಪನೆಗೆ ಮತ್ತು ರೈತರು ತಂಬ್ರಹಳ್ಳಿ ಎರಡನೆಯ ಹಂತದ ಏತ ನೀರಾವರಿ ಯೋಜನೆ ಜಾರಿಗಾಗಿ ಆಗ್ರಹಿಸಿ ಜಿಲ್ಲಾ ಕೇಂದ್ರದ ವರೆಗೂ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದರೂ ಸರಕಾರ ಕಣ್ಣು ತೆರೆದಿಲ್ಲ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮತ್ತು ಟಿ. ವೆಂಕೋಬಪ್ಪ ಆರೋಪಿಸುತ್ತಾರೆ.

ತಾಲೂಕಿನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಬಂಡೆ ರಂಗನಾಥ ಸ್ವಾಮಿ ದೇಗುಲದ ಪರಿಸರವನ್ನು ಪ್ರವಾಸಿ ತಾಣವಾಗಿಸುವ ಅವಕಾಶವಿದ್ದರೂ ಯೋಜನೆಗಳನ್ನು ರೂಪಿಸಲಾಗಿಲ್ಲ. ಈ ಹಿಂದೆ ಮಾಜಿ ಶಾಸಕರಾದ ಸಿರಾಜ್ ಶೇಖ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ವೇಳೆ ದೇಗುಲದ ಸುತ್ತಲಿನ ತುಂಗಭದ್ರಾ ಹಿನ್ನೀರಿನಲ್ಲಿ ಮತ್ತು ಹಗರಿಬೊಮ್ಮನಹಳ್ಳಿ ಜಲಾಶಯದಲ್ಲಿ ಪೆಡಲ್ ಬೋಟ್ ಮೂಲಕ ನದಿ ಪರಿಸರವನ್ನು ಸಾರ್ವಜನಿಕರು ಆಸ್ವಾದಿಸುವ ಕುರಿತು ಚಿಂತಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.

ತಾಲೂಕಿನಲ್ಲಿ ಬೆಣಕಲ್ಲು, ದಸಮಾಪುರ ಮತ್ತು ಮಗಿಮಾವಿನಹಳ್ಳಿ ಬಳಿ ಕಾಯ್ದಿಟ್ಟ ಅರಣ್ಯವಿದ್ದರೂ ಅದು ಕಡಿದಿಟ್ಟ ಅರಣ್ಯವಾಗಿದೆ ಎಂಬ ವ್ಯಂಗ್ಯದ ಮಾತುಗಳಿಗೆ ಬರವಿಲ್ಲ. ಈ ಭಾಗದ ಕಾಯ್ದಿಟ್ಟ ಅರಣ್ಯದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಮರು ಆರಂಭಿಸಬೇಕು ಎಂಬ ಕೂಗುಗಳು ದಟ್ಟವಾಗಿವೆ. ಕಚೇರಿ ಆರಂಭಿಸಿದರೆ ತಾಲೂಕಿನ ತುಂಗಭದ್ರಾ ಹಿನ್ನೀರು ಸಹಿತ ಹಗರಿಬೊಮ್ಮನಹಳ್ಳಿ ಜಲಾಶಯ ಮತ್ತು ಅಂಕಸಮುದ್ರ ಪಕ್ಷಿಧಾಮಕ್ಕೆ ದೇಶ ವಿದೇಶಗಳಿಂದ ಲಗ್ಗೆ ಇಡುವ ಖಗ ಸಿರಿಗಳ ರಕ್ಷಣೆಗೂ ಬಲ ಬರುತ್ತದೆ ಎಂಬ ಅಂದಾಜಿದೆ.

ತಂಬ್ರಹಳ್ಳಿ ಎರಡನೆಯ ಹಂತದ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ 17 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತರುವ ಕಾಮಗಾರಿಗೆ ಅನುದಾನ ಒದಗಿಸಬೇಕು. ಕ್ಷೇತ್ರದಲ್ಲಿ ಗುರುತಿಸಲಾಗಿರುವ ವಸತಿ ಹೀನರನ್ನು ಕೂಡಲೇ ಪರಿಗಣಿಸಿ ನಿವೇಶನ ಸಹಿತ ವಸತಿ ಕಲ್ಪಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಬೇಕು ಎಂದು ಶಾಸಕರಾದ ನೇಮಿರಾಜ ನಾಯ್ಕ ಒತ್ತಾಯಿಸಿದ್ದಾರೆ.

ನೀರಾವರಿ, ಶಿಕ್ಷಣ ಮತ್ತು ಇತರೇ ರಂಗಗಳ ಅಭಿವೃದ್ಧಿಗೆ ಪೂರಕ ಅನುದಾನ ಒದಗಿಸಿ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ತಾಲೂಕು ಮುಕ್ತವಾಗಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಂದಗಿ ಶಾಂತವೀರರ ಸಂದೇಶ ಸಾರ್ವಕಾಲಿಕ: ರೇವಣಸಿದ್ದಯ್ಯ ಹಿರೇಮಠ
ಒಳ ಮೀಸಲಾತಿಯಿಲ್ಲದೇ ಹುದ್ದೆ ಭರ್ತಿ ಮಾಡಿದರೆ ಉಗ್ರ ಹೋರಾಟ