ಹೊಸಕೋಟೆ: 6 ಗಂಟೆ ನಾಟಕ, 3 ಗಂಟೆಗಳ ಸಿನಿಮಾ, ಅರ್ಧ ಗಂಟೆಯ ಧಾರಾವಾಹಿ ನೋಡುವ ಕಾಲ ಬದಲಾಗಿ, ಇಂದು 30 ಸೆಕೆಂಡ್ಗಳ ರೀಲ್ಸ್ ಜನರ ಗಮನ ಸೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸಕೋಟೆಯಲ್ಲಿ ಪ್ರದರ್ಶನ ನಿಲ್ಲಿಸಿದ್ದ ೪೪ ವರ್ಷಗಳ ರಾಘವೇಂದ್ರ ಸಿನಿಮಾಸ್ ಆಧುನಿಕ ಸ್ಪರ್ಶದೊಂದಿಗೆ ಮತ್ತೆ ಪುನರ್ ನಿರ್ಮಿಸುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರಮಂದಿರಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಹೊಸಕೋಟೆಯಲ್ಲಿ ರಾಘವೇಂದ್ರ ಸಿನಿಮಾಸ್ ನವೀಕರಿಸಿ ಪ್ರಾರಂಭಿರುವುದು. ಕಲೆ, ಕಲಾವಿದರ ಪ್ರೋತ್ಸಾಹಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಬಿಎಂಆರ್ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಮಹಾನಗರಗಳ ಮಲ್ಟಿಪ್ಲೆಕ್ಸ್ಗಳ ಮಾದರಿಯಲ್ಲಿ ಸಕಲ ಸೌಲಭ್ಯಗಳೊಂದಿಗೆ ಗ್ರಾಮೀಣರಿಗೂ ಕೈಗೆಟುಕುವ ದರದಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸುವುದು ಮುಖ್ಯ ಉದ್ದೇಶ. ೧೯೮೨ರಲ್ಲಿ ಶ್ರೀ ರಾಘವೇಂದ್ರ ಟೂರಿಂಗ್ ಟಾಕೀಸ್ ಆಗಿ ಆರಂಭವಾದ ಚಿತ್ರಮಂದಿರ ೪೪ ವರ್ಷಗಳ ಸುದೀರ್ಘ ಪಯಣದ ಬಳಿಕ ಹೊಸರೂಪ ಪಡೆದುಕೊಂಡಿದೆ ಎಂದರು. ಟಿಕೆಟ್ ದರ ಹಾಗೂ ಕ್ಯಾಂಟೀನ್ ತಿಂಡಿ-ತಿನಿಸು ದರಗಳನ್ನು ಸಹ ಕೈಗೆಟುಕುವಂತೆ ಇರಿಸಲಾಗುವುದು. ಮುಂದಿನ ದಿನಗಳಲ್ಲಿ ದೊಡ್ಡ ಚಿತ್ರಗಳ ಪ್ರೀಮಿಯರ್ ಶೋಗಳನ್ನು ಆಯೋಜಿಸಿ, ಚಿತ್ರರಂಗದ ಗಣ್ಯರನ್ನು ಹೊಸಕೋಟೆಗೆ ಕರೆತರುವ ಮೂಲಕ ರಾಜ್ಯದ ಜನರು ಒಮ್ಮೆಯಾದರೂ ಈ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವಂತಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.ಈ ವೇಳೆ ತಹಸೀಲ್ದಾರ್ ಶೀತಲ್, ಡಿವೈಎಸ್ಪಿ ಮಲ್ಲೇಶ್, ಚಿತ್ರ ನಿರ್ಮಾಪಕ ಚಿನ್ನೇಗೌಡ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ಟೌನ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಬಿಎಂಆರ್ಡಿಎ ಸದಸ್ಯ ಸುಬ್ಬರಾಜು, ಮಾಜಿ ಅದ್ಯಕ್ಷ ಡಾ.ಸಿ.ಜಯರಾಜ್ ಇತರರು ಹಾಜರಿದ್ದರು.
ಹೊಸಕೋಟೆಯ ನವೀಕೃತ ರಾಘವೇಂದ್ರ ಸಿನಿಮಾಸ್ ಚಿತ್ರಮಂದಿರವನ್ನು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ, ಬಿಎಂಆರ್ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಉದ್ಘಾಟಿಸಿದರು.