ರಾಣಿಬೆನ್ನೂರು: ಕೇಂದ್ರ ಲೋಕಸೇವಾ ಆಯೋಗವು 2024ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಗರದ ಬಸ್ ನಿರ್ವಾಹಕನ ಮಗನೊಬ್ಬ 588ನೇ ರ್ಯಾಂಕ್ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.ಇಲ್ಲಿಯ ಗಣೇಶ ನಗರದ ಅಬುಸಲಿಯಾಖಾನ ಕುಲಕರ್ಣಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಿಟ್ಟಿಸಿಕೊಂಡು ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.
ಅಬುಸಲಿಯಾಖಾನ ತಂದೆ ಬಸ್ ನಿರ್ವಾಹಕರಾಗಿ ಕೆಲಸ ನಿರ್ವಹಿಸಿ ನಿಧನರಾಗಿದ್ದಾರೆ. ಅಬುಸಲಿಯಾಖಾನ ಅವರು ತಾಲೂಕಿನ ಕೂಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದು, 6ರಿಂದ 10ನೇ ತರಗತಿ ವರೆಗೆ ತಾಲೂಕಿನ ಮಾಕನೂರು ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
ನಗರದ ಆರ್ಟಿಇಎಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಕಲಿತು, ಶಿವಮೊಗ್ಗದಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದುಕೊಂಡಿದ್ದಾರೆ. ನಂತರ ದೆಹಲಿಯಲ್ಲಿ ಸತತವಾಗಿ 3 ವರ್ಷಗಳ ಕಾಲ ತರಬೇತಿ ಪಡೆಯುವ ಮೂಲಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ. ಅಬು ಅವರ ಸಹೋದರ ಅಬ್ರಹಾರ ಕುಲಕರ್ಣಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಬು ಅವರು ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮದ ಫಲವಾಗಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸಂಬಂಧಿ ಸುಹೇಲ್ ಪಾಟೀಲ.
ಇಂದಿನಿಂದ ಯಲವಿಗಿ ಜಾತ್ರಾ ಮಹೋತ್ಸವ
ಸವಣೂರು: ತಾಲೂಕಿನ ಯಲವಿಗಿ ಗ್ರಾಮದಲ್ಲಿ ಶ್ರೀನಂದಿ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 25ರಿಂದ ಮೇ 1ರ ವರೆಗೆ ವಿವಿಧ ಧಾರ್ಮಿಕ ಕೈಂಕರ್ಯದೊಂದಿಗೆ ರಥೋತ್ಸವ ಜರುಗಲಿದೆ.
ಏ. 25ರಂದು ಗ್ರಾಮ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ. ಏ. 26ರಂದು ಪ್ರಾಥಃಕಾಲ ವಿಶೇಷ ಪೂಜೆ, ಹೋಮ, ಹವನ, ರಥ ಶುದ್ದಿಕರಣ, ಕಳಸಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಲಿದೆ.ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು.
ಏ. 27 ಹಾಗೂ 28ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಏ. 29ರಂದು ಪ್ರಾಥಃಕಾಲ ಶ್ರೀನಂದಿ ಬಸವಣ್ಣ ದೇವರಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ.
ಏ. 30ರಂದು ಮಧ್ಯಾಹ್ನ 12.12ಕ್ಕೆ ಶ್ರೀನಂದಿ ಬಸವಣ್ಣ ದೇವಸ್ಥಾನ ಆವರಣದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ಜರುಗಲಿದೆ. ಸಂಜೆ 5 ಗಂಟೆಗೆ ರಥೋತ್ಸವ ಜರುಗುವುದು. ಮೇ 1ರಂದು ಸಂಜೆ ಕಡುಬಿನ ಕಾಳಗ. ನಂತರ, ಸವಾಲ್- ಜವಾಬ್ ಭಜನಾ ಸ್ಪರ್ಧೆ. ಮೇ 2ರಿಂದ ಮೇ 4ರ ವರೆಗೆ ಜಂಗೀ ಬಯಲು ಕುಸ್ತಿ ಆಯೋಜಿಸಲಾಗಿದೆ.