ಕುಂದಾಪುರ: ಬುಧವಾರ ಮಧ್ಯಾಹ್ನ ತ್ರಾಸಿ- ಮರವಂತೆ ಕಡಲ ಕಿನಾರೆಯ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಬಸ್ಸು ಹಾಗೂ ಲಾರಿಗಳ ಡಿಕ್ಕಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಾಳುಗಳಾದ ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ, ಉಪನ್ಯಾಸಕಿಯ ಮಗುವಿಗೆ ಹಾಗೂ ಇತರರಿಗೆ ಗಾಯಗಳುಂಟಾಗಿದೆ. ಕೈಕಾಲು, ತಲೆ, ಭುಜಕ್ಕೆ ತೀವ್ರವಾದ ಗಾಯಗಳಾದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಮಗುವಿಗೆ ಸ್ಥಳೀಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣ-ಪುಟ್ಟ ಗಾಯಗಳಾದವರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ.
ಎಸ್ಪಿ ಭೇಟಿ: ಅಪಘಾತದ ಮಾಹಿತಿ ಪಡೆದುಕೊಂಡ ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಘಟನಾಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಭೇಟಿ ನೀಡಿದ್ದಾರೆ.ಗಾಯಾಳುಗಳಿಗೆ ಸ್ಥೈರ್ಯ ತುಂಬಿದ ಶಾಸಕ ಗಂಟಿಹೊಳೆ: ಮದುವೆ ಸಮಾರಂಭಕ್ಕೆ ಭೇಟಿ ನೀಡಿ ಬೈಂದೂರಿನತ್ತ ತೆರಳುತ್ತಿದ್ದ ಶಾಸಕ ಗುರುರಾಜ್ ಗಂಟಿಹೊಳೆ ಅವರು, ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ದುರ್ಘಟನಾ ಸ್ಥಳಕ್ಕೆ ತಲುಪಿದ್ದರು. ನಜ್ಜುಗುಜ್ಜಾದ ಬಸ್ ನಡುವೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೊರೆ ಇಡುತ್ತಿದ್ದವರ ರಕ್ಷಣೆಗೆ ಸ್ವತಃ ಧಾವಿಸಿದ ಶಾಸಕ ಗಂಟಿಹೊಳೆ ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಮತ್ತು ಮೃತರನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ತೋರಿದ್ದಾರೆ. ಬಳಿಕ ಕುಂದಾಪುರದ ಆಸ್ಪತ್ರೆಗೆ ಬಂದು ಪ್ರತೀ ಗಾಯಾಳುಗಳನ್ನು ಕೂಡ ವೈಯಕ್ತಿಕ ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿ ಮಾನಸಿಕ ಸ್ಥೈರ್ಯವನ್ನು ತುಂಬಿದ್ದಲ್ಲದೇ ತಮ್ಮ ತಂಡದ ಮೂಲಕ ಗಾಯಾಳುಗಳಿಗೆ ಅಗತ್ಯವಾಗಿರುವ ನೆರವು ನೀಡಿದ್ದಾರೆ. ತಾಲೂಕು ಆರೋಗ್ಯ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆಯ ವೈದ್ಯ ತಂಡದೊಂದಿಗೆ ಸಮಾಲೋಚನೆ ನಡೆಸಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಿದ್ದಾರೆ.ಸಂಸದ ಕೋಟ ಭೇಟಿ: ಅಪಘಾತದ ಮಾಹಿತಿ ಪಡೆದುಕೊಂಡ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದು, ಇಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಹಾಗೂ ಪಡೆದುಕೊಳ್ಳುತ್ತಿರುವ ಯಾರಿಗೂ ಪ್ರಾಣಾಪಾಯವಿಲ್ಲವೆಂದು ತಿಳಿಸಿದ್ದಾರೆ. ಘಟನೆ ದುರದೃಷ್ಟಕರವಾಗಿದ್ದು, ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲು ಸಲಹೆ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನೆರವನ್ನು ಅಪೇಕ್ಷಿಸಿದ್ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಅಡುಗೆ ಸಹಾಯಕನಾಗಿ ಬಂದಿದ್ದ ಹೇಮಂತ್ ಬಸ್ಸಿನ ಹಿಂಭಾಗದಲ್ಲಿ ಕುಳಿತಿದ್ದವರು ಅಪಘಾತ ನಡೆಯುವ ಕೆಲವೇ ಕ್ಷಣಗಳ ಮೊದಲು ಸಾಮಾನು ತರಲೆಂದು ಮುಂಭಾಗಕ್ಕೆ ಬಂದವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರವಾಸಕ್ಕೆ ಬರುವುದಿಲ್ಲ ಎಂದು ತೀರ್ಮಾನಿಸಿದ್ದ ನಾನು ಕೊನೆ ಕ್ಷಣದಲ್ಲಿ ಬಸ್ಸು ಏರಿದ್ದೆ. ಹೆಚ್ಚೇನು ಪೆಟ್ಟಾಗಿಲ್ಲವಾದರೂ ಅಪಘಾದ ಭೀಕರತೆ ನನ್ನಿಂದ ದೂರವಾಗಿಲ್ಲ ಎಂದು ಗಾಯಾಳು ವಿದ್ಯಾರ್ಥಿ ವರುಣ್ ಅಪಘಾತದ ಭೀಕರತೆಯನ್ನು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.