ಗುಣಾತ್ಮಕ ಗಣಿತ ಕಲಿಕೆಗೆ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಸಹಕಾರಿ

KannadaprabhaNewsNetwork |  
Published : Apr 29, 2024, 01:33 AM IST
ಗುಣಾತ್ಮಕ ಗಣಿತ ಕಲಿಕೆಗೆ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಸಹಕಾರಿ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗಣಿತದ ಮೂಲಕ್ರಿಯೆಗಳನ್ನು ಆಟದ ಮೂಲಕ ಕಲಿಯಲು ಅಕ್ಷರ ಫೌಂಡೇಶನ್ ಅವರು ತಯಾರಿಸಿರುವ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಸಹಕಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ಚಿತ್ರದುರ್ಗ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗಣಿತದ ಮೂಲಕ್ರಿಯೆಗಳನ್ನು ಆಟದ ಮೂಲಕ ಕಲಿಯಲು ಅಕ್ಷರ ಫೌಂಡೇಶನ್ ಅವರು ತಯಾರಿಸಿರುವ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಸಹಕಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್‍ನಲ್ಲಿ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಬಗ್ಗೆ ಮಾಹಿತಿ ನೀಡಿದ ಅವರು ಮಕ್ಕಳಿಗಾಗಿಯೇ ತಂದಿರುವ ಪ್ರಯೋಗಾತ್ಮಕ ಆಪ್ ಎಲ್ಲಾ ಆಂಡ್ರಾಯ್ಡ್ ಫೋನ್‍ಗಳಲ್ಲೂ ಲಭ್ಯವಿದೆ. ಪಠ್ಯಾಧಾರಿತ ಒಂದರಿಂದ 5ನೇ ತರಗತಿ ಮತ್ತು 6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ 2 ವಿಭಾಗದಲ್ಲಿ ಅವಕಾಶ ನೀಡಲಾಗಿದ್ದು, ಚಟುವಟಿಕೆ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಕಲಿಕೆಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.

ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಮಾತನಾಡಿ, ಮಕ್ಕಳಿಗೆ ಗಣಿತದಲ್ಲಿ ಪರಿಣತಿ ಪಡೆಯಲು ಬೇಕಾದ ಕೌಶಲ್ಯ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಆಪ್ ಸಿದ್ಧಪಡಿಸಲಾಗಿದೆ. ಈ ತಂತ್ರಾಂಶ ಉಚಿತವಾಗಿದ್ದು, ಪ್ಲೇಸ್ಟೋರ್ ಮತ್ತು ದೀಕ್ಷಾ ಆಪ್‍ನಲ್ಲೂ ಲಭ್ಯವಿದೆ. ಶಾಲಾ ಕಲಿಕೆಗೆ ಹೊಂದಿಕೊಂಡ ಪಠ್ಯಕ್ರಮ ಮತ್ತು ಬಳಕೆದಾರ ಸ್ನೇಹಿ ಫ್ಯೂಚರ್‌ಗಳೊಂದಿಗೆ ಬಿಲ್ಡಿಂಗ್ ಬ್ಲಾಕ್ಸ್ ಆಪ್ ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಗಣಿತದ ಕಲಿಕೆಯನ್ನು ಎಲ್ಲಾ ಮಕ್ಕಳಿಗೂ ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದರು.

ಅಕ್ಷರ ಫೌಂಡೇಶನ್ ಕಾರ್ಯಕ್ರಮದ ವ್ಯವಸ್ಥಾಪಕ ಹನುಮಂತರಾಯ ಕಣ್ಣಿ ಮಾತನಾಡಿ, ಅಕ್ಷರ ಫೌಂಡೇಶನ್ ಶಿಕ್ಷಣ ಇಲಾಖೆಯ ಜೊತೆ ಸಹಭಾಗಿತ್ವದಲ್ಲಿ ಮಕ್ಕಳ ಕಲಿಕೆಯ ಚಟುವಟಿಕೆಯಲ್ಲಿ ಪೂರಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ. ಶಾಲಾ ಪಠ್ಯಕ್ರಮದ ಜೊತೆಗೆ ಗಣಿತದ ಪ್ರಮುಖ ಪರಿಕಲ್ಪನೆಗಳನ್ನು ಮಕ್ಕಳ ಅಭಿರುಚಿಗೆ ತಕ್ಕಂತೆ ಕಲಿಕೆಯನ್ನು ಆಸಕ್ತಿದಾಯಕವಾಗಿ ಹಾಗೂ ಮೋಜಿನಿಂದ ಕೂಡಿರುವಂತೆ ಈ ಆಪ್ಲಿಕೇಶನ್ ಸಿದ್ಧಪಡಿಸಲಾಗಿದೆ. 400ಕ್ಕೂ ಹೆಚ್ಚು ಸಂವಾದಾತ್ಮಕ ಆಟಗಳನ್ನು ಒಳಗೊಂಡಿದ್ದು, ಎಲ್ಲಾ ಆಟಗಳನ್ನು ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾಗಿದೆ. ಮಕ್ಕಳು ಆಟದ ಮೂಲಕ ಗಣಿತದ ಮೂಲ ಕ್ರಿಯೆಗಳನ್ನು ಕಲಿಯಲು ಸಹಕಾರಿಯಾಗಿದೆ ಎಂದರು. ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ
ಹರಪನಹಳ್ಳಿಯ 72 ಹಳ್ಳಿಗಳಲ್ಲಿ ಜೀವಜಲಕ್ಕೆ ಹಾಹಾಕಾರ