ಕನ್ನಡಪ್ರಭವಾರ್ತೆ ಬೇಲೂರು
ಹಾಡುಹಗಲೇ ಪಟ್ಟಣದ ಹೊರವಲಯದ ಕಡೇಗರ್ಜೆ ಗ್ರಾಮದ ಮನೆಯೊಂದರ ಗೇಟ್ ಲಾಕ್ ಒಡೆಯುವ ಮೂಲಕ ಕಾಂಪೌಂಡ್ ಒಳ ಪ್ರವೇಶಿಸಿ ಕೊಠಡಿಯೊಳಗಿದ್ದ ಬೆಲೆ ಬಾಳುವ ಪಾತ್ರೆ ಹಾಗೂ ಇತರೆ ಕಬ್ಬಿಣದ ವಸ್ತುಗಳನ್ನು ಚಿಂದಿ ಆಯುವ ಇಬ್ಬರು ಯುವತಿಯರು ದೋಚಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತಾಲೂಕಿನ ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಗರ್ಜೆ ಗ್ರಾಮದ ಸಂದೀಪ್ ಎಂಬುವವರ ಮನೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾ ಪರಿಶೀಲಿಸಿದ ನಂತರ ಪ್ರಕರಣ ದೃಢವಾಗಿ ಬುಧವಾರ ಬೆಳಕಿಗೆ ಬಂದಿದೆ. ಹಾಡುಹಗಲೇ ಸುತ್ತಮುತ್ತಲಿನ ಜನ ಸಾಮಾನ್ಯರು ತಿರುಗಾಡುತ್ತಿರುವಾಗಲೇ ನಡೆದಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.
ಸೋಮವಾರ ಕೊಠಡಿಯಲ್ಲಿ ಪಾತ್ರೆಯನ್ನು ತರಲು ಹೋದಾಗ ಅಲ್ಲಿ ಯಾವುದೇ ವಸ್ತುಗಳು ಇಲ್ಲದೆ ಇರುವುದರಿಂದ ಅನುಮಾನಪಟ್ಟ ಮನೆಯವರು ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಆಗಲೇ ಅವರಿಗೆ ಇಬ್ಬರು ಯುವತಿಯರು ಮನೆಯೊಳಗೆ ಪ್ರವೇಶಿಸಿ ದೋಚಿರುವ ಘಟನೆ ಖಚಿತವಾಗಿದೆ.ಮನೆಯ ಮಾಲೀಕರಾದ ಸಂದೀಪ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪರಿಚಿತ ಯಾವುದೇ ವ್ಯಕ್ತಿಗಳನ್ನು ಮನೆಯ ಹತ್ತಿರ ಸುಳಿಯಲು ಬಿಡುವುದೇ ಕಷ್ಟ, ಸಾರ್ವಜನಿಕರ ಮೇಲ್ನೋಟಕ್ಕೆ ತನ್ನ ಹೊಟ್ಟೆಪಾಡಿಗಾಗಿ ರಸ್ತೆ ಹಾಗೂ ಮನೆಯ ಅಕ್ಕ ಪಕ್ಕದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿ ಹಾಗೂ ಇತ್ಯಾದಿ ವಸ್ತುಗಳನ್ನು ಆಯ್ದು ತಮ್ಮ ಪಾಡಿಗೆ ಹೋಗುತ್ತಾರೆ ಎಂಬುದು ಜನ ಸಾಮಾನ್ಯರ ನಂಬಿಕೆಯಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಇಂತಹ ಕೆಲವರು ಚಿಂದಿ ಆಯುವ ನೆಪದಲ್ಲಿ ದುರ್ಬುದ್ಧಿಯನ್ನು ಪ್ರದರ್ಶಿಸಿ ಇತರರಿಗೂ ಕೆಡಕು ಉಂಟು ಮಾಡುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಶನಿವಾರ ನಮ್ಮ ಮನೆಯ ಹಿಂಬದಿಯಲ್ಲಿದ್ದ ಗೇಟ್ ಅನ್ನು ತೆಗೆದು ಕಾಂಪೌಂಡಿನ ಒಳ ಪ್ರವೇಶಿಸಿದ ಚಿಂದಿ ಆಯುವ ಇಬ್ಬರು ಮಹಿಳೆಯರು ಸುಮಾರು ಹತ್ತಾರು ಸಾವಿರ ಬೆಲೆಬಾಳುವ ಸಿಲ್ವರ್ ಮತ್ತು ತಾಮ್ರದ ಪಾತ್ರೆಗಳನ್ನು ಹಾಗೂ ಇತರೆ ಕಬ್ಬಿಣದ ವಸ್ತುಗಳನ್ನು ದೋಚಿದ್ದಾರೆ. ಅಲ್ಲದೆ ಪಕ್ಕದ ಮನೆಯ ಕಾಂಪೌಂಡಿನ ಒಳಗೆ ಪ್ರವೇಶಿಸಿ ಅಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಅಷ್ಟರಲ್ಲಾಗಲೇ ಮನೆಯವರು ಬಂದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಅವರ ಮುಂದಿನ ದಿನದ ಸಂಚು ದೊಡ್ಡ ಮಟ್ಟಿಗೆ ಇರಬಹುದಾಗಿದೆ. ಮುಂದುವರೆದ ಭಾಗದಂತೆ ಬೇಲೂರು ಪಟ್ಟಣದ ಅಂಬೇಡ್ಕರ್ ನಗರ ಹಾಗೂ ಚಿನ್ನೇನಹಳ್ಳಿ ರಸ್ತೆಯಲ್ಲಿರುವ ಕೇಶವ್ ಮನೆಯಲ್ಲೂ ಕಳ್ಳತನ ನಡೆದಿದೆ. ಎಲ್ಲರೂ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಜಾಗೃತರಾಗಬೇಕು ಜೊತೆಗೆ ಪೊಲೀಸ್ ಇಲಾಖೆಯು ಈ ಬಗ್ಗೆ ಅಗತ್ಯ ಕಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.