ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್

KannadaprabhaNewsNetwork | Updated : Feb 10 2025, 12:32 PM IST

ಸಾರಾಂಶ

ಕುಂಭಮೇಳಕ್ಕೆ ಹುಬ್ಬಳ್ಳಿ ವಿಭಾಗದಿಂದ 3 ಸ್ಲೀಪರ್ ಬಸ್‌ಗಳು 90 ಯಾತ್ರಿಗಳೊಂದಿಗೆ ಶನಿವಾರ ಪ್ರಯಾಗ ರಾಜ್ ಕಡೆಗೆ ಪ್ರಯಾಣ ಬೆಳೆಸಿದವು. 

ಹುಬ್ಬಳ್ಳಿ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವ ಯಾತ್ರಿಗಳ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಾಸಂಗಿಕ ಕರಾರಿನ ಮೇರೆಗೆ ವಿವಿಧ ಮಾದರಿಯ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಕುಂಭಮೇಳಕ್ಕೆ ಹುಬ್ಬಳ್ಳಿ ವಿಭಾಗದಿಂದ 3 ಸ್ಲೀಪರ್ ಬಸ್‌ಗಳು 90 ಯಾತ್ರಿಗಳೊಂದಿಗೆ ಶನಿವಾರ ಪ್ರಯಾಗ ರಾಜ್ ಕಡೆಗೆ ಪ್ರಯಾಣ ಬೆಳೆಸಿದವು. ಒಟ್ಟು 10 ದಿನಗಳ ಪ್ರವಾಸವಾಗಿದ್ದು ಯಾತ್ರಿಗಳು ಮಾರ್ಗ ಮಧ್ಯದಲ್ಲಿ ನಾಸಿಕ್, ಓಂಕಾರೇಶ್ವರ, ಉಜ್ಜಯಿನಿ, ಚಿತ್ರಕೂಟ, ಅಯೋಧ್ಯಾ, ಕಾಶಿ, ಔರಂಗಾಬಾದ್, ಅಕ್ಕಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟು ಅಂದಾಜು 4,500 ಕಿಮೀ ಪ್ರಯಾಣ ಮಾಡಲಿದ್ದಾರೆ.

ಈ ವೇಳೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಇಂದು ಮೊದಲ ಹಂತದ 3 ನಾನ್ ಎಸಿ ಸ್ಲೀಪರ್ ಬಸ್‌ಗಳು ಪ್ರವಾಸ ಆರಂಭಿಸಿವೆ. ತೊಂದರೆ ಮುಕ್ತ ಸುಗಮ ಪ್ರಯಾಣಕ್ಕಾಗಿ ಪ್ರತಿ ಬಸ್ಸಿಗೆ ಇಬ್ಬರು ಹಿರಿಯ ಚಾಲಕರನ್ನು ಹಾಗೂ ನಿರ್ವಹಣೆಗಾಗಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಮಹಾಕುಂಭ ಮೇಳಕ್ಕೆ ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ತೆರಳುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಪ್ರಾಸಂಗಿಕ ಕರಾರಿನ ಮೇರೆಗೆ ಮಲ್ಟಿ ಆ್ಯಕ್ಸಲ್ ಎಸಿ ವೋಲ್ವೊ, ನಾನ್ ಎಸಿ, ಪಲ್ಲಕ್ಕಿ, ಸ್ಲೀಪರ್ ಮುಂತಾದ ಐಶಾರಾಮಿ ಹಾಗೂ ವೇಗದೂತ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳ ಪ್ರವಾಸಕ್ಕಾಗಿ ವಿಜಯಪುರ ಜಿಲ್ಲೆಯ ತಾಳಿಕೋಟೆ ಸೇರಿದಂತೆ ವಿವಿಧ ಸ್ಥಳಗಳಿಂದ ವೋಲ್ವೊ, ಪಲ್ಲಕ್ಕಿ ಮತ್ತಿತರ ವಿವಿಧ ಮಾದರಿಯ ಬಸ್‌ಗಳಿಗೆ ಬೇಡಿಕೆ ಬರುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಡಿಪೋ ಮ್ಯಾನೇಜರ್ (77609 91674) ಅಥವಾ ಗೋಕುಲ ರಸ್ತೆ ಬಸ್ ನಿಲ್ದಾಣಾಧಿಕಾರಿ (77609 91682) ಅ‍ವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಈ ವೇಳೆ ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆಣ್ಣವರ, ಸಹಾಯಕ ಲೆಕ್ಕಾಧಿಕಾರಿ ಸುನಿಲ ವಾಡೇಕರ, ಡಿಪೊ ಮ್ಯಾನೇಜರ್ ದೀಪಕ ಜಾಧವ್, ವಿರೂಪಾಕ್ಷಿ ಹಟ್ಟಿ, ದಾವಲಸಾಬ ಬೂದಿಹಾಳ ಮತ್ತು ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

Share this article