ಗಂಗಾವತಿ: ಮನುಷ್ಯ ಸಂತನಂತೆ ಬದುಕಬೇಕು. ಸಂತನೆಂದರೆ ಕೇವಲ ಯಾಂತ್ರಿಕತೆಯ ಬದುಕಲ್ಲ ಬದಲಾಗಿ ಆರೋಗ್ಯಪೂರ್ಣ ಬದುಕನ್ನು ಹೊಂದುವುದು ಎಂದು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಕೆಎಲ್ಇ ಮಹಾವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಡಾ. ಸಂಪತ್ಕುಮಾರ್ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್ಇ ಎಜ್ಯುಕೇಷನ್ ಗಂಗಾವತಿ ಸಹಯೋಗದಲ್ಲಿ ನಡೆದ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದದಿಂದ ಹಮ್ಮಿಕೊಂಡ ಈ ಬೃಹತ್ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಸಂತಸದ ವಿಷಯ.ನಮ್ಮ ಸಂಸ್ಥೆ ಇಂತಹ ಹಲವಾರು ಸಾಮಾಜಿಕ ಉಪಯುಕ್ತತೆಯ ಸೇವೆ ನೀಡುತ್ತಾ ಬಂದಿದೆ. ಈಗ ಗಂಗಾವತಿಯಲ್ಲಿ ನಡೆಯುತ್ತಿರುವ ಈ ಶಿಬಿರ ಸಾರ್ವಜನಿಕರಿಗೆ ಹೆಚ್ಚು ನೆರವಾಗಲಿದೆ ಎಂದರು.
ಈ ಶಿಬಿರದಲ್ಲಿ ಹೃದಯರೋಗ, ಪ್ಲಾಸ್ಟಿಕ್ ಸರ್ಜರಿ,ಗ್ಯಾಸ್ಟ್ರೋಎಂಟರಾಲಜಿ, ಮೂತ್ರರೋಗ ನರರೋಗ, ಉಸಿರಾಟದ ಕಾಯಿಲೆ ಸೇರಿದಂತೆ ವಿವಿಧ ತಜ್ಞ ವೈದ್ಯರು ಸೇವೆ ಸಲ್ಲಿಸಿದರು.ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಶಸ್ತ್ರಚಿಕಿತ್ಸೆ, ಅಸ್ಥಿ ಮತ್ತು ಕೀಲುರೋಗ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವೈದ್ಯಕೀಯ, ಕಿವಿ-ಮೂಗು-ಗಂಟಲು, ನೇತ್ರ ಚಿಕಿತ್ಸಾ ವಿಭಾಗ, ಚರ್ಮರೋಗ, ಆಯುರ್ವೇದ, ಹೋಮಿಯೋಪಥಿ, ದಂತ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ವಿಭಾಗಗಳ ತಜ್ಞರು ಆರೋಗ್ಯ ಸೇವೆ ಒದಗಿಸಿದರು.
ಆರೋಗ್ಯ ಶಿಬಿರದಲ್ಲಿ ಒಟ್ಟು 2,000ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ 210 ರೋಗಿಗಳನ್ನು ಬೆಳಗಾವಿ,ಹುಬ್ಬಳ್ಳಿ ಕೆಎಲ್ಇ ಆಸ್ಪತ್ರೆಗಳಿಗೆ ಮುಂದಿನ ಚಿಕಿತ್ಸೆಗಾಗಿ ರೆಫರ್ ಮಾಡಲಾಯಿತು.