ನೆಲಮಂಗಲ: ಸ್ವಯಂ ಪ್ರೇರಣೆ, ಸಮಯ ನಿರ್ವಹಣೆ ಅಳವಡಿಸಿಕೊಂಡು, ಉದ್ಯಮಶೀಲರಾಗಿ ಆರ್ಥಿಕ ಸುಧಾರಣೆಯಿಂದ ಮಹಿಳಾ ಸಬಲೀಕರಣವಾಗಬೇಕೆಂದು ಕೆನರಾ ಬ್ಯಾಂಕ್ ಅರಶಿನಕುಂಟೆ ಶಾಖೆಯ ವ್ಯವಸ್ಥಾಪಕರಾದ ಕಾವ್ಯ ಸಲಹೆ ಮಾಡಿದರು.
ರುಡ್ಸೆಟ್ ಸಂಸ್ಥೆ ನಿರ್ದೇಶಕ ರವಿಕುಮಾರ ಮಾತನಾಡಿ, ಹೆಣ್ಣು ಕೇವಲ ಮನೆಗೆ ಮಾತ್ರ ಸೀಮಿತವಲ್ಲದೆ, ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಉಕ್ತಿಯಂತೆ ಆಕೆಯಿಂದು ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾಳೆ. ಮಹಿಳೆಯರು ಕೌಶಲ್ಯಗಳನ್ನು ಹೊಂದಿ, ದುಡಿಮೆ ಆರಂಭಿಸಿ ಎಂದು ಸಲಹೆ ನೀಡಿದರು.
ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ, ವಿದ್ಯಾ ಹೊಸಮನಿ, ಕಚೇರಿ ಸಹಾಯಕರಾದ ಅರುಣ್ಕುಮಾರ್, ಸಂತೋಷ್ ಇತರರು ಉಪಸ್ಥಿತರಿದ್ದರು.ಪೊಟೊ-8ಕೆಎನ್ಎಲ್ಎಮ್1-ನೆಲಮಂಗಲದ ರುಡ್ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸಂಸ್ಥೆಯ ನಿರ್ದೇಶಕರಾದ ರವಿಕುಮಾರ್ ಅಭಿನಂದಿಸಿದರು.