ಕಾರಟಗಿ:
ಪಟ್ಟಣದ ಆರಾಧ್ಯ ದೈವ ಶ್ರೀಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ರೈತರಿಂದ ಮಂಗಳವಾರ ಎತ್ತುಗಳಿಂದ ಕಲ್ಲು ಭಾರ ಎಳೆಯುವ ಸ್ಪರ್ಧೆ ನಡೆಯಿತು. ಇದನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎತ್ತುಗಳ ತಾಕತ್ತು ಕಣ್ತುಂಬಿಕೊಂಡರು.ಇಲ್ಲಿನ ಕೆಪಿಎಸ್ನ ಶ್ರೀಸಿದ್ದೇಶ್ವರ ರಂಗಮಂದಿರದ ಮುಂದಿನ ಮೈದಾನದಲ್ಲಿ ನಡೆದ ಸ್ಪರ್ಧೆಗೆ ರೈತ ಸಂಘಟನೆ ಮುಖಂಡರು, ರೈತರು, ಗಣ್ಯರು ಚಾಲನೆ ನೀಡಲಾಯಿತು. ಪಟ್ಟಣದ ರೈತರಿಗೆ ಮಾತ್ರ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ೧೨ ಜೋಡು ಎತ್ತುಗಳು ಪಾಲ್ಗೊಂಡಿದ್ದವು.
ರೈತ ಸಂಘದ ಮರಿಯಪ್ಪ ಸಾಲೋಣಿ ಮಾತನಾಡಿ, ಗ್ರಾಮೀಣ ಕ್ರೀಡೆ ಹಾಗೂ ಸಂಪ್ರದಾಯವನ್ನು ಉಳಿಸಿಕೊಳ್ಳಲು ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವೂ ಅಡಗಿದೆ. ಈ ಬಾರಿ ಪಟ್ಟಣದ ರೈತರಿಗೆ ಸ್ಪರ್ಧೆಯನ್ನು ಸೀಮಿತಗೊಳಿಸಿದ್ದು ಮುಂದಿನ ವರ್ಷದಿಂದ ತಾಲೂಕಿನ ರೈತರು ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು.ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಈಗಲೂ ಜೀವಂತವಾಗಿದ್ದು ಉಳಿಸಿ-ಬೆಳೆಸಬೇಕಿದೆ. ರಾಜ್ಯದ ಕೆಲವೆಡೆ ಹೋರಿಗಳನ್ನು ಕೃಷಿ ಚಟುವಟಿಕೆಗೆ ಬಳಸದೆ ಸ್ಪರ್ಧೆಗೆ ಸಿದ್ಧಗೊಳಿಸುತ್ತಾರೆ. ಆದರೆ, ನಮ್ಮ ರೈತರು ಕೃಷಿ ಚಟುವಟಿಕೆ ಮಾಡುವ ಎತ್ತುಗಳನ್ನೆ ಸ್ಪರ್ಧೆ ಕರೆತಂದಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆ ಏರ್ಪಡಿಸಿ ಸಹಾಯ-ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ವಿಜೇತ ಎತ್ತುಗಳಿಗೆ ಪ್ರಥಮ ಬಹುಮಾನ ೫ ತೊಲೆ ಬೆಳ್ಳಿ ಕಡಗ ಮತ್ತು ಎತ್ತುಗಳಿಗೆ ಗೆಜ್ಜೆ, ಕಡಗ, ದ್ವಿತೀಯ ಬಹಯಮಾನ ೩ ತೊಲೆ ಬೆಳ್ಳಿ ಕಡಗ ಮತ್ತು ಎತ್ತುಗಳಿಗೆ ಹಣೆ ಕಟ್ಟು, ತೃತೀಯ ಬಹುಮಾನ ೨ ತೊಲೆ ಬೆಳ್ಳಿ ಕಡಗ ಹಾಗೂ ಎತ್ತಿಗೆ ಹಣೆಪಟ್ಟಿ ಘೋಷಿಸಿದರು.ರೈತ ರಮೇಶ ಬೆಳಗೊಂಡ ಅವರ ಎತ್ತು ಕಲ್ಲುಬಂಡೆ ಭಾರ ಎಳೆದು ಪ್ರಥಮ ಸ್ಥಾನ ಪಡೆದು ೫ ತೊಲೆ ಬೆಳ್ಳಿ ಕಡಗ ಹಾಗೂ ಹಣೆಪಟ್ಟಿ, ಶ್ರೀನಿವಾಸ ದಾಸರ ಎತ್ತು ದ್ವಿತೀಯ ಸ್ಥಾನ ಪಡೆದರೆ, ಹೊಸ್ಕೇರಪ್ಪ ಹಳೇಮನಿ ಎತ್ತು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟವು. ಬಹುಮಾನವನ್ನು ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಹಾಗೂ ಗಣ್ಯರು ವಿತರಿಸಿದರು.
ಈ ವೇಳೆ ಉದ್ಯಮಿ ಗುರುರಾಜ ಶ್ರೇಷ್ಠಿ, ಉಮೇಶ ಚಿನಿವಾಲ, ವೀರೇಶ ಬೇವಿನಾಳ, ವೀರೇಶ ಮುದುಗಲ್, ಚಂದ್ರಶೇಖರ ಆನೆಹೊಸೂರು, ಶರಣಪ್ಪ ಪರಕಿ, ಪ್ರಭುರಾಜ ಬೂದಿ, ರೈತ ಸಂಘದ ನಾರಾಯಣ ಈಡಿಗೇರ, ಶರಣೆಗೌಡ ಯರಡೊಣಿ, ರಮೇಶ ಭಂಗಿ, ನಾಗಭೂಷಣ ಸಜ್ಜನ, ವಿರೂಪಣ್ಣ ಮೂಲಿಮನಿ, ಪರಸಪ್ಪ ಮಡಿವಾಳ, ಶರಣಪ್ಪ ಕುರಿ, ಅಯ್ಯಪ್ಪ ಸುದ್ದಿ ಇದ್ದರು.