ಬೆಂಗಳೂರು : ಹೆದ್ದಾರಿ ನಿರ್ಮಾಣಕ್ಕೆ ತಮ್ಮ ತೋಟದಲ್ಲಿ ತೆರವುಗೊಳಿಸಿದ್ದ ಶ್ರೀಗಂಧದ ಮರಗಳಿಗೆ ಪರಿಹಾರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸೌಧ ಹೊರಾವರಣದಲ್ಲಿರುವ ಶ್ರೀಗಂಧದ ಮರದ ಕೊಂಬೆ ಕಡಿದು ಮಂಗಳವಾರ ರಾಜ್ಯ ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್.ವಿಶುಕುಮಾರ್ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ವಿಧಾನಸೌಧ ಪಶ್ಚಿಮ ಪ್ರವೇಶ ದ್ವಾರ ಸಮೀಪದಲ್ಲಿ ಕಡಿದಿದ್ದಾರೆ
ವಿಧಾನಸೌಧ ಪಶ್ಚಿಮ ಪ್ರವೇಶ ದ್ವಾರ ಸಮೀಪದಲ್ಲಿದ್ದ ಶ್ರೀಗಂಧದ ಮರದ ಕೊಂಬೆಯನ್ನು ಮಧ್ಯಾಹ್ನ 12.30ರ ಸುಮಾರಿಗೆ ವಿಶುಕುಮಾರ್ ಕಡಿದಿದ್ದಾರೆ. ಕೂಡಲೇ ಅವರನ್ನು ಭದ್ರತೆಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆತಂದಿದ್ದಾರೆ. ನಂತರ ಅವರ ವಿರುದ್ಧ ಅರಣ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ ವಿಧಾನಸೌಧ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿ ವಿಶುಕುಮಾರ್ ಅವರನ್ನು ಕಳುಹಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಲುವಾಗಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ವಿಶುಕುಮಾರ್ ಸೇರಿ 21 ರೈತರಿಗೆ ಸೇರಿದ 3.55 ಎಕರೆ ಜಾಗದಲ್ಲಿ 3 ಸಾವಿರಕ್ಕೂ ಅಧಿಕ ಶ್ರೀಗಂಧ ಮರಗಳನ್ನು ತೆರವುಗೊಳಿಸಲಾಗಿತ್ತು. ಈ ಮರಗಳಿಗೆ ಪರಿಹಾರ ಕೋರಿ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದರು. ಆದರೆ ಶ್ರೀಗಂಧ ಮರಗಳ ತಪ್ಪು ಲೆಕ್ಕ ನೀಡಿ ವಂಚಿಸಿದ್ದಾರೆಂದು ವಿಶುಕುಮಾರ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯಲ್ಲಿದ್ದ ಶ್ರೀಗಂಧ ಮರಗಳಿಗೆ 150 ಕೋಟಿ ರು. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಪತ್ರ ಬರೆದಿದ್ದರು. ಅಲ್ಲದೆ, ಪರಿಹಾರ ವಿತರಣೆಗೆ ನ್ಯಾಯಾಲಯ ಸಹ ಆದೇಶಿಸಿದೆ. ಹೀಗಿದ್ದರೂ ಜಮೀನಿನಲ್ಲಿ 3 ಸಾವಿರ ಮರಗಳ ಬದಲು 850 ಗಿಡಗಳಿದ್ದವು ಎಂದು ತಪ್ಪು ಲೆಕ್ಕ ನೀಡಿ ಕೆಲ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗಿದೆ. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವಿಶುಕುಮಾರ್ ಅಲವತ್ತುಕೊಂಡಿದ್ದಾರೆ.
ಮರಕಡಿದು ನೋವು ತೋಡಿಕೊಂಡಿದ್ದೇವೆ
ನಮ್ಮಜಮೀನಿನಲ್ಲಿ ಬೆಳೆಸಿದ್ದ ಶ್ರೀಗಂಧ ಮರಗಳನ್ನು ಹೆದ್ದಾರಿ ಸಲುವಾಗಿ ಕಡಿದ ಸರ್ಕಾರ ಪರಿಹಾರ ಕೊಟ್ಟಿಲ್ಲ. ಈಗ ಸರ್ಕಾರದ ಜಮೀನಿನಲ್ಲಿ ಮರ ಕಡಿದು ನೋವು ತೋಡಿಕೊಂಡಿದ್ದೇವೆ. ಈಗಲಾದರೂ ಪರಿಹಾರ ಕೊಡಲಿ.
-ಟಿ.ಎನ್.ವಿಶುಕುಮಾರ್, ಅಧ್ಯಕ್ಷ, ಶ್ರೀಗಂಧ ರಕ್ಷಣಾ ವೇದಿಕೆ
