ಬ್ಯಾಟರಾಯನಪುರ : ಹಾಲು ಉತ್ಪಾದಕ ರೈತರು ಬಮೂಲ್ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು ಎಂದು ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಸಲಹೆ ನೀಡಿದರು.

50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ

ಚಿಕ್ಕಜಾಲ ಹಾಲು ಉತ್ಪಾದಕರ ಸಹಕಾರ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದ 250 ಶೇರುದಾರರು ಇದರ ಮಾಲೀಕರು, ಸಹಕಾರ ಸಂಘ ಕಟ್ಟಿ ಬೆಳೆಸಿದವರ ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ 80 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸಂಸ್ಥೆ ₹61ಕೋಟಿ ಆದಾಯವನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಿರುವುದು ಹೆಗ್ಗಳಿಕೆ. ಈ ಪ್ರೋತ್ಸಾಹದ ಫಲವಾಗಿ 14 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ 19 ಲಕ್ಷ ಲೀಟರಿಗೆ ತಲುಪಿದೆ. ಹಾಲು ಉತ್ಪಾದಕ ರೈತರಿಗೆ ಸೂಕ್ತ ರೀತಿ ಸಹಕರಿಸುವುದು ಸವಲತ್ತು ನೀಡುವುದು, ಬಮೂಲ್‌ ಆದ್ಯತೆಯಾಗಿದ್ದು, ಸಂಸ್ಥೆಯ ಪ್ರಗತಿ ಬಗ್ಗೆ ಆತ್ಮತೃಪ್ತಿ ಇದೆ ಎಂದರು.

ಅನಾರೋಗ್ಯಕ್ಕೆ ತುತ್ತಾದ ಹಾಲು ಉತ್ಪಾದಕರಿಗೆ ಚಿಕಿತ್ಸೆಗೆ ₹25 ಸಾವಿರ

ಅನಾರೋಗ್ಯಕ್ಕೆ ತುತ್ತಾದ ಹಾಲು ಉತ್ಪಾದಕರಿಗೆ ಚಿಕಿತ್ಸೆಗೆ ₹25 ಸಾವಿರ ವಿತರಣೆ, ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮರಣಿಸಿದ ಹಸುಗಳಿಗೆ 70 ಸಾವಿರದಿಂದ 1.20 ಲಕ್ಷ ರು.ವರೆಗೆ ಪರಿಹಾರ ಧನ, ಹಾಲು ಉತ್ಪಾದಕರ ಖಾತೆಗೆ ನೇರ ವರ್ಗಾವಣೆ ಸೇರಿ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು ಎಂದರು.


ಕಾರ್ಯಕ್ರಮದಲ್ಲಿ ಬೆಂ.ಡೈರಿ ಪ್ರಧಾನ ವ್ಯವಸ್ಥಾಪಕ ಡಾ.ಶ್ರೀಧರ್, ರಾಜಾನುಕುಂಟೆ ಶಿಬಿರ ಕಚೇರಿ ವ್ಯವಸ್ಥಾಪಕ ವಿ.ಪಿ.ಪ್ರಸನ್ನ, ವಿಸ್ತರಣಾಧಿಕಾರಿ ಕೆ.ಎ.ದೇವರಾಜ್, ಚಿಕ್ಕಜಾಲ ಹಾಲು‌‌ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಆರ್.ಚಂದುಕುಮಾರ್, ಉಪಾಧ್ಯಕ್ಷೆ ಕಲ್ಪನಾ ಟಿ.ಪಿ., ನಿರ್ದೇಶಕರಾದ ಎಂ.ನಂಜುಂಡಪ್ಪ, ಪಿಳ್ಳಪ್ಪಯ್ಯ, ಸಿ.ಎಮ್. ಮಾರೇಗೌಡ, ಸಿ.ಟಿ.ಮುನಿರಾಜು, ಬೈರೇಗೌಡ, ಶಿವರಾಜ್ ಕುಮಾರ್, ಸುಧಾ, ಮಂಜುಳಾ ಎಚ್.ಎನ್., ರುದ್ರಮ್ಮ, ಸಂಜೀವಮ್ಮ, ಸಿಇಒ ಚಂದ್ರಶೇಖರ್ ಇದ್ದರು.