ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ಗಡಿಯಲಿದ್ದು ಅನೇಕ ವರ್ಷದಿಂದ ಈ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೇ ಪರದಾಟ ನಡೆಯುವಂತಾಗಿತ್ತು. ಬೆಳ್ಳಿಬಟ್ಟಲು ಗ್ರಾಮದಿಂದ ಒಂದುವರೆ ಕಿಮೀ ದೂರ ಚಿತ್ರದುರ್ಗ ಪಾವಗಡ ರಸ್ತೆ ಮಾರ್ಗದ ಗೇಟ್ಗೆ ಆಗಮಿಸಿ ಬೇರೆಡೆ ಹೋಗುವ ಬಸ್ಗಳಲ್ಲಿ ತೆರಳುತ್ತಿದ್ದರು.
ಬೆಳ್ಳಿಬಟ್ಟಲು ಗ್ರಾಮದ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ಹಾಗೂ ರಂಗಸಮುದ್ರ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಇತ್ತೀಚೆಗೆ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರನ್ನು ಭೇಟಿಯಾಗಿ ಬೆಂಗಳೂರು ಪಾವಗಡ ಮಾರ್ಗ ಸೇರಿ ಬೆಳ್ಳಿಬಟ್ಟಲು ಗ್ರಾಮದಲ್ಲಿ ರಾತ್ರಿ ವಸ್ತಿ ಆಗುವಂತೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಮನವಿಗೆ ಸ್ವಂದಿಸಿದ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ್ ಸರ್ಕಾರಿ ಬಸ್ ಸೇವೆ ಆರಂಭಕ್ಕೆ ಆದೇಶ ನೀಡಿದ್ದು, ಬೆಳಿಗ್ಗೆ 5ಗಂಟೆಗೆ ಬೆಳ್ಳಿಬಟ್ಟಲು ಗ್ರಾಮದಿಂದ ಹೊರಟು, ಪಾವಗಡದ ಮೂಲಕ ಬೆಂಗಳೂರು ತಲುಪಿ ರಾತ್ರಿ 9ಗಂಟೆಗೆ ಮತ್ತೆ ಇದೇ ರಸ್ತೆ ಮೂಲಕ ಬೆಳ್ಳಿ ಬಟ್ಟಲು ಗ್ರಾಮಕ್ಕೆ ಸೇರಿ ಇಲ್ಲಿಯೇ ರಾತ್ರಿ ನಿಲುಗಡೆಯಾಗಲಿದೆ. ಪಾವಗಡ ಬೆಂಗಳೂರು ಇತರೆ ನಗರ ಪ್ರದೇಶಗಳಿಗೆ ಹೋಗುವ ರೈತರು, ನೌಕರರು ಹೂವಿನ ವ್ಯಾಪಾರಿಗಳು ಸರ್ಕಾರಿ ಬಸ್ ಸೌಲಭ್ಯ ಪಡೆದುಕೊಳ್ಳುವಂತೆ ಮುಖಂಡರಾದ ಚಂದ್ರಶೇಖರರೆಡ್ಡಿ ಇತರೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದೇ ವೇಳೆ ಶಾಸಕ ಎಚ್.ವಿ.ವೆಂಕಟೇಶ್, ಮುಖಂಡ ಚಂದ್ರಶೇಖರರೆಡ್ಡಿ ಹಾಗೂ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.